Latest Videos

ವಿಜಯಪುರದಲ್ಲಿ ಉಕ್ಕಿ ಹರಿಯೋ ಹಳ್ಳ: ಶಿಕ್ಷಣಕ್ಕಾಗಿ ಪ್ರಾಣವನ್ನೆ ಪಣಕ್ಕಿಡ್ತಿದ್ದಾರೆ ಇಂಗಳನಾಳ ಮಕ್ಕಳು!

By Govindaraj SFirst Published Jun 21, 2024, 5:33 PM IST
Highlights

ಮಳೆಯಾದಾಗ ಹಳ್ಳದಾಟೋದು ಅಂದ್ರೆ ಅದು ಮಕ್ಕಳು ಸಾವಿನ ಜೊತೆಗೆ ಸೆಣೆಸಿದಂತೆಯೇ. ಇಂಥಹ ಡೆಂಜರಸ್‌ ಹಳ್ಳ ಇರೋದು ವಿಜಯಪುರ ತಾಲೂಕಿನ ಇಂಗನಾಳ ಗ್ರಾಮದಲ್ಲಿ.

-‌ ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಜೂ.‌17): ಇಲ್ಲಿನ ಮಕ್ಕಳು ಶಾಲೆ ಕಲಿಯಬೇಕಾದ್ರೆ, ಶಿಕ್ಷಣ ಪಡೆಯಬೇಕಾದ್ರೆ ತಮ್ಮ ಪ್ರಾಣವನ್ನೆ ಪಣಕ್ಕಿಡ್ತಿದ್ದಾರೆ. ನಿತ್ಯ ಉಕ್ಕಿ ಹರಿಯೋ ಹಳ್ಳವನ್ನ ದಾಟಿ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇನ್ನು ಮಳೆಯಾದಾಗ ಹಳ್ಳದಾಟೋದು ಅಂದ್ರೆ ಅದು ಮಕ್ಕಳು ಸಾವಿನ ಜೊತೆಗೆ ಸೆಣೆಸಿದಂತೆಯೇ. ಇಂಥಹ ಡೆಂಜರಸ್‌ ಹಳ್ಳ ಇರೋದು ವಿಜಯಪುರ ತಾಲೂಕಿನ ಇಂಗನಾಳ ಗ್ರಾಮದಲ್ಲಿ.

ಪಾಠ ಕಲಿಯಲು ಪ್ರಾಣ ಒತ್ತೆ ಇಡ್ತಿರೋ ಮಕ್ಕಳು: ಹೌದು ಇದು ವಿಜಯಪುರ ತಾಲೂಕಿನ ಇಂಗನಾಳ ಗ್ರಾಮದ ಸರ್ಕಾರಿ ಶಾಲೆ ಮಕ್ಕಳ ದುಸ್ಥಿತಿ ಅಂತಿರೋ, ಶಿಕ್ಷಣ ಪಡೆಯಲು ಬಂದೊದಗಿರೊ ಸಂಕಷ್ಟಕ್ಕೆ ಏನಬೇಕೋ ಗೊತ್ತಿಲ್ಲ. ಇಲ್ಲಿ ಸರ್ಕಾರಿ ಶಾಲೆಗೆ ತೆರಳುವ ೨೦ಕ್ಕು ಅಧಿಕ ಮಕ್ಕಳು ನಿತ್ಯ ಸಾವಿನ ಜೊತೆಗೆ ಸೆಣೆಸಾಟ ಮಾಡ್ತಿದ್ದಾರೆ. ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ತೆರಳು ಮಕ್ಕಳು ಗ್ರಾಮದ ಪಕ್ಕದಲ್ಲಿರುವ ಹಳ್ಳವನ್ನ ದಾಟಿ ಹೋಗಬೇಕಾಗುತ್ತದೆ. ಆದ್ರೆ ತುಂಬಿ ಹರಿಯೋ ಹಳ್ಳವನ್ನ ದಾಟೋದು ಅಂದ್ರೆ ಮಕ್ಕಳಿಗೆ ಜೀವಭಯ. ಇನ್ನು ಮಕ್ಕಳನ್ನ ಶಾಲೆಗೆ ಕಳಿಸೋಕೆ ಸ್ವತಃ ಪೋಷಕರೆ ಭಯ ಬೀಳ್ತಿದ್ದಾರೆ.

