'ಸಿಎಂ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ'

By Kannadaprabha NewsFirst Published Sep 27, 2021, 12:33 PM IST
Highlights

*  ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ ನಂತರ ಹತಾಶೆ: ಶ್ರೀರಾಮುಲು
*  ಸಿದ್ದರಾಮಯ್ಯ ಅವರಿಗೆ ಮೊದಲಿಂದಲೂ ನಾವು ಗೌರವ ನೀಡುತ್ತಾ ಬಂದಿದ್ದೇವೆ 
*  ದುರ್ಗಾದೇವಿ ದರ್ಶನ ಪಡೆದ ಶ್ರೀರಾಮುಲು
 

ಗಂಗಾವತಿ(ಸೆ.27):  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಂಡ ನಂತರ ಹತಾಶರಾಗಿದ್ದಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು(B Sriramulu) ತಿರುಗೇಟು ನೀಡಿದ್ದಾರೆ. 

ತಾಲೂಕಿನ ಆನೆಗೊಂದಿಯ ದುರ್ಗಾಬೆಟ್ಟಕ್ಕೆ ಆಗಮಿಸಿ ದುರ್ಗಾದೇವಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಬಿ. ಶ್ರೀರಾಮುಲು ದಡ್ಡ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಸಿದ್ದರಾಮಯ್ಯ ದೊಡ್ಡವರು, ತುಂಬಾ ತಿಳಿದಂಥವರು, ಅವರಿಗೆ ಮೊದಲಿಂದಲೂ ನಾವು ಗೌರವ ನೀಡುತ್ತಾ ಬಂದಿದ್ದೇವೆ. ಅವರು ಅಧಿಕಾರ ಕಳದುಕೊಂಡ ನಂತರ ಹೀಗೆ ಹತಾಶರಾಗಿ ಏನೇನೋ ಮಾತಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ನಲ್ಲೇ ಭಿನ್ನಮತ ಇದೆ ಎಂದ ಶ್ರೀರಾಮುಲು, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ(DK Shivakumar) ಪೈಪೋಟಿ ಮಾಡುತ್ತಿರುವುದರಿಂದ ಕಾಂಗ್ರೆಸ್‌ನಲ್ಲೇ ಭಿನ್ನಮತ ಪ್ರಾರಂಭವಾಗಿದೆ. ಸಿದ್ದರಾಮಯ್ಯ ಮಾತಾಡಿದಂತೆ ನಮಗೂ ಮಾತನಾಡಲು ಬರುತ್ತದೆ. ಆದರೆ, ಅಂಥ ಸಂಸ್ಕೃತಿ ನಮ್ಮದಲ್ಲ ಎಂದರು.

ಕಾಗದ ರಹಿತ ವ್ಯವಸ್ಥೆಗೆ ಸಾರಿಗೆ ಇಲಾಖೆ ಸಿದ್ಧತೆ: ಸಚಿವ ರಾಮುಲು

ಭಾರತಿಯರನ್ನು, ಆರ್‌ಎಸ್‌ಎಸ್‌ ಅನ್ನು ತಾಲೀಬಾನ್‌ಗೆ ಹೋಲಿಕೆ ಮಾಡುವುದು ಸರಿಯಲ್ಲ. ನಮ್ಮ ದೇಶ ಅತ್ಯಂತ ಸುರಕ್ಷಿತವಾಗಿದೆ. ದೇಶದ ಬಗ್ಗೆ ಸಿದ್ದರಾಮಯ್ಯ ಏನೇನು ಮಾತನಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ಅವರು ಅಧಿಕಾರ ಕಳೆದುಕೊಂಡ ನಂತರ ಈ ರೀತಿ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂಬುದು ಸ್ಪಷ್ಟಎಂದರು.

ದುರ್ಗಾದೇವಿ ದರ್ಶನ ಪಡೆದ ಶ್ರೀರಾಮುಲು

ಗಂಗಾವತಿ ತಾಲೂಕಿನ ಆನೆಗೊಂದಿಯ ಆದಿಶಕ್ತಿ ದುರ್ಗಾದೇವಿ ದೇವಸ್ಥಾನಕ್ಕೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಗೋ ಶಾಲೆಗೆ ಭೇಟಿ ನೀಡಿದರು. ನಂತರ ಮಾತನಾಡಿದ ಬಿ. ಶ್ರೀರಾಮುಲು ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ದೇವಾಲಯಗಳು ಪ್ರವಾಸಿಗರಿಗೆ ಅನುಕೂಲವಾಗುವಂತೆ ದೇವಸ್ಥಾನ ಜೀರ್ಣೋದ್ದಾರಕ್ಕಾಗಿ ಇನ್ನೂ ಹೆಚ್ಚಿನ ಅನುಕೂಲ ಮಾಡಿಕೊಂಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರು ಸಚಿವರನ್ನು ಸ್ವಾಗತಿಸಿದರು. ಇದಕ್ಕಿಂತ ಪೂರ್ವದಲ್ಲಿ ಸಚಿವರು ಪಂಪಾಸರೋವರದ ವಿಜಯಲಕ್ಷ್ಮೀ ದೇವಸ್ಥಾತನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಯುವ ಮುಖಂಡ ಸಂತೋಷ ಕೆಲೋಜಿ, ಮಂಜುನಾಥ ಶಿರಿಗೇರಿ, ರಮೇಶ ಹೊಸಮನಿ ಸೇರಿದಂತೆ ಇತರರು ಇದ್ದರು.
 

click me!