
ಕೋಲಾರ (ನ.15): ಸಿದ್ದರಾಮಯ್ಯ ಮಾಜಿ ಸಿಎಂ ಆಗಿದ್ದರೂ, ಮುಂದಿನ ಚುನಾವಣೆಗೆ ಕ್ಷೇತ್ರ ಹುಡುಕಾಟದಲ್ಲಿ ತೊಡಗಿರುವುದು ನಿಜಕ್ಕೂ ಶೋಚನೀಯ. ಕೋಲಾರಕ್ಕೆ ಒಂದಲ್ಲ ಐವತ್ತು ಬಾರಿ ಬೇಕಾದರೂ ಬರಲಿ. ಅವರನ್ನು ನೂರಕ್ಕೆ ನೂರು ಸೋಲಿಸಿ ಮನೆಗೆ ಕಳುಹಿಸುವುದು ಗ್ಯಾರಂಟಿ ಎಂದು ಸಂಸದ ಎಸ್.ಮುನಿಸ್ವಾಮಿ ಘೋಷಿಸಿದರು.
ನಗರದ ರಂಗ ಮಂದಿರದಲ್ಲಿ 2022-23ನೇ ಸಾಲಿನ ವಿವೇಕ ಯೋಜನೆಯಡಿ ನೂತನ ಶಾಲಾ (School) ಕೊಠಡಿಗಳ ಶಂಕುಸ್ಥಾಪನೆ ಹಾಗೂ ಮಕ್ಕಳ ದಿನಾಚರಣೆ ಕಾಯಕ್ರಮದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ (Siddaramaiah) ಕೋಲಾರ ಭೇಟಿ ವಿಷಯವಾಗಿ ನಗರದಲ್ಲಿ ಪ್ರತಿಕ್ರಿಯಿಸಿ ತಮ್ಮ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲೇ ಸಿದ್ದರಾಮಯ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಬಾದಾಮಿ ಕ್ಷೇತ್ರದಲ್ಲಿ 1300 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿಯಾಗಿ ಸ್ವಕ್ಷೇತ್ರದಲ್ಲಿ ಹಾಗೂ ಬಾದಾಮಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಇದರಿಂದಲೇ ಅಲ್ಲಿನ ಜನಕ್ಕೆ ಹೆದರಿ ಹೊಸ ಕ್ಷೇತ್ರ ಹುಡುಕುತ್ತಿದ್ದಾರೆ ಎಂದು ಛೇಡಿಸಿದರು.
ಸೋಲಿನ ಭೀತಿಯಿಂದ ಆಹ್ವಾನ
ಕೋಲಾರ ಜಿಲ್ಲೆಯ ಕೆಲ ನಾಯಕರು ಮಾತ್ರ ಸೋಲುವ ಭಯದಿಂದ ಸಿದ್ದರಾಮಯ್ಯರನ್ನು ಕೋಲಾರಕ್ಕೆ ಕರೆಯುತ್ತಿದ್ದಾರೆ. ಭಾನುವಾರ ಸಿದ್ದರಾಮಯ್ಯ ಕೋಲಾರ ಕ್ಷೇತ್ರಕ್ಕೆ ಬಂದಾಗ ಘಟಬಂದನ್ ಬಿಟ್ಟರೆ ಅನೇಕ ನಾಯಕರೇ ಬಂದಿರಲಿಲ್ಲ. ಕೆ.ಎಚ್.ಮುನಿಯಪ್ಪ, ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಕಲಾ ಹಾಗೂ ಮುಳಬಾಗಿಲಿನ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸಿದ್ದರಾಮಯ್ಯ ಜೊತೆ ಬಂದಿಲ್ಲ ಎಂದರು.
