
ಉತ್ತರ ಕನ್ನಡ : ಮುಂಡಗೋಡ ಘಟಕದಿಂದ ರಾಯಚೂರಿಗೆ ನೂತನ ಬಸ್ ಸೇವೆ ಆರಂಭಿಸಲಾಗಿದ್ದು, ಬುಧವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಪ್ರತಿದಿನ ಬೆಳಗ್ಗೆ 10ಗಂಟೆಗೆ ಮುಂಡಗೋಡದಿಂದ ಹೊರಡುವ ಬಸ್ ಹುಬ್ಬಳ್ಳಿ, ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ಮಾನ್ವಿ ಮಾರ್ಗವಾಗಿ ಸಂಜೆ 7 ಗಂಟೆಗೆ ರಾಯಚೂರು ತಲುಪುತ್ತದೆ. ಮರು ದಿನ ಬೆಳಗ್ಗೆ 8 ಗಂಟೆಗೆ ರಾಯಚೂರಿನಿಂದ ಹೊರಟು ಸಂಜೆ 5 ಗಂಟೆಗೆ ಮುಂಡಗೋಡ ತಲುಪುತ್ತದೆ.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ರಾಠೋಡ, ತಾಲೂಕು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಹಾಗೂ ಗ್ಯಾರಂಟಿ ಸದಸ್ಯರಾದ ಧರ್ಮರಾಜ ನಡಗೇರ, ಹನುಮಂತಗೌಡ, ಸಚಿನ್ ಬಾಂದೇಕರ್, ಪಪಂ ಮಾಜಿ ಸದಸ್ಯ ಎಂ.ಕೆ. ರಜಾಕ, ಮುಂಡಗೋಡ ಡಿಪೋ ಮ್ಯಾನೇಜರ್ ಸಲೀಂ ಕುರ್ತುಕೋಟಿ, ಬಸವರಾಜ ಸಂಗಮೇಶ್ವರ, ಆಶಿಫ್ ಮಖಾಂದಾರ ಮುಂತಾದವರಿದ್ದರು.
ಹೊಸ ಬಸ್ ನಿಲ್ದಾಣದ ಬಳಿ ಸಾರಿಗೆ ಸಂಸ್ಥೆಯ ಬಸ್ ಒಂದರ ಬ್ರೇಕ್ ಫೇಲ್ ಆದ ಪರಿಣಾಮ, ಎರಡು ಬೈಕ್ಗಳು ಬಸ್ಸಿನ ಚಕ್ರದಡಿ ಸಿಲುಕಿ ಸವಾರರು ಪಾರಾದ ಘಟನೆ ಬುಧವಾರ ಸಂಜೆ ನಡೆದಿದೆ. ಅದೃಷ್ಟವಶಾತ್ ಬೈಕ್ ಸವಾರರು ಸಮಯಪ್ರಜ್ಞೆ ಮೆರೆದು ಜಿಗಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಂಡರಗಿಯಿಂದ ಗದಗ ನಗರಕ್ಕೆ ಬರುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್, ಕೇಂದ್ರ ಬಸ್ ನಿಲ್ದಾಣದ ಸಮೀಪ ಬರುತ್ತಿದ್ದಂತೆ ಏಕಾಏಕಿ ಬ್ರೇಕ್ ಫೇಲ್ ಆಗಿದೆ. ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಲು ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ಬಸ್ಸಿನ ಹಿಂಬದಿಯಲ್ಲೇ ಬರುತ್ತಿದ್ದ ಎರಡು ದ್ವಿಚಕ್ರ ವಾಹನಗಳ ಮೇಲೆ ಬಸ್ ನುಗ್ಗಿದೆ.
ಬಸ್ ತಮ್ಮ ಕಡೆಗೆ ನಿಯಂತ್ರಣ ತಪ್ಪಿ ಬರುತ್ತಿರುವುದನ್ನು ಮತ್ತು ಅದರ ಅಪಾಯವನ್ನು ತಕ್ಷಣವೇ ಅರಿತ ಇಬ್ಬರು ಬೈಕ್ ಸವಾರರು, ವಾಹನಗಳನ್ನು ರಸ್ತೆಯಲ್ಲೇ ಬಿಟ್ಟು ಪಕ್ಕಕ್ಕೆ ಜಿಗಿದಿದ್ದಾರೆ. ಪರಿಣಾಮವಾಗಿ ಇಬ್ಬರೂ ಸವಾರರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಸವಾರರ ಕಣ್ಣೆದುರೇ ಅವರ ಎರಡು ಬೈಕ್ಗಳು ಬಸ್ಸಿನ ಹಿಂಬದಿಯ ಚಕ್ರಗಳ ಅಡಿಯಲ್ಲಿ ಸಿಲುಕಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.
ಬಸ್ ಏಕಾಏಕಿ ಹಿಂದಕ್ಕೆ ನುಗ್ಗಿದ ಹಾಗೂ ಬೈಕ್ಗಳು ಚಕ್ರದಡಿ ಸಿಲುಕಿದ ಸದ್ದಿಗೆ ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ಪ್ರಯಾಣಿಕರು ಬೆಚ್ಚಿಬಿದ್ದಿದ್ದು, ಸ್ಥಳದಲ್ಲಿ ಕೆಲಕಾಲ ತೀವ್ರ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸಾರಿಗೆ ಸಂಸ್ಥೆಯಲ್ಲಿ ಸದ್ಯ ಹಳೆಯ ಹಾಗೂ ಸೂಕ್ತ ನಿರ್ವಹಣೆ ಇಲ್ಲದ ಡಕೋಟಾ ಬಸ್ ಗಳೇ ಇಂತಹ ಅಹಿತಕರ ಘಟನೆಗಳಿಗೆ ಮುಖ್ಯ ಕಾರಣವಾಗಿದೆ.