ಕಳ್ಳಸಾಗಣೆ ತಡೆಗಟ್ಟುವ ದೃಷ್ಟಿಯಿಂದ ಇಂಧನ ಬೆಲೆ ಏರಿಕೆ: ಬಸವರಾಜ ರಾಯರಡ್ಡಿ

ಮಕ್ಕಳ ಕನಸಿಗೆ ಕೊಳ್ಳಿ ಇಡ್ತಿದೆ ಹಳ್ಳ: ಸಧ್ಯ ಮಳೆಗಾಲ ಶುರುವಾಗಿದೆ. ಒಂದು ಭಾರಿ ಮಳೆಯಾದ್ರೆ ಸಾಕು ಮೂರ್ನಾಲ್ಕು ತಿಂಗಳ ವರೆಗೆ ಹಳ್ಳದಲ್ಲಿ ನೀರು ಇರುತ್ತೆ. ಜೊತೆಗೆ ಮಳೆಯಾದಾಗ ಒಂದು ವಾರದ ವರೆಗೆ ಹಳ್ಳ ಉಕ್ಕಿ ಹರಿಯುತ್ತೆ. ಈ ವೇಳೆ ಮಕ್ಕಳು ಹಳ್ಳದಾಟಲು ಯತ್ನಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಮಳೆಯಾದ್ರೆ ಶಾಲೆಗೆ ಮಕ್ಕಳು ಹೋಗೋಕೆ ಭಯ ಪಡ್ತಾರೆ. ಮಳೆಯಾದಾಗ ಮಕ್ಕಳನ್ನ ಶಾಲೆಗೆ ಕಳುಹಿಸೋಕೆ ಪೋಷಕರು ಹಿಂದೇಟು ಹಾಕ್ತಾರೆ. ಪರಿಣಾಮ ಮಳೆಯಾದಾಗಲೇಲ್ಲ ಇಲ್ಲಿನ ೨೦ಕ್ಕು ಅಧಿಕ ವಿದ್ಯಾರ್ಥಿಗಳು ತರಗತಿಗಳನ್ನ ಬಂಕ್‌ ಮಾಡಬೇಕಾಗುತ್ತೆ. ಹೀಗಾಗಿ ಓದು ಅಪೂರ್ಣವಾಗ್ತಿದೆ. ಶಾಲೆ ಕಲಿತು ಹೆಚ್ಚಿನ ಮಾರ್ಕ್ಸ್‌ ಪಡೆದು ಸಾಧನೆ ಮಾಡಬೇಕು ಎಂಬ ಮಕ್ಕಳ ಕನಸಿಗೆ ಹಳ್ಳ ಕೊಳ್ಳಿ ಇಡ್ತಿದೆ.

ಇತ್ತೀಚೆಗೆ ಅದೃಷ್ಟವಶಾತ್‌ ಪಾರಾಗಿದ್ದ ವಿದ್ಯಾರ್ಥಿ: ಇನ್ನು ಕೆಲ ದಿನಗಳ ಹಿಂದಷ್ಟೇ ಜೋರಾದ ಮಳೆಯಾದಾಗ ಹಳ್ಳ ತುಂಬಿ ಹರಿಯುತ್ತಿತ್ತು. ಶಾಲೆಗೆ ತೆರಳಿದ್ದ ಮಕ್ಕಳು ವಾಪಸ್‌ ಬರೋವಾಗ ಓರ್ವ ವಿದ್ಯಾರ್ಥಿ ಹಳ್ಳದಲ್ಲಿ ಹರಿದು ಹೋಗ್ತಿದ್ದ. ಆದ್ರೆ ಹಳ್ಳದ ಬಳಿ ಬಟ್ಟೆ ಒಗೆಯಲು ಬಂದಿದ್ದ ಮಹಿಳೆಯರು ಹಳ್ಳದಲ್ಲಿ ಹರಿದು ಹೋಗ್ತಿದ್ದ ಶಾಲಾ ಬಾಲಕನನ್ನ ಬಚಾವ್‌ ಮಾಡಿದ್ರು. ಅದೃಷ್ಟವಶಾತ್‌ ಬಾಲಕನ ಜೀವ ಉಳಿದಿತ್ತು.

