ಹುಬ್ಬಳ್ಳಿ: ಲೈಫ್‌ಲೈನ್‌ಲ್ಲಿ ಐವರ ಸಾವು ಪ್ರಕರಣ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ ಡಿಎಚ್‌ಒ

Published : May 12, 2021, 07:31 AM IST
ಹುಬ್ಬಳ್ಳಿ: ಲೈಫ್‌ಲೈನ್‌ಲ್ಲಿ ಐವರ ಸಾವು ಪ್ರಕರಣ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ ಡಿಎಚ್‌ಒ

ಸಾರಾಂಶ

* ಪ್ರತಿಕ್ರಿಯೆಗೆ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾಧಿಕಾರಿ ಹಿಂದೇಟು * ಆಕ್ಸಿಜನ್‌ ಕೊರತೆ ಸಾವಿಗೆ ಕಾರಣವಲ್ಲ ಎಂದು ಸ್ವತಃ ಹೇಳಿದ್ದ ಜಿಲ್ಲಾಧಿಕಾರಿಗಳು  * ಆಸ್ಪತ್ರೆ ಅಥವಾ ಸಿಬ್ಬಂದಿಯ ಲೋಪವಿದ್ದರೆ ಕ್ರಮವಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯ.  

ಹುಬ್ಬಳ್ಳಿ(ಮೇ.12): ಇಲ್ಲಿನ ಲೈಫ್‌ಲೈನ್‌ ಆಸ್ಪತ್ರೆಯಲ್ಲಿ ಕಳೆದ ಮೇ 4ರಂದು ಕೆಲವೇ ನಿಮಿಷಗಳ ಅಂತರದಲ್ಲಿ ಐವರು ಕೋವಿಡ್‌ ರೋಗಿಗಳು ಮೃತಪಟ್ಟ ಪ್ರಕರಣದ ತನಿಖೆಗೆ ಸಂಬಂಧಿಸಿ ನೇಮಕವಾಗಿದ್ದ ತಂಡವು ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ವರದಿಯಲ್ಲೇನಿದೆ ಎಂಬ ಸತ್ಯವನ್ನು ಜಿಲ್ಲಾಡಳಿತ ಬಹಿರಂಗಪಡಿಸಬೇಕಿದೆ.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಎಸ್‌.ಎಂ. ಹೊನಕೇರಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್‌.ಬಿ. ನಿಂಬಣ್ಣವರ, ತಾಲೂಕು ಆರೋಗ್ಯಾಧಿಕಾರಿ ಡಾ. ಆರ್‌.ಎಸ್‌. ಹಿತ್ತಲಮನಿ ಸೇರಿ ಮೂವರು ಅಧಿಕಾರಿಗಳ ತಂಡ ಮಾಹಿತಿ ಕಲೆಹಾಕಿ ವರದಿ ಸಿದ್ಧಪಡಿಸಿ ಡಿಎಚ್‌ಒ ಡಾ. ಯಶವಂತ ಮದೀನಕರ ಅವರಿಗೆ ನೀಡಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.

"

ಹುಬ್ಬಳ್ಳಿ: ಐಸಿಯುನಲ್ಲಿ ದುರಂತ, 5 ಕೊರೋನಾ ರೋಗಿಗಳ ಸಾವು

ವರದಿಯಲ್ಲೇನಿದೆ?

ಡಿಎಚ್‌ಒ ಡಾ. ಯಶವಂತ ಮದೀನಕರ ಮಾತನಾಡಿ, ಆಸ್ಪತ್ರೆಯಲ್ಲಿ ಅಗತ್ಯದಷ್ಟುಆಕ್ಸಿಜನ್‌ ಇತ್ತು ಎಂಬ ಮಾಹಿತಿಯಿದೆ. ರೋಗಿಗಳ ಪರಿಸ್ಥಿತಿ ಏನಿತ್ತು? ಐವರ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ವೈದ್ಯರ ತಂಡವು ವಿಶ್ಲೇಷಿಸಿ ವರದಿ ನೀಡಿದೆ. ಇನ್ನು, ತಾಂತ್ರಿಕ ತಂಡವು ಆಸ್ಪತ್ರೆಯ ಆಕ್ಸಿಜನ್‌ ಅಲಾರಾಂ, ಪೂರೈಕೆಯ ಕುರಿತು ತಾಂತ್ರಿಕ ಮಾಹಿತಿಯನ್ನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವು ಜಿಲ್ಲಾಧಿಕಾರಿಗಳಿಗೆ ತಲುಪಿಸಿದ್ದೇವೆ ಎಂದರು.
ಇನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ್‌ ಮಾತನಾಡಿ, ಕೋವಿಡ್‌ ಸೋಂಕುಳ್ಳ ವ್ಯಕ್ತಿ ಮೃತಪಟ್ಟಾಗ ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಅದರಂತೆ ಲೈಫ್‌ಲೈನ್‌ ಪ್ರಕರಣದಲ್ಲೂ ಎಂಜಿನಿಯರಿಂಗ್‌ ಸೆಕ್ಷನ್‌, ಅನಸ್ತೇಶಿಯಾ ಕುರಿತು ಹಾಗೂ ರೋಗಿಗಳ ಸ್ಥಿತಿ ಬಗ್ಗೆ ವರದಿ ಬಂದಿದೆ. ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಮುಂದೆ ಸರ್ಕಾರ ಯಾವ ರೀತಿಯ ಸೂಚನೆ ನೀಡುತ್ತದೊ ಅದನ್ನು ಪಾಲಿಸಲಾಗುವುದು ಎಂದರು.

