ಬಿಲ್‌ ಪಾವತಿಸದ ನೆಪವೊಡ್ಡಿ ಗ್ರಾಪಂಗಳ ವಿದ್ಯುತ್‌ ಕಡಿತ ಮಾಡಬೇಡಿ: ಶಾಸಕ ಮಂಥರ್‌ ಗೌಡ ಸೂಚನೆ

By Kannadaprabha NewsFirst Published Jun 4, 2023, 5:23 AM IST
Highlights

ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯಿತಿಗಳ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಬಾರದು. ಸಮರ್ಪಕ ವಿದ್ಯುತ್‌ ಪೂರೈಕೆಗೆ ಸೆಸ್‌್ಕ ಕಾರ್ಯಪಾಲಕ ಅಭಿಯಂತರ ಅಶೋಕ್‌ ಅವರಿಗೆ ಶಾಸಕ ಡಾ. ಮಂಥರ್‌ ಗೌಡ ಸೂಚಿಸಿದರು.

ಸೋಮವಾರಪೇಟೆ (ಜೂ.4) ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯಿತಿಗಳ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಬಾರದು. ಸಮರ್ಪಕ ವಿದ್ಯುತ್‌ ಪೂರೈಕೆಗೆ ಸೆಸ್‌್ಕ ಕಾರ್ಯಪಾಲಕ ಅಭಿಯಂತರ ಅಶೋಕ್‌ ಅವರಿಗೆ ಶಾಸಕ ಡಾ. ಮಂಥರ್‌ ಗೌಡ ಸೂಚಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಮಳೆಗಾಲದಲ್ಲಿ ತೆಗೆದುಕೊಳ್ಳಬೇಕಾದ ಮನ್ನೆಚ್ಚರಿಕೆ ಕ್ರಮದ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ವಿದ್ಯುತ್‌ ಬಿಲ್‌ ಪಾವತಿಸದ ನೆಪವೊಡ್ಡಿ, ಕೆಲ ಗ್ರಾಮ ಪಂಚಾಯಿತಿಗಳ ವಿದ್ಯುತ್‌ ಸಂಪರ್ಕವನ್ನು ಸೆಸ್‌್ಕ ಕಡಿತಗೊಳಿಸುತ್ತಿದೆ. ಇದರಿಂದ ಆಡಳಿತ ವ್ಯವಸ್ಥೆಗೆ ಸಮಸ್ಯೆಯಾಗಿದೆ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಸಭೆಯ ಗಮನಕ್ಕೆ ತಂದಾಗ, ಶಾಸಕರು ಸೆಸ್‌್ಕ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು. ಶಾಸಕನಾದ ನಾನು ಮೂರು ಬಾರಿ ಕಾಲ್‌ ಮಾಡಿದಾಗಲೂ ನನ್ನ ಕರೆಯನ್ನು ಸ್ವೀಕರಿಸಿಲ್ಲ. ಇನ್ನು ಸಾರ್ವಜನಿಕರ ಕರೆಯನ್ನು ಸ್ವೀಕರಿಸುತ್ತಿರಾ ಎಂದು ಸೆಸ್‌್ಕ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಯೊಬ್ಬರ ಕರೆಯನ್ನು ಸ್ವೀಕರಿಸಿ ಸಮಸ್ಯೆ ಆಲಿಸಬೇಕು ಎಂದು ಶಾಸಕರು ತಿಳಿಸಿದರು.

ಮಂತರ್ ಗೌಡ ಗೆಲುವು : ಕೊಡಗಿನಿಂದ ಚಾಮುಂಡಿಬೆಟ್ಟಕ್ಕೆ ಅಭಿಮಾನಿಗಳ ಪಾದಯಾತ್ರೆ

ಚರಂಡಿ ದುರಸ್ತಿಗೆ ಕ್ರಮ ಕೈಗೊಳ್ಳಿ: ಮಳೆಗಾಲ ಪ್ರಾರಂಭವಾಗುವುದಕ್ಕೆ ಮೊದಲು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಪಂಚಾಯಿತಿ ರಸ್ತೆಗಳ ಚರಂಡಿಯನ್ನು ದುರಸ್ತಿ ಮಾಡಿಕೊಳ್ಳಬೇಕು. ಹಾಗೂ ಗುಂಡಿಗಳನ್ನು ಮುಚ್ಚುವ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆ ಎಇಇ ವೆಂಕಟೇಶ್‌ ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗದ ಎಇಇ ವೀರೇಂದ್ರ ಅವರಿಗೆ ಸೂಚಿಸಿದರು. ಇದುವರಗೆ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಭತ್ತ ಕೃಷಿ ಪುನಶ್ಚೇತನಕ್ಕೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯನ್ನು ಸಿದ್ಧಪಡಿಸುವಂತೆ ಕೃಷಿ ಸಹಾಯಕ ನಿರ್ದೇಶಕ ಯಾದವ್‌ ಬಾಬು ಅವರಿಗೆ ಶಾಸಕರು ಸೂಚಿಸಿ, ಕೋಲ್ಡ್‌ ಸ್ಟೊರೇಜ್‌ ಸ್ಥಾಪಿಸಿದರೆ ರೈತರು ಆಹಾರ ಬೆಳೆಗಳನ್ನು ಸಂಗ್ರಹಿಸಿಡಲು ಅನುಕೂಲವಾಗುತ್ತದೆ. ಈ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಲು ತಹಸೀಲ್ದಾರ್‌ ಎಸ್‌.ಎನ್‌.ನರಗುಂದ ಅವರಿಗೆ ತಿಳಿಸಿದರು.

