
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಜೂ.02): ಸಾಮಾನ್ಯವಾಗಿ ಸರ್ವೆ ಕಾರ್ಯ ಅಂದರೆ ಸಾಕು ಎಷ್ಟು ದಿನ ಬೇಕೋ ಏನೋ ಅನ್ನೋ ಮಾತಿತ್ತು. ಆದರೆ ಈಗ ಹಾಗಿಲ್ಲ. ಸರ್ವೆ ಕಾರ್ಯಕ್ಕೂ ಡ್ರೋನ್ ಬಳಸಿ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ. ಇದರಿಂದ ಸಾವಿರಾರು ಎಕರೆ ಪ್ರದೇಶದ ಸರ್ವೆ ಕಾರ್ಯ ಒಂದೇ ವಾರದಲ್ಲಿ ಮುಗಿಸಲಾಗುತ್ತಿದೆ. ಇಂತಹದೊಂದು ಕಾರ್ಯವನ್ನು ಇದೀಗ ಬಾಗಲಕೋಟೆ ಜಿಲ್ಲಾಡಳಿತ ಕೈಗೆತ್ತಿಕೊಂಡಿದೆ.
ಹೌದು! ಮುಳುಗಡೆ ವ್ಯಾಪ್ತಿಗೆ ಬರುವ ಹಳೆ ಬಾಗಲಕೋಟೆ ಪಟ್ಟಣದಿಂದ ಅತ್ಯಂತ ವೇಗವಾಗಿ ಪುನರ್ವಸತಿ ಮೂಲಕ ನವನಗರ ಪ್ರದೇಶವು ಬೆಳವಣಿಗೆಯಾಗುತ್ತಿದ್ದು, ಆಸ್ತಿಗಳ ಅಳತೆ ಮತ್ತು ಸೂಕ್ತ ಹಕ್ಕು ದಾಖಲೆಗಳ ನಿರ್ವಹಣೆ, ಆಸ್ತಿಗಳ ಕುರಿತು ಉಂಟಾಗುವ ವ್ಯಾಜ್ಯಗಳನ್ನು ಪರಿಹರಿಸಲು ಇದೀಗ ಬಾಗಲಕೋಟೆ ಜಿಲ್ಲಾಡಳಿತ ಯುಪಿಓಆರ್ ಯೋಜನೆಯಡಿ ಡ್ರೋನ್ ತಂತ್ರಾಂಶ ಆಧಾರಿತ ಸರ್ವೆಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಮೂಲಕ ಹಳೆಯ ಬಾಗಲಕೋಟೆ ನಗರ ಮಾಪನಕ್ಕೆ ಹೊಂದಿಕೊಂಡಿರುವ ಬರೋಬ್ಬರಿ 8940 ಎಕರೆ ಪ್ರದೇಶದ ಸರ್ವೆ ಕಾರ್ಯ ಪ್ರಾರಂಭಿಸಲಾಗಿದ್ದು, ಒಂದು ವಾರದಲ್ಲಿ ಸರ್ವೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಅತಿಹೆಚ್ಚು ಸೈಕ್ಲಿಸ್ಟ್ಗಳು ಸಾಧನೆ ಮಾಡ್ತಿರೋ ಬಾಗಲಕೋಟೆ ಜಿಲ್ಲೆಗೆ ಬೇಕಿದೆ ವೆಲ್ಡ್ರೋಮ್
ಜರ್ಮನಿ ಮೂಲದ ಕಂಪನಿ ಡ್ರೋನ್ ಕಾರ್ಯಾಚರಣೆ: ಬಾಗಲಕೋಟೆಯ ನಗರಸಭೆ ಎದುರು ಆರಂಭವಾಗಿರುವ ಡ್ರೋನ್ ಸರ್ವೆ ಕಾರ್ಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುತ್ತಿದ್ದು, ಜಿಲ್ಲೆಗೆ ಆಗಮಿಸಿದ 9 ಜನರ ತಂಡವೊಂದು ಪ್ರತಿ ಸೆಕೆಂಡಿಗೆ ಒಂದೊಂದು ಛಾಯಾಚಿತ್ರವನ್ನು ಸೆರೆ ಹಿಡಿಯುವಂತಹ ಜಿಪಿಎಸ್ ಒಳಗೊಂಡ ಅತ್ಯಾಧುನಿಕ ಡ್ರೋನ್ ಕ್ಯಾಮರಾ ಬಳಸಿಕೊಂಡು ಸರ್ವೇಕಾರ್ಯವನ್ನು ಪೂರ್ಣಗೊಳಿಸಲು ಮುಂದಾಗಿದೆ. ಇನ್ನು ಟ್ರಿನಿಟಿ ಎಫ್-90+ ಎಂಬ ಮಾಡಲ್ನ ಜರ್ಮನಿ ಕಂಪನಿಯ ಡ್ರೋನ್ ಬಳಸಲಾಗುತ್ತಿದ್ದು, ಇದು 1.5 ಸ್ಕೈರ್ ಕಿ.ಮೀ ಪ್ರದೇಶವನ್ನು 1 ಗಂಟೆಯಲ್ಲಿ ಸರ್ವೆ ಮಾಡಲಿದೆ. ಇದರಿಂದ ನಗರದ ಆಸ್ತಿ ಮಾಲಿಕತ್ವದ ದಾಖಲೆಗಳನ್ನು ಸಂಗ್ರಹಿಸಬಹುದಾಗಿದೆ.