ವರದಿ ಬಹಿರಂಗ ಅಗತ್ಯ

ಇನ್ನು, ಮೇ 4ರಂದು ಕೆಲವೆ ನಿಮಿಷಗಳಲ್ಲಿ ಐವರು ಕೋವಿಡ್‌ ರೋಗಿಗಳು ಮೃತಪಟ್ಟಿರುವುದಕ್ಕೆ ಆಕ್ಸಿಜನ್‌ ಕೊರತೆ ಅಥವಾ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವೇ ಕಾರಣ ಎಂಬ ಆರೋಪ ಸಂಬಂಧಿಕರಿಂದ ಕೇಳಿಬಂದಿತ್ತು. ಮಧ್ಯಾಹ್ನದವರೆಗೂ ಆರೋಗ್ಯವಾಗಿದ್ದವರು ಹಠಾತ್‌ ನಿಧನರಾಗಿದ್ದಾರೆ ಎಂದು ಸಂಬಂಧಿಕರು ಅಳಲು ತೋಡಿಕೊಂಡಿದ್ದರು.

ಆಕ್ಸಿಜನ್‌ ಕೊರತೆ ಸಾವಿಗೆ ಕಾರಣವಲ್ಲ ಎಂದು ಸ್ವತಃ ಜಿಲ್ಲಾಧಿಕಾರಿಗಳು ಹೇಳಿದ್ದರು. ಹೀಗಾಗಿ ಸಾವಿಗೆ ಕಾರಣವೇನು ಎಂಬ ಅಂಶ ಬಹಿರಂಗವಾಗಬೇಕಿದೆ. ಒಂದು ವೇಳೆ ಆಸ್ಪತ್ರೆಯ ಅಥವಾ ಸಿಬ್ಬಂದಿಯ ಲೋಪವಿದ್ದರೆ ಕ್ರಮವಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಏನಾಗಿತ್ತು? 

ಅಂದು ಸಂಜೆ 5 ಗಂಟೆ ಸುಮಾರಿಗೆ ಲೈಫ್‌ಲೈನ್‌ ಆಸ್ಪತ್ರೆಯಲ್ಲಿ ದಾಖಲಾಗಿ ಐಸಿಯುನಲ್ಲಿದ್ದ ಐವರು ಕೋವಿಡ್‌ ಸೋಂಕಿತರ ಸ್ಥಿತಿ ಗಂಭೀರವಾಗಿತ್ತು. ಸಿಬ್ಬಂದಿ ಪರಿಸ್ಥಿತಿ ನಿಭಾಯಿಸಲು ಯತ್ನಿಸಿದರೂ ಕೆಲವೆ ನಿಮಿಷಗಳ ಅಂತರದಲ್ಲಿ ಜಿಪಂ ಮಾಜಿ ಸದಸ್ಯ ಸೇರಿದಂತೆ ಐವರು ಮೃತಪಟ್ಟಿದ್ದರು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ತನಿಖೆಗೆ ತಂಡವನ್ನು ರಚನೆ ಮಾಡಲಾಗಿತ್ತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಮೊಬೈಲ್ ನೋಡುತ್ತಾ ಕುಳಿತ ತಾಯಿ; 4ನೇ ಮಹಡಿಯಿಂದ ಕೆಳಗೆ ಬಿದ್ದ ಮಗು, ಸಾವು-ಬದುಕಿನ ನಡುವೆ ಹೋರಾಟ
ಬಾಂಗ್ಲಾ ವಲಸಿಗರ ಗಡಿಪಾರಿಗೆ ಭಾರೀ ಪ್ರತಿಭಟನೆ: ಅಕ್ರಮ ನುಸುಳುಕೋರರು, ಜನಸಂಖ್ಯಾ ಬದಲಾವಣೆ, ಚಿಂತಕ ಸೂಲಿಬೆಲೆ ಎಚ್ಚರಿಸಿದ್ದೇನು?