‘ಗ್ರಾಮೀಣ ಜನರೇ ದಸರಾಗೆ ಬರಬೇಡಿ’

By Kannadaprabha NewsFirst Published Oct 14, 2020, 11:54 AM IST
Highlights

ಗ್ರಾಮೀಣ ಜನರೇ ದಸರಾಗೆ ಬರಬೇಡಿ ಎಂದು ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಭಾರತಿ ಮನವಿ ಮಾಡಿದ್ದಾರೆ. 

ಮೈಸೂರು (ಅ.14): ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಹರಡುತ್ತಿರುವ ಹಿನ್ನೆಲೆ ಗ್ರಾಮೀಣ ಪ್ರದೇಶದ ಜನತೆ ದಯವಿಟ್ಟು ದಸರಾಗೆ ಬರಬೇಡಿ ಎಂದು ಮೈಸೂರು ಜಿಪಂ ಸಿಇಒ ಡಿ. ಭಾರತಿ ಮನವಿ ಮಾಡಿದರು.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನತೆ ದಸರಾ ನೋಡುವ ಆಸೆಯಿಂದ ಬರಲೇಬೇಡಿ. ದಸರಾದಲ್ಲಿ ಜಂಬೂಸವಾರಿ ಮೆರವಣಿಗೆ ಇರುವುದಿಲ್ಲ. ತಾಂತ್ರಿಕ ತಂಡದ ವರದಿ ಪ್ರಕಾರ ಅರಮನೆಯಲ್ಲಿ ಮಾತ್ರ ಜಂಬೂಸವಾರಿ ನಡೆಯಲಿದೆ. ಅರಮನೆ ಒಳಗೆ 300 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸಾರ್ವಜನಿಕರಿಗೆ ನೇರವಾಗಿ ಜಂಬೂಸವಾರಿ ನೋಡುವ ಅವಕಾಶ ಇರುವುದಿಲ್ಲ. ಹೀಗಾಗಿ, ಅನಾವಶ್ಯಕವಾಗಿ ಗ್ರಾಮೀಣ ಪ್ರದೇಶದ ಜನರು ನಗರಕ್ಕೆ ಬರಬೇಡಿ ಎಂದು ಕೋರಿದರು.

ದಸರಾ ಉದ್ಘಾಟನೆ ಎಲ್ಲ ವೈದ್ಯರಿಗೆ ಸಂದ ಗೌರವ ...

ಎಲ್ಲರೂ ಮನೆ ಮನೆಗಳಲ್ಲಿಯೇ ಇದ್ದು ಟಿವಿಗಳಲ್ಲಿ ದಸರಾ ನೋಡಿ. ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಲಾಗುತ್ತದೆ. ಗ್ರಾಮೀಣ ಭಾಗದ ಜನರು ನಗರಕ್ಕೆ ಬಂದು ಕೊರೋನಾ ಹಬ್ಬಲು ಅವಕಾಶ ಮಾಡಿಕೊಡಬೇಡಿ. ಸೋಂಕಿನ ಲಕ್ಷಣ ಇರುವವರು ಟೆಸ್ವ್‌ ಮಾಡಿಸಿಕೊಳ್ಳಿ. 60 ವರ್ಷ ಮೇಲ್ಪಟ್ಟವೃದ್ಧರು ಹಾಗೂ ಮಕ್ಕಳು ಅನಾವಶ್ಯಕ ಓಡಾಡುವುದನ್ನ ನಿಲ್ಲಿಸುವಂತೆ ಅವರು ಸೂಚಿಸಿದ್ದಾರೆ.

ಪ್ರತಿ ದಿನ 1700 ಜನರಿಗೆ ಪರೀಕ್ಷೆ:  ಗ್ರಾಮೀಣ ಭಾಗದಲ್ಲೂ ಕೊರೊನಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ರತಿದಿನ 1700 ಜನರಿಗೆ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಶೇ.30 ರಷ್ಟುಪಾಸಿಟಿವ್‌ ಪ್ರಕರಣಗಳು ಪತ್ತೆಯಾಗ್ತಿವೆ. 60 ವರ್ಷ ಮೇಲ್ಪಟ್ಟಎಲ್ಲರಿಗೂ ಕೋವಿಡ್‌ ಟೆಸ್ವ್‌ ಮಾಡುತ್ತಿದ್ದೇವೆ. ಆಯಾ ಗ್ರಾಪಂ ಮಟ್ಟದಲ್ಲಿ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಆಸ್ಪತ್ರೆಯಲ್ಲಿ 50 ಆಕ್ಸಿಜನ್‌ ಬೆಡ್‌ಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿಡಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಗ್ರಾಮೀಣ ಭಾಗದ ಪಾಸಿಟಿವ್‌ ಪ್ರಕರಣಗಳಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಸೋಂಕಿತರಿಗೆ ಹೋಂ ಐಸೋಲೇಷನ್‌ ವ್ಯವಸ್ಥೆ ಇರುವುದಿಲ್ಲ. ನಂಜನಗೂಡು ಹಾಗೂ ಟಿ. ನರಸೀಪುರ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದೆ. ಸೋಂಕಿನ ಲಕ್ಷಣಗಳಿರುವ ಎಲ್ಲರೂ ಸ್ಥಳೀಯ ಆಸ್ಪತ್ರೆಗೆ ತೆರಳಿ ಕೋವಿಡ್‌ ಟೆಸ್ವ್‌ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

click me!