1 ವಾರದಲ್ಲಿ ಬರೋಬ್ಬರಿ 8,940 ಎಕರೆ ಪ್ರದೇಶದ 8 ಗ್ರಾಮಗಳ ಸರ್ವೆ ಕಾರ್ಯ ಪೂರ್ಣ: ಬಾಗಲಕೋಟೆಯಿಂದ ಆರಂಭವಾಗಿರುವ ಸರ್ವೆ ಕಾರ್ಯದಲ್ಲಿ ಬರೋಬ್ಬರಿ 8,940 ಎಕರೆ ಪ್ರದೇಶದ ಸರ್ವೆ ಕಾರ್ಯ ನಡೆಯಲಿದ್ದು, ಅದರಲ್ಲಿ ಸೀಮಿಕೇರಿ, ಗದ್ದನಕೇರಿ, ಕೇಸನೂರ, ವೀರಾಪೂರ, ಮುರನಾಳ, ಮುಚಖಂಡಿ, ಬಾಗಲಕೋಟೆ ಹಾಗೂ ಶೀಗಿಕೇರಿ ಸೇರಿ ಒಟ್ಟು 8 ಗ್ರಾಮಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿವೆ. ಈ ಮಧ್ಯೆ ಆಸ್ತಿಗಳ ಅಳತೆ ಕಾರ್ಯ ಮುಗಿದ ನಂತರ ಡ್ರಾಪ್ಟ್ ಪಿಆರ್ ಕಾರ್ಡ್ಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತದೆ. ನಿಗದಿತ ಅವಧಿಯೊಳಗೆ ಯಾವುದೇ ತಕರಾರು ಸ್ವೀಕೃತವಾಗದೇ ಇದ್ದಲ್ಲಿ ಅಂತಿಮ ಪಿಆರ್ ಕಾರ್ಡ್ಗಳನ್ನು ತಯಾರಿಸಲು ಬಾಗಲಕೋಟೆ ಜಿಲ್ಲಾಡಳಿತ ಮುಂದಾಗಿದೆ.
ಸರ್ವೆ ಕಾರ್ಯ ಅವಶ್ಯವಾಗಿದ್ದು ಯಾಕೆ?: ಯುಪಿಓಆರ್ ಯೋಜನೆಯು ಆಸ್ತಿಗಳ ಅಳತೆ ಕಾರ್ಯಕೈಗೊಂಡು ಪ್ರತಿ ಅಧಿಕೃತ ಆಸ್ತಿಗೆ ಪ್ರಾಪರ್ಟಿ ಕಾರ್ಡನ್ನು ಪೂರೈಸುವ ಧ್ಯೇಯವನ್ನು ಹೊಂದಲಾಗಿದೆ. ಈ ಆಸ್ತಿಯ ಪ್ರಾಪರ್ಟಿ ಕಾರ್ಡಗಳು ಯಾವುದೇ ಆಸ್ತಿಯ ಮಾಲಿಕತ್ವವನ್ನು ನಿರೂಪಿಸುತ್ತಿದ್ದು, ಈ ಮೂಲಕ ಆಸ್ತಿಯ ಮಾಲೀಕರಿಗೆ ಅಧಿಕೃತ ಮಾಲೀಕತ್ವದ ಪ್ರಾಪರ್ಟಿ ಕಾರ್ಡ್ನಿಂದ ಅವರ ಮುಂದಿನ ವ್ಯವಹಾರ, ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು, ನಗರಸಭೆಯಿಂದ ತೆರಿಗೆ ಸಂಗ್ರಹಿಸಲು ಕಡ್ಡಾಯವಾಗಿದೆ. ಹೀಗಾಗಿ ಪ್ರತಿ ಮಾಲಿಕರು ಸಹ ಇದು ಹೊಂದಲೆಬೇಕಾದ ದಾಖಲೆಯಾಗಿರುವದರಿಂದ ಸರ್ವೇಕಾರ್ಯ ಅವಶ್ಯವಾಗಿದೆ.
Bagalkoteಯಲ್ಲಿ ವಿದ್ಯಾರ್ಥಿಗೆ ಥಳಿತ ಪ್ರಕರಣ, ಪ್ರಿನ್ಸಿಪಾಲ್ PSI ಸೇರಿ 7 ಮಂದಿ ವಿರುದ್ಧ FIR
ಒಟ್ಟಿನಲ್ಲಿ ಬಾಗಲಕೋಟೆ ನಗರದಲ್ಲಿ ಡ್ರೋನ್ ಕಾರ್ಯ ಅತ್ಯಂತ ಭರದಿಂದ ಸಾಗಿದ್ದು, ಈ ಮೂಲಕ ಆಸ್ತಿಯ ಮಾಲೀಕರಿಗೆ ತಯಾರಾಗುವ ಅಧಿಕೃತ ಮಾಲಿಕತ್ವದ ಪ್ರಾಪರ್ಟಿ ಕಾರ್ಡ್ನಿಂದ ಅವರ ಮುಂದಿನ ವ್ಯವಹಾರ, ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು ಅತ್ಯಂತ ಅನುಕೂಲವಾಗಲಿದೆ.