ಎಲ್‌ ನಿನೋ ಎಫೆಕ್ಟ್, ತುಂಗಭದ್ರಾ ಜಲಾಶಯಕ್ಕೆ ಎಂಟು ದಿನಗಳಿಂದ ಶೂನ್ಯ ನೀರಿನ ಒಳಹರಿವು

Published : Jun 29, 2026, 08:30 AM IST
TB Dam Backwater

ಸಾರಾಂಶ

ಎಲ್‌ ನಿನೋ ಪರಿಣಾಮದಿಂದ ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ತೀವ್ರವಾಗಿ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 52 ಟಿಎಂಸಿ ನೀರಿನ ಕೊರತೆಯಿದ್ದು, ಕಳೆದ 8 ದಿನಗಳಿಂದ ಒಳಹರಿವು ಶೂನ್ಯಕ್ಕೆ ತಲುಪಿದೆ. ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಮನೆಮಾಡಿದ್ದು, ಮುಂಗಾರು ಬೆಳೆಗೆ ನೀರು ಸಿಗುವುದು ಅನುಮಾನವಾಗಿದೆ.

ಎಸ್. ನಾರಾಯಣ್ ಮುನಿರಾಬಾದ್

ಎಲ್‌ ನಿನೋ ತುಂಗಭದ್ರಾ ಜಲಾಶಯದ ಮೇಲೆ ಭಾರಿ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಜೂನ್‌ ತಿಂಗಳಲ್ಲಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳಹರಿವು ಬರಬೇಕಾಗಿದ್ದು, ಎಲ್‌ ನಿನೋ ಪರಿಣಾಮ ಪ್ರಸಕ್ತ ಸಾಲಿನ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಕುಸಿತವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ 52 ಟಿಎಂಸಿಯಷ್ಟು ನೀರಿನ ಕೊರತೆ ಎದ್ದು ಕಾಣುತ್ತಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 62 ಟಿಎಂಸಿಯಷ್ಟು ನೀರು ಶೇಖರಣೆಯಾಗಿತ್ತು. ನೀರಿನ ಒಳ ಹರಿವು 60,000 ಕ್ಯುಸೆಕ್‌ ಇತ್ತು. ಆದರೆ ಈ ವರ್ಷ ಜಲಾಶಯದಲ್ಲಿ 9.5 ಟಿಎಂಸಿಯಷ್ಟು ನೀರು ಮಾತ್ರ ಇದೆ. ಜೂನ್‌ ಮೊದಲ ವಾರವೂ ಇಷ್ಟೇ ನೀರಿತ್ತು. ಜಲಾಶಯದ ನೀರಿನ ಮಟ್ಟ 1688 ಅಡಿ ಇದ್ದು, ಜೂನ್‌ ಕೊನೆಯ ವಾರದಲ್ಲಿ ಸಹ ನೀರಿನ ಮಟ್ಟ ಅಷ್ಟೇ ಇದೆ. 1 ಅಡಿಯೂ ಏರಿಕೆ ಆಗಿಲ್ಲ.

ಶೂನ್ಯಕ್ಕೆ ತಲುಪಿದ ಒಳಹರಿವು

ಕಳೆದ 8 ದಿನಗಳಿಂದ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಅಂದರೆ ಜಲಾಶಯಕ್ಕೆ ಒಂದು ಹನಿ ನೀರು ಹರಿದು ಬರುತ್ತಿಲ್ಲ, ಇದು ಪರಿಸ್ಥಿತಿಯ ಭೀಕರತೆ ತೋರಿಸುತ್ತದೆ. ಈ ಬೆಳವಣಿಗೆ ರೈತರಲ್ಲಿ ಆತಂಕವನ್ನುಂಟು ಮಾಡಿದೆ.

ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಜಲಾಶಯಕ್ಕೆ ಒಳಹರಿವು ಪ್ರಾರಂಭವಾಗುತ್ತದೆ, ಆದರೆ ಪ್ರಸಕ್ತ ಜೂ. 1ರಿಂದ ಜೂ. 20ರ ವರೆಗೆ ಜಲಾಶಯಕ್ಕೆ ಪ್ರತಿನಿತ್ಯ 100ರಿಂದ 500 ಕ್ಯುಸೆಕ್‌ ನೀರು ಮಾತ್ರ ಹರಿದು ಬಂದಿದೆ. ಇದು ಅತ್ಯಂತ ಅಲ್ಪ ಪ್ರಮಾಣದ ಒಳಹರಿವು ಎನ್ನಲಾಗುತ್ತಿದೆ.