ಹಳ್ಳದ ಮೇಲೆ ಸೇತುವೆ ನಿರ್ಮಾಣಕ್ಕೆ ಒತ್ತಾಯ: ಮಕ್ಕಳಿಗೆ ಜೀವ ಕಂಟಕವಾಗಿರುವ ಇಂಗನಾಳ ಹಳ್ಳದ ಮೇಲೆ ಸಣ್ಣ ಸೇತುವೆ ನಿರ್ಮಾಣಕ್ಕೆ ಒತ್ತಾಯ ಕೇಳಿ ಬಂದಿದೆ. ಹಿಂದೊಮ್ಮೆ ಗರಸು ಕಲ್ಲುಗಳನ್ನ ಬಳಕೆ ಮಾಡಿ ರಸ್ತೆಯನ್ನ ಎತ್ತರ ಮಾಡಲಾಗಿತ್ತಾದ್ರು, ಜೋರಾದ ಮಳೆಯಲ್ಲಿ ರಸ್ತೆಯೇ ಕಿತ್ತು ಹೋಗಿದೆ. ಮಳೆ ಬಂದಾಗಲೇಲ್ಲ ೫ ರಿಂದ ೬ ಅಡಿಗಳ ಎತ್ತರದ ವರೆಗು ನೀರು ಹರಿಯುತ್ತೆ. ದೊಡ್ಡವರು ಅಡ್ಡಾಡೋದಕ್ಕು ಹಳ್ಳ ಅಡ್ಡಿಯಾಗುತ್ತೆ. ಮಳೆಗಾಲದಲ್ಲಿ ೪ ರಿಂದ ೫ ತಿಂಗಳ ಕಾಲ ಹರಿಯುವ ಹಳ್ಳದ ಮೇಲೆ ಸೇತುವೆ ನಿರ್ಮಾಣ ಮಾಡಿದ್ರೆ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಲಿದೆ ಎನ್ತಿದ್ದಾರೆ ಪೋಷಕರು. ಹಳ್ಳ ತುಂಬಿ ಹರಿಯುವಾಗ ಮಕ್ಕಳ ಜೀವಕ್ಕೆ ಅಪಾಯವಿರುವ ಕಾರಣ ಇಲ್ಲಿ ಸೇತುವೆ ನಿರ್ಮಾಣವಾಗಲೇ ಬೇಕು ಎನ್ನುವ ಆಗ್ರಹ ಗ್ರಾಮಸ್ಥರಿಂದ ಕೇಳಿ ಬಂದಿದೆ.

ಜನಾರ್ದನ ರೆಡ್ಡಿ ಶಾಸಕರಾಗಿರಲು ಅಯೋಗ್ಯರು: ಸಲೀಂ ಅಹ್ಮದ್‌

ಮನವಿ ಕೊಟ್ಟರು ಖ್ಯಾರೆ ಎನ್ನದ ಅಧಿಕಾರಿಗಳು: ಶಾಲಾ ಮಕ್ಕಳ ಶೈಕ್ಷಣಿಕ ಬದುಕಿಗೆ ಕಂಟಕವಾಗಿರೋ ಹಳ್ಳದ ಸಮಸ್ಯೆಯ ಕುರಿತಾಗಿ ಈಗಾಗಲೇ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಪಿಡಿಓ ಗಮನಕ್ಕೆ ಗ್ರಾಮಸ್ಥರು ತಂದಿದ್ದಾರೆ. ಆದ್ರೆ ಅಸಡ್ಯತನ ಮನೋಭಾವನೆಯ ಅಧಿಕಾರಿಗಳು ಮಕ್ಕಳ ಪ್ರಾಣಕ್ಕೆ ಬೆಲೆ ಕೊಡ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ. ಇನ್ನು ಜನಪ್ರತಿನಿಧಿಗಳು, ನಾಗಠಾಣ ಶಾಸಕ ವಿಠ್ಠಲ್‌ ಕಟಕದೊಂಡ ಮಕ್ಕಳ ಸಹಾಯಕ್ಕೆ ಬರಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

click me!