
ಮಂಗಳೂರು/ಉಡುಪಿ (ಮಾ.19): ಕರಾವಳಿಯಾದ್ಯಂತ ನಾಳೆ (ಶುಕ್ರವಾರ) ಸಡಗರದ 'ಈದುಲ್ ಫಿತ್ರ್' ಹಬ್ಬವನ್ನು ಆಚರಿಸಲಾಗುತ್ತಿದೆ. ಇಂದು ಮುಸ್ಸಂಜೆ ಶವ್ವಾಲ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಬ್ಬ ಆಚರಿಸುವಂತೆ ಜಿಲ್ಲಾ ಖಾಝಿಗಳು ಅಧಿಕೃತವಾಗಿ ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಉಡುಪಿ ಜಿಲ್ಲಾ ನಾಯಿಬ್ ಖಾಝಿ ಉಸ್ತಾದ್ ಬಿ.ಕೆ. ಅಬ್ದುರ್ರಹ್ಮಾನ್ ಮದನಿ ಮೂಳೂರು ಅವರು ಚಂದ್ರದರ್ಶನವನ್ನು ಖಚಿತಪಡಿಸಿದ್ದು, ನಾಳೆ ಈದ್ ಹಬ್ಬ ಆಚರಿಸಲು ಕರೆ ನೀಡಿದ್ದಾರೆ. ಈ ಕುರಿತು ಉಡುಪಿ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ. ಬಾವು ಮೂಳೂರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ರಂಜಾನ್ ಉಪವಾಸ ಆಚರಿಸಿದ್ದ ಮುಸ್ಲಿಮರಿಗೆ ಇಂದು ಚಂದ್ರದರ್ಶನವಾಗುವ ಮೂಲಕ ಉಪವಾಸ ಮುಕ್ತಾಯಗೊಂಡಿದೆ. ಒಂದು ತಿಂಗಳ ಕಠಿಣ ಉಪವಾಸ ನಂತರ ರಂಜಾನ್ ಸಂಭ್ರಮ ಮನೆಮಾಡಿದೆ.
ನಾಳೆ ಬೆಳಿಗ್ಗೆ ಕರಾವಳಿಯ ಎಲ್ಲಾ ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಈದ್ ಉಲ್ ಫಿತ್ರ್ ನಿಮಿತ್ತ ವಿಶೇಷ ಪ್ರಾರ್ಥನೆ (ನಮಾಜ್) ನಡೆಯಲಿದೆ. ಸದ್ಯ ಮಂಗಳೂರು, ಉಡುಪಿ ಸೇರಿದಂತೆ ಕರಾವಳಿಯಾದ್ಯಂತ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಜೋರಾಗಿದ್ದು, ಈದ್ ಸಂಭ್ರಮ ಕಳೆಗಟ್ಟಿದೆ.