ಜಲಾನಯನ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆ ಆಗದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವು ಬರುತ್ತಿಲ್ಲ. ಇದು ಅಚ್ಚುಕಟ್ಟು ಪ್ರದೇಶದ ಅನ್ನದಾತರ ಚಿಂತೆಗೆ ಕಾರಣವಾಗಿದೆ.

ಜಲಾಶಯದಲ್ಲಿ ಕೇವಲ 9.5 ಟಿಎಂಸಿ ನೀರು

ಮುಂಗಾರು ಬೆಳೆಗೆ 120 ಟಿಎಂಸಿ ನೀರು ಬೇಕು. ಅಚ್ಚುಕಟ್ಟು ಪ್ರದೇಶಗಳಾದ ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಅನಂತಪುರ ಕರ್ನೂಲ್, ಕಡಪ ಜಿಲ್ಲೆಗಳ ರೈತರ ಮುಂಗಾರು ಬೆಳೆಗಳಿಗೆ ಸುಮಾರು 120 ಟಿಎಂಸಿ ನೀರು ಅಗತ್ಯವಿರುತ್ತದೆ, ಆದರೆ ಜಲಾಶಯದಲ್ಲಿ ಕೇವಲ 9.5 ಟಿಎಂಸಿ ಇದೆ. ಈ ಬಾರಿ ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರ ಮುಂಗಾರು ಬೆಳೆಗೆ ನೀರು ದೊರೆಯುವುದೇ ಎನ್ನುವ ಪ್ರಶ್ನೆಗೆ ಮಳೆರಾಯನೇ ಉತ್ತರ ನೀಡಬೇಕಾಗಿದೆ.

ಪ್ರಸಕ್ತ ಸಾಲಿನ ತುಂಗಭದ್ರಾ ಜಲಾಶಯದ ಒಳಹರಿವು ಕ್ಷೀಣಿಸಿದ್ದು ಆತಂಕದ ವಿಷಯವಾಗಿದೆ. ಸದ್ಯ ತುಂಗಭದ್ರಾ ಜಲಾಶಯದ ನೀರನ್ನು ಕೇವಲ ಕುಡಿಯಲು ಮಾತ್ರ ಉಪಯೋಗಿಸಲಾಗುತ್ತಿದೆಯೇ ಹೊರತು ಕಾರ್ಖಾನೆ ಹಾಗೂ ಗದ್ದೆಗಳಿಗೆ ಹರಿಸಲಾಗುತ್ತಿಲ್ಲ. ಶಿವಮೊಗ್ಗದ ಭದ್ರಾ ಜಲಾಶಯದಲ್ಲೂ ನೀರಿನ ಒಳಹರಿವು ಕಡಿಮೆಯಾಗಿದೆ. ಅಲ್ಲಿಯು ಪರಿಸ್ಥಿತಿ ಗಂಭೀರವಾಗಿದೆ. ಜು. 2ನೇ ವಾರದಲ್ಲಿ ಮಳೆ ಆಗುವ ಸಂಭವವಿದೆ ಎಂದು ಮುಖ್ಯ ಅಭಿಯಂತರ ಶ್ರೀನಿವಾಸ್ ಮಲ್ಲಿಗವಾಡ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಜೀವ ನದಿ ನೇತ್ರಾವತಿ ಒಡಲಿಗೆ ನೇರವಾಗಿ ವಸತಿ ಸಮುಚ್ಚಯಗಳಿಂದ ಶೌಚಾಲಯದ ತ್ಯಾಜ್ಯ ನೀರು!
75 ವರ್ಷದ ಸಿನಿ ನೆನಪುಗಳಿಗೆ ತೆರೆ: ಇತಿಹಾಸದ ಪುಟ ಸೇರಿದ ಅರಸೀಕೆರೆಯ ಸಾಧನ ಚಿತ್ರಮಂದಿರ