ಹೋರಾಟಕ್ಕೆ ಮಣಿಯದ ಸರ್ಕಾರ: ತಾಲೂಕಿಗಾಗಿ ಚುನಾವಣೆ ಬಹಿಷ್ಕಾರ..!

By Kannadaprabha NewsFirst Published Dec 7, 2020, 2:10 PM IST
Highlights

ಹೋರಾಟಕ್ಕೆ ಮಣಿಯದ ಕಾರಣ ಈ ನಿರ್ಧಾರಕ್ಕೆ ಬಂದ ಸಾವಳಗಿ ಜನತೆ| ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಪಟ್ಟಣ| ಈ ಭಾಗದ ರಾಜಕೀಯ ನಾಯಕರ ನಿರಾಶಕ್ತಿಯಿಂದ ಸಾವಳಗಿ ಜನತೆಗೆ ಮಲತಾಯಿ ಧೋರಣೆ| 

ಸಾವಳಗಿ(ಡಿ.07): ಸುಮಾರು 50 ವರ್ಷಗಳ ಸಾವಳಗಿ ತಾಲೂಕು ಆಗುವ ಕನಸು ಇನ್ನೂವರೆಗೂ ಈಡೇರಿಲ್ಲ. ಹೀಗಾಗಿ ಮುಂಬರುವ ಗ್ರಾಪಂ ಚುನಾವಣೆ ಸೇರಿದಂತೆ ಮುಂದಿನ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಿ ಸಂಬಂಧಿಸಿ ಜನನಾಯಕರಿಗೆ ಹಾಗೂ ಅಧಿಕಾರಿಗಳಿಗೆ ಬಿಸಿಮುಟ್ಟಿಸಲು ಇಲ್ಲಿಯ ಜನರು ಅಣಿಯಾಗಿದ್ದಾರೆ.

ಸಾವಳಗಿ ಹೋಬಳಿಯಲ್ಲಿ ಒಟ್ಟು 24 ಗ್ರಾಮಗಳು ಒಳಪಡುತ್ತಿದ್ದು ಭೌಗೋಳಿಕವಾಗಿ 109050 ಎಕರೆ ಕ್ಷೇತ್ರವನ್ನು ಹೊಂದಿರುತ್ತದೆ. ಅಲ್ಲದೇ 2011ರ ಜನಗಣತಿ ಪ್ರಕಾರ 96073 ಜನಸಂಖ್ಯೆ ಇದ್ದು, ಸದ್ಯ ಅಂದಾಜು 1 ಲಕ್ಷ ಗಡಿ ದಾಟಿರುತ್ತದೆ. ಪ್ರಸ್ತುತ ಜಮಖಂಡಿ ತಾಲೂಕು ಕೇಂದ್ರದಿಂದ ಸಾವಳಗಿ ವಲಯದ ಗ್ರಾಮಗಳು ಕನಿಷ್ಠ ಅಂತರ 10 ಕಿಮೀ ಹಾಗೂ ಗರಿಷ್ಠ ಅಂತರ 45 ಕಿಮೀವರೆಗೆ ಇರುತ್ತದೆ.

ಗ್ರಾಮದಲ್ಲಿ ಈಗಾಗಲೇ ನಾಡ ಕಚೇರಿ, ಪೊಲೀಸ್‌ ಠಾಣೆ, ರೈತ ಸಂಪರ್ಕ ಕೇಂದ್ರ, ಪಶು ಚಿಕಿತ್ಸಾಲಯ, ಸರ್ಕಾರಿ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ವೇಳೆ ಸಾವಳಗಿ ತಾಲೂಕು ರಚನೆಯಾದಲ್ಲಿ ಹತ್ತಿರದ ಸಾವಳಗಿ ಗ್ರಾಪಂ ವ್ಯಾಪ್ತಿಯ ನಾಕೂರ ಪುನರ್ವಸತಿ ಕೇಂದ್ರದಲ್ಲಿ ಅಂದಾಜು 35 ಕ್ಕಿಂತ ಅಧಿಕ ಬಳಕೆಯಾಗದ ಸರಕಾರಿ ಕಟ್ಟಡಗಳನ್ನು ಬಳಸಬಹುದಾಗಿದೆ.