ಘಟಬಂಧನ್ ನಾಯಕರು ಇಷ್ಟುದಿನ ಕೊತ್ತೂರು ಮಂಜುನಾಥ್ಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿಕೊಂಡು ಅವರ ನೆರವು ಪಡೆಯುತ್ತಲೇ ರಾಜಕಾರಣ ಮಾಡಿ ಈಗ ವಂಚಿಸಿದ್ದಾರೆ. ಆದ್ದರಿಂದಲೇ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಅವರು ಕಾಣಲಿಲ್ಲ, ಸೋಲುವ ಭಯದಿಂದ ಯಾರೋ ಕೆಲವರು ಮಾತ್ರ ಸಿದ್ದರಾಮಯ್ಯ ಜೊತೆ ಹೆಜ್ಜೆ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಭಿವೃದ್ಧಿ ಮಾಡಿದ್ದು ಬಿಜೆಪಿ
ವೇಮಗಲ್ನ ಸೀತಿ ಬೆಟ್ಟಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಅದನ್ನು ಅಭಿವೃದ್ಧಿಪಡಿಸಿದ್ದು ನಮ್ಮ ಸರ್ಕಾರ. ನರಸಾಪುರ ಕೆರೆ ವೀಕ್ಷಣೆ ಮಾಡಿದ್ದಾರೆ. ಆ ಕೆರೆಯನ್ನೂ ನಾವು ಅಭಿವೃದ್ಧಿ ಪಡಿಸಿದ್ದೇವೆ. ಭಾನುವಾರ ಸಿದ್ದರಾಮಯ್ಯ ಓಡಾಡಿದ್ದ ರಸ್ತೆಗಳೆಲ್ಲಾ ಡೆವಲಪ್ಮೆಂಟ್ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ ಎಂದರು.
ಸಿದ್ದರಾಮಯ್ಯ ಅಹಿಂದ ವಿರೋಧಿ
ಅಹಿಂದ ಹಾಗೂ ದಲಿತ ವಿರೋಧಿ ಯಾರಾದರೂ ಇದ್ದಾರೆ ಅಂದರೆ ಅದು ಸಿದ್ದರಾಮಯ್ಯ ಮಾತ್ರ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ರನ್ನೇ ಸೋಲಿಸಲು ಇವರು ಮಾಡಿದ ತಂತ್ರ ಯಾರಿಗೆ ಗೊತ್ತಿಲ್ಲ, ಇನ್ನು ಅವರದೇ ಕುರುಬ ಸಮುದಾಯದ ಎಂಟಿಬಿ ನಾಗರಾಜ್, ವಿಶ್ವನಾಥ್, ಶಂಕರ್ ಸೇರಿದಂತೆ ಹಲವರನ್ನು ಸಿದ್ದರಾಮಯ್ಯ ಅವರೇ ಸೋಲಿಸಿದ್ದಾರೆ ಎಂದರು.
ಇನ್ನು ಜಾತಿ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಗೆಲ್ಲಲು ಸಾಧ್ಯವಾಗುವುದಿಲ್ಲ. ಕುರುಬರೆಲ್ಲಾ ಸಿದ್ದರಾಮಯ್ಯಗೆ ಮತ ಹಾಕುವುದಿಲ್ಲ. ಕಾಂಗ್ರೆಸ್ ಪಕ್ಷದವರು ವೋಟ್ ಬ್ಯಾಂಕ್ಗೋಸ್ಕರ ಸಮಯಕ್ಕೆ ತಕ್ಕಂತೆ ಮಾತನಾಡುತ್ತಾರೆ. ಹಿಜಾಬ್ ಆಗಬಹುದು, ಟಿಪ್ಪು ಸುಲ್ತಾನ್ ಜಯಂತಿ, ಕೋಲಾರದ ಕ್ಲಾಕ್ ಟವರ ಬಗ್ಗೆ ಏನು ಮಾತಾಡಿದ್ದಾರೆ ಅಂತ ಜನರಿಗೆ ಗೊತ್ತು. ಸಿದ್ದರಾಮಯ್ಯ ದೇಶದ ಪರವಾಗಿ ಇಲ್ಲ. ವೋಟ್ ಬ್ಯಾಂಕ್ಗೋಸ್ಕರ ಸಮಯಕ್ಕೆ ತಕ್ಕಂತೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಮಾಜಿ ಸಿಎಂ ಆಗಿದ್ದರೂ, ಮುಂದಿನ ಚುನಾವಣೆಗೆ ಕ್ಷೇತ್ರ ಹುಡುಕಾಟದಲ್ಲಿ ತೊಡಗಿರುವುದು ನಿಜಕ್ಕೂ ಶೋಚನೀಯ
ಕೋಲಾರಕ್ಕೆ ಒಂದಲ್ಲ ಐವತ್ತು ಬಾರಿ ಬೇಕಾದರೂ ಬರಲಿ. ಅವರನ್ನು ನೂರಕ್ಕೆ ನೂರು ಸೋಲಿಸಿ ಮನೆಗೆ ಕಳುಹಿಸುವುದು ಗ್ಯಾರಂಟಿ
ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲೇ ಸಿದ್ದರಾಮಯ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಬಾದಾಮಿ ಕ್ಷೇತ್ರದಲ್ಲಿ 1300 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.