ಪ್ರಸಕ್ತ ವರ್ಷ ಮಳೆ ಕಡಿಮೆಯಾಗಿದೆ. ಗೊಬ್ಬರದ ಅಂಗಡಿಗಳಿಗೆ ಭೇಟಿ ನೀಡಿ, ಒಟ್ಟು 35 ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟಪರೀಕ್ಷೆಗೆ ಕಳುಹಿಸಲಾಗಿದೆ. ಭತ್ತ ಹಾಗೂ ಮುಸುಕಿನ ಜೋಳದ ಬಿತ್ತನೆ ಬೀಜವನ್ನು ವಿತರಿಸಲಾಗುತ್ತಿದೆ ಎಂದು ಯಾದವ್‌ ಬಾಬು ಹೇಳಿದರು.

ಸೋಮವಾರಪೇಟೆ ಮತ್ತು ಕುಶಾಲನಗರ ಸೇರಿ 26 ಪಶುವೈದ್ಯಕೀಯ ಆಸ್ಪತ್ರೆಗಳಿದ್ದು, 61 ಹುದ್ದೆಗಳಲ್ಲಿ 15 ಮಂದಿ ಕೆಲಸ ಮಾಡುತ್ತಿದ್ದೇವೆ. ಹತ್ತು ವೈದ್ಯರ ಪೈಕಿ ಇಬ್ಬರು ಕೆಲಸ ಮಾಡುತ್ತಿದ್ದಾರೆ. ಆದರೂ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೇವೆ. ಜಾನುವಾರುಗಳಿಗೆ ರೋಗ ಬಾಧೆ ಹತೋಟಿಯಲ್ಲಿದೆ. ಮಳೆಗಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಎಸ್‌.ವಿ. ಬದಾಮಿ ಹೇಳಿದರು. ಖಾಲಿ ಹುದ್ದೆಗಳ ಪೂರ್ಣ ಮಾಹಿತಿ ನೀಡುವಂತೆ ಶಾಸಕರು ಸೂಚಿಸಿದರು.

ತಾಲೂಕಿನಲ್ಲಿ 231 ಶಾಲೆಗಳ ಪೈಕಿ 161 ಸರ್ಕಾರಿ ಶಾಲೆಗಳಿವೆ. 33 ಶಾಲೆಗಳಿಗೆ ಶೇ.100ರಷ್ಟುಲಭಿಸಿದೆ, ಅದರಲ್ಲಿ 14 ಸರ್ಕಾರಿ ಶಾಲೆಗಳು ಶೇ.100ರಷ್ಟುಫಲಿತಾಂಶ ಪಡೆದಿವೆ. ಪ್ರಸಕ್ತ ವರ್ಷ ಹತ್ತನೆಯ ತರಗತಿಯಲ್ಲಿ ಶೇ.95.5ರಷ್ಟುಫಲಿತಾಂಶ ಪಡೆದು ಜಿಲ್ಲೆಯಲ್ಲೆ ಪ್ರಥಮ ಸ್ಥಾನದಲ್ಲಿದ್ದೇವೆ ಎಂದು ಬಿಇಒ ಕೆ.ವಿ.ಸುರೇಶ್‌ ಮಾಹಿತಿ ನೀಡಿದರು. ಸಮವಸ್ತ್ರ, ಪಠ್ಯ ಪುಸ್ತಕ ವಿತರಿಸಲಾಗಿದೆ. ಬೆಟ್ಟದಳ್ಳಿ, ಮಲ್ಲಿಕಾರ್ಜುನ, ನೀರುಗುಂದ ಶಾಲೆಗಳ ಕಟ್ಟಡ ದುರಸ್ತಿಗೆ ಅನುದಾನ ಕಲ್ಪಿಸಲು ಮನವಿ ಮಾಡಿದರು.

ಸುಂಟಿಕೊಪ್ಪದಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿದೆ. 35 ಪ್ರಕರಣಗಳು ದಾಖಲಾಗಿವೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಚರಂಡಿಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕರು ಸೂಚಿಸಿದರು.

ವಸತಿ ಯೋಜನೆಯಲ್ಲಿ ಅವ್ಯವಹಾರ ಆಗಿರುವ ಬಗ್ಗೆ ದೂರುಗಳಿದ್ದು, ಅಧಿಕಾರಿಗಳು ಮಾನವೀಯತೆಯಿಂದ ಕೆಲಸ ಮಾಡಬೇಕು. ಟಾರ್ಪಲ್‌ ಕಟ್ಟಿಕೊಂಡು ಬದುಕುತ್ತಿರುವ ಬಡವರಿಗೆ ಮೊದಲು ಮನೆಗಳನ್ನು ನಿರ್ಮಿಸಿಕೊಡಿ. ರಾಜಕೀಯ ಒತ್ತಡ ಹಾಗೂ ಅಮಿಷಗಳಿಗೆ ಬಲಿಯಾಗಿದೆ ಮನೆಯಿದ್ದವರಿಗೆ ಮತ್ತೊಮ್ಮೆ ವಸತಿ ಯೋಜನೆಯಲ್ಲಿ ಮನೆ ಕೊಟ್ಟರೆ ಯೋಜನೆಗೆ ಅರ್ಥವಿರುವುದಿಲ್ಲ. ಮುಂದಿನ ದಿನಗಳಲ್ಲಿ ದೂರುಗಳು ಬಂದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಾಸಕರು ಎಚ್ಚರಿಸಿದರು.

Kodagu: ವೈಯಕ್ತಿಕ ಟೀಕೆ ಬಿಟ್ಟು ಅಭಿವೃದ್ಧಿ ಬಗ್ಗೆ ಹೇಳಿ: ಅಪ್ಪಚ್ಚು ರಂಜನ್‌ಗೆ ಮಂತರ್ ಗೌಡ ಸವಾಲು

click me!