ಕಾಂಗ್ರೆಸ್‌ನ ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆ

ಇತ್ತೀಚಿಗೆ ಘೋಷಣೆಗೊಂಡ ನೂತನ ತಾಲೂಕುಗಳಲ್ಲಿ ತಾಲೂಕು ಪುನರ್‌ ರಚನಾ ಸಮಿತಿಯಲ್ಲಿ ಶಿಪಾರಸು ಮಾಡದೆ ಇರುವ ಪ್ರದೇಶವನ್ನು ಈ ಹಿಂದಿನ ಸರ್ಕಾರ ತಾಲೂಕನ್ನು ಘೋಷಣೆ ಮಾಡಿರುತ್ತದೆ. ಕೆಲವು ತಾಲೂಕಾಗಳಿಗೆ ಸರಿಯಾದ ಭೌಗೋಳಿಕ ಕ್ಷೇತ್ರವಿಲ್ಲ. ಜನಸಂಖ್ಯೆ ಕೂಡಾ ಸಾವಳಗಿ ಹೋಬಳಿಕ್ಕಿಂತ ಕಡಿಮೆಯಾಗಿದೆ. ಅಲ್ಲದೆ ನೂತನವಾದ ಕೆಲವು ತಾಲೂಕಗಳಲ್ಲಿ ಸರಿಯಾಗಿ 10-15 ಹಳ್ಳಿಗಳಲ್ಲಿರುತ್ತವೆ. 24 ಹಳ್ಳಿಗಳನ್ನು ಒಳಗೊಂಡ ಸಾವಳಗಿ ಹೋಬಳಿಯನ್ನು ತಾಲೂಕು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಈ ಭಾಗದ ರಾಜಕೀಯ ನಾಯಕರ ನಿರಾಶಕ್ತಿಯಿಂದ ಸಾವಳಗಿ ಜನತೆಗೆ ಮಲತಾಯಿ ಧೋರಣೆ ತೋರಿದಂತಾಗಿದೆ. ಇದರಿಂದ ಬೇಸತ್ತ ಗ್ರಾಮದವರು ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಹಾಕಲು ತೀರ್ಮಾನಿಸಿದ್ದಾರೆ. ತಾಲೂಕು ಘೋಷಣೆಯಾಗದಿದ್ದರೆ ಮುಂಬರುವ ಎಲ್ಲ ಮಟ್ಟದ ಚುನಾವಣೆಗಳನ್ನು ಬಹಿಷ್ಕಾರ ಹಾಕುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಚಳವಳಿ, ಹೋರಾಟಕ್ಕೂ ಮಣಿಯದ ಸರ್ಕಾರ ಇನ್ನಾದಾರೂ ಸಾವಳಗಿಯನ್ನು ತಾಲೂಕಾಗಿ ಘೋಷಣೆ ಮಾಡಬೇಕು ಎಂಬುವುದು ಎಲ್ಲರ ಒತ್ತಾಸೆ.

ಗಣ್ಯರ ಊರಿಗೆ ಒಲಿಯದ ತಾಲೂಕು

ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಹಾಗೂ ಇನ್ಪಿ ಅಧ್ಯಕ್ಷೆ ಸುಧಾಮೂರ್ತಿ ಅವರ ಹುಟ್ಟೂರು ಕೂಡಾ ಸಾವಳಗಿಯೇ ಆಗಿದೆ. ಎಲ್ಲ ಅರ್ಹತೆಗಳು ಇದ್ದರೂ ಸಹಿತ, ಓರ್ವ ಮಾಜಿ ಉಪರಾಷ್ಟ್ರಪತಿ ಹುಟ್ಟೂರಿಗೆ ಇನ್ನೂವರೆಗೂ ತಾಲೂಕು ಭಾಗ್ಯ ಒಲಿದು ಬರೆದು ಇರುವುದು ಕೂಡಾ ವಿಪರ್ಯಾಸವೇ ಸರಿ. ಇದೇ ಕಾರಣಕ್ಕೆ ಇಲ್ಲಿಯ ಜನತೆ ಇದೀಗ ಆಕ್ರೋಶಗೊಂಡು ಸಾವಳಗಿ ತಾಲೂಕು ಮಾಡಲೇ ಬೇಕು ಎಂದು ಪಟ್ಟು ಹಿಡಿದು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ.

ಸಾವಳಗಿ ತಾಲೂಕಿಗಾಗಿ ಸದನದಲ್ಲಿ ಧ್ವನಿ ಎತ್ತಿ ಮಾತನಾಡುತ್ತೇನೆ. ಜಮಖಂಡಿ ಜಿಲ್ಲೆ, ಸಾವಳಗಿ ತಾಲೂಕು ಮಾಡಲು ಎಲ್ಲ ರೀತಿಯಿಂದಲೂ ನನ್ನ ಬೆಂಬಲ ಇದೆ ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡ ತಿಳಿಸಿದ್ದಾರೆ.

ಸಾವಳಗಿ ತಾಲೂಕು ಹೋರಾಟ ಐತಿಹಾಸಿಕ ಹೋರಾಟವಾಗಿದ್ದು, ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಮಾನ್ಯ ಮುಖ್ಯಮಂತ್ರಿ ಅವರಲ್ಲಿ ಮುಂಬರುವ ಅಧಿವೇಶನದಲ್ಲಿ ನಾನು ಇದರ ಬಗ್ಗೆ ಧ್ವನಿ ಎತ್ತಲಿದ್ದೇನೆ. ಮುಖ್ಯಮಂತ್ರಿಗಳ ಗಮನಕ್ಕೆ ತರಲು ಶತ ಪ್ರಯತ್ನ ಮಾಡುತ್ತೇನೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದ್ದಾರೆ. 
 

click me!