'ಕೊರೋನಾ ನಿಮ್ಮನ್ನು ಕೊಲ್ಲಲ್ಲ, ನಿರ್ಲಕ್ಷ್ಯ ನಿಮ್ಮನ್ನು ಕೊಲ್ಲುತ್ತದೆ'

By Kannadaprabha NewsFirst Published May 10, 2021, 3:09 PM IST
Highlights

* ಕೊರೋನಾ ಬಂದರೆ ಭಯಪಡುವ ಅಗತ್ಯವಿಲ್ಲ
* ಬೇಗನೆ ಚಿಕಿತ್ಸೆ ಪಡೆಯುವುದರಿಂದ ಸುಲಭವಾಗಿ ಗುಣಮುಖವಾಗಲು ಸಾಧ್ಯ
* ಸೋಷಿಯಲ್‌ಮೀಡಿಯಾದಲ್ಲಿ ಬರುವ ಸಂದೇಶ ನೋಡಿ ಗಾಬರಿಯಾಗಬಾರದು 
 

ಕೊಪ್ಪಳ(ಮೇ.10): ಮಹಾಮಾರಿ ಕೊರೋನಾ ಅತ್ಯಂತ ಅಪಾಯಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅದು ಕೊಲ್ಲುವಷ್ಟುಕ್ರೂರಿಯಲ್ಲ. ಆದರೆ, ಅದು ಬಂದಾಗ ನಾವು ತೋರುವ ನಿರ್ಲಕ್ಷ್ಯವೇ ನಮ್ಮನ್ನು ಕೊಲ್ಲುತ್ತದೆ. ಆದ್ದರಿಂದ, ಕೊರೋನಾಕ್ಕೆ ಭಯಪಡುವುದಕ್ಕಿಂತ ಅಗತ್ಯ ಎಚ್ಚರಿಕೆ ತೆಗೆದುಕೊಂಡರೆ ಖಂಡಿತವಾಗಿಯೂ ಅದರಿಂದ ಪಾರಾಗಬಹುದು ಎಂದು ಕುಷ್ಟಗಿ ಪಟ್ಟಣದ ಡಾಣಿ ಡಾಣಿ ಕ್ಲಿನಿಕ್‌ನ ಡಾ. ರವಿಕುಮಾರ ಹೇಳಿದ್ದಾರೆ.

ಭಾನುವಾರ ಕನ್ನಡ ಪ್ರಭದ ಜೊತೆ ಮಾತನಾಡಿದ ಅವರು, ಕೊರೋನಾ ಬಾರದಂತೆ ಎಚ್ಚರ ವಹಿಸುವುದು ತೀರಾ ಅಗತ್ಯ. ಅದಕ್ಕಾಗಿ ಮಾಸ್ಕ್‌ಕಡ್ಡಾಯವಾಗಿ ಧರಿಸಬೇಕು, ಇದಕ್ಕಿಂತ ಮಿಗಿಲಾಗಿ ಅನಗತ್ಯವಾಗಿ ಮನೆಯಿಂದ ಆಚೆ ಬರಬಾರದು. ಮನೆಯಲ್ಲಿಯೂ ಕನಿಷ್ಟಎಚ್ಚರ ವಹಿಸಿದರೂ ಸಾಕು ಅದು ನಿಮ್ಮ ತಂಟೆಗೆ ಬರುವುದಿಲ್ಲ. ಆದರೆ, ನಾವು ಇದ್ಯಾವುದನ್ನು ಪಾಲನೆ ಮಾಡುವುದಕ್ಕೆ ಮೀನಮೇಷ ಮಾಡುತ್ತೇವೆ. ಬೇಜ​ವಾಬ್ದಾರಿ ​ತೋ​ರು​ತ್ತೇ​ವೆ ಎಂದು ತಿಳಿಸಿದ್ದಾರೆ.

"

ಕೊಪ್ಪಳ: ರೆಮ್‌ಡಿಸಿವಿರ್‌ ಅಕ್ರಮ ಪತ್ತೆಯ ತನಿಖೆಯೇ ನಿಗೂಢ

ಇಂಥ ಬೇಜವಾಬ್ದಾರಿ ಬಿಡಬೇಕು. ಜನನಿಬಿಡ ಸ್ಥಳ​ಗ​ಳ​ತ್ತ ಸುಳಿಯಬಾರದು. ಕಠಿಣ ನಿಲುವು ತಳೆ​ದರೆ ಖಂಡಿತವಾಗಿಯೂ ಅದರ ಹರಡುವ ಪ್ರಮಾಣ ಕಡಿಮೆಯಾಗುತ್ತದೆ. ನಿತ್ಯ ಮನೆಯಲ್ಲಿ ಯೋಗ, ಪ್ರಾಣಾ​ಯಾ​ಮ ಮಾಡುವುದು, ದೈಹಿಕ ಶ್ರಮವಹಿಸಬೇಕು. ಇದರಿಂದ ದೇಹ ನಿಗ್ರಹ ಇರುತ್ತದೆ. ಇದಾದ ಮೇಲೆ ಮನೆಯಲ್ಲಿಯೇ ಇರುತ್ತೇವೆ ಎಂದು ಸದಾ ಮೊಬೈಲ್‌ನೋಡುವುದು, ಸೋಷಿಯಲ್‌ಮೀಡಿಯಾದಲ್ಲಿ ಬರುವ ಸಂದೇಶಗಳನ್ನು ನೋಡಿ ಗಾಬರಿಯಾಗಬಾರದು ಎಂದು ಸಲಹೆ ನೀಡಿದ್ದಾರೆ.

ಇದೆಲ್ಲವನ್ನು ಮಾಡಿಯೂ ಅನಿವಾರ್ಯ ಕಾರಣಗಳಿಗಾಗಿ ಹೊರಗೆ ಹೋಗುವುದರಿಂದ ಹಾಗೂ ಬೆರೆಯುವುದರಿಂದ ಕೊರೋನಾ ಬಂದರೆ ಭಯಪಡುವ ಅಗತ್ಯವಿಲ್ಲ. ಲಕ್ಷಣ ಕಂಡು ಬಂದ ತಕ್ಷಣ ವೈದ್ಯರಿಂದ ಸಹ​ಹೆ ಪಡೆಯಬೇಕು. ಇದರಿಂದ ಗುಣಮುಖವಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಬೇಗನೆ ಚಿಕಿತ್ಸೆ ಪಡೆಯುವುದರಿಂದ ಸುಲಭವಾಗಿ ಗುಣಮುಖವಾಗಲು ಸಾಧ್ಯವಾಗುತ್ತದೆ. ಆದರೆ, ಬಂದ ಮೇಲೆ ಇಲ್ಲದ ಕಾರಣ ಮುಂದೆ ಮಾಡಿ, ನಿರ್ಲಕ್ಷ್ಯ ಮಾಡಿ, ಕೊನೆಗಳಿಗೆಯಲ್ಲಿ ಚಿಕಿತ್ಸೆಗೆ ದಾಖಲಾಗುವುದು ಸಮಸ್ಯೆಗೆ ಕಾರಣವಾಗುತ್ತದೆ. ಆದಷ್ಟು ಬೇಗನೆ ವೈದ್ಯರಿಂದ ಚಿಕಿತ್ಸೆ ಪಡೆದರೆ ಖಂಡಿತವಾಗಿಯೂ ಯಾವುದೇ ತೊಂದರೆ ಇಲ್ಲದೆ ಗುಣಮುಖರಾಗಬಹುದು ಎಂದು ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 
 

click me!