ಧಾರವಾಡ: ವಿದ್ಯಾರ್ಥಿಗಳಿಂದ ಯೋಧರಿಗೆ ರಾಖಿ, ಗ್ರೀಟಿಂಗ್ಸ್‌ ರವಾನೆ!

By Kannadaprabha NewsFirst Published Aug 3, 2020, 10:48 AM IST
Highlights

35ಕ್ಕೂ ಅಧಿಕ ವಿದ್ಯಾರ್ಥಿಗಳಿಂದ 206 ರಾಖಿ, 187 ಗ್ರೀಟಿಂಗ್ಸ್‌ ರವಾನೆ| ಮನೆಯಲ್ಲಿನ ದವಸ-ಧಾನ್ಯ ಹಾಗೂ ದಿನ ಬಳಕೆ ವಸ್ತು ಬಳಿಸಿ ರಾಖಿ ಸಿದ್ಧ| ದೇಶದ ಗಡಿಯಲ್ಲಿ ದಣಿವರಿಯದೇ ಹಗಲಿರುಳು ನಮ್ಮ ಭಾರತೀಯ ಸೇನೆಯ ಯೋಧರ ಕಾರ್ಯವನ್ನು ಸ್ಮರಿಸುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ರಾಖಿ ಮತ್ತು ಗ್ರೀಟಿಂಗ್‌ಗಳನ್ನು ತಯಾರಿಸಿದ ವಿದ್ಯಾರ್ಥಿಗಳು|

ಶಿವಕುಮಾರ ಮುರಡಿಮಠ

ಧಾರವಾಡ(ಆ.03): ಇಡೀ ಕುಟುಂಬವನ್ನು ತೊರೆದು ದೇಶ ಕಾಯುತ್ತಿರುವ ಸೈನಿಕರು ಈ ಬಾರಿ ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಲು ವಿದ್ಯಾರ್ಥಿಗಳ ತಂಡವೊಂದು ರಾಖಿ ಹಾಗೂ ಶುಭ ಕೋರುವ ಪತ್ರಗಳನ್ನು ರವಾನಿಸುವ ಮೂಲಕ ಧನ್ಯತಾ ಭಾವ ಮರೆದಿದೆ.

ಮನೆಯಲ್ಲಿರುವ ದವಸ-ಧಾನ್ಯಗಳು ಸೇರಿದಂತೆ ವಿವಿಧ ಕಚ್ಚಾ ವಸ್ತುಗಳನ್ನು ಬಳಕೆ ಮಾಡಿ ಕಲಾತ್ಮಕವಾಗಿ ರಾಖಿ ಮತ್ತು ಶುಭಕೋರುವ ಪತ್ರಗಳನ್ನು ಸಿದ್ಧಪಡಿಸಿ ಒಂದು ವಾರದ ಹಿಂದೆಯೇ ಅಂಚೆ ಮೂಲಕ ಅರುಣಾಚಲ ಪ್ರದೇಶದಲ್ಲಿರುವ 200ಕ್ಕೂ ಹೆಚ್ಚು ಯೋಧರಿಗೆ 206 ರಾಖಿ, 187 ಗ್ರೀಟಿಂಗ್ಸ್‌ಗಳನ್ನು ಕಳುಹಿಸಿದೆ ಈ ವಿದ್ಯಾರ್ಥಿಗಳ ತಂಡ.

31 ವಿದ್ಯಾರ್ಥಿಗಳ ತಂಡ:

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮನೆಯಲ್ಲಿ ಕ್ರಿಯಾತ್ಮಕವಾಗಿ ಕಸದಿಂದ ರಸ ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ 31ಕ್ಕೂ ಅಧಿಕ ಎಂಜಿನಿಯರಿಂಗ್‌ ಮತ್ತು ಪದವಿ ವಿದ್ಯಾರ್ಥಿಗಳ ತಂಡವು ಯೋಧರಿಗೆ ಶುಭಾಶಯ ಕೋರುವ ನಿಟ್ಟಿನಲ್ಲಿ ಕ್ರಿಯಾತ್ಮಕವಾಗಿ ರಾಖಿಗಳನ್ನು ತಯಾರಿಸಿದ್ದಾರೆ. ಹುಬ್ಬಳ್ಳಿ, ಧಾರವಾಡ, ಬಳ್ಳಾರಿ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಕಾಲೇಜಿನ ವಿದ್ಯಾರ್ಥಿಗಳ ಈ ಕಾರ್ಯಕ್ಕೆ ದೇಶಪಾಂಡೆ ಪ್ರತಿಷ್ಠಾನದ ಲೀಡರ್ಸ್‌ ಎಕ್ಸ್‌ಲ್‌ರೇಟಿಂಗ್‌ ಡೆವಲೆಂಪಮೆಂಟ್‌ ಪ್ರೋಗ್ರಾಂ ಅಡಿಯಲ್ಲಿ ವೇದಿಕೆ ಕಲ್ಪಿಸಲಾಗಿದೆ ಎನ್ನುವುದು ವಿಶೇಷ.

ಹುಬ್ಬಳ್ಳಿ: ಏಷ್ಯಾದ ಅತಿ ದೊಡ್ಡ ಎಪಿಎಂಸಿಗೆ ಆರ್ಥಿಕ ಸಂಕಷ್ಟದ ಭೀತಿ

ದವಸ-ಧಾನ್ಯ ಬಳಕೆ:

ವಿದ್ಯಾರ್ಥಿಗಳು ಮನೆಯಲ್ಲಿನ ಗೋದಿ, ಮೆಕ್ಕೆಜೋಳ, ಅಕ್ಕಿ, ಜೋಳ ಸೇರಿದಂತೆ ವಿವಿಧ ಹಣ್ಣಿನ ಬೀಜಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ ರಾಖಿಗಳನ್ನು ತಯಾರಿಸಿದ್ದಾರೆ. ಜತೆಗೆ ಗ್ರೀಟಿಂಗ್‌ ಕಾರ್ಡ್‌ಗಳನ್ನು ಸಹ ತಯಾರಿಸಿ ಈ ಮೂಲಕ ಬಾಂಧವ್ಯ ಮೆರೆದಿದ್ದಾರೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯತೆ ಬಳಸಿ ಅತ್ಯಂತ ಆಕರ್ಷಕವಾದ ರಾಖಿ ಮತ್ತು ಗ್ರೀಟಿಂಗ್ಸಗಳನ್ನು ತಯಾರಿಸಿದ್ದಾರೆ.

ದೇಶದ ಗಡಿಯಲ್ಲಿ ದಣಿವರಿಯದೇ ಹಗಲಿರುಳು ನಮ್ಮ ಭಾರತೀಯ ಸೇನೆಯ ಯೋಧರ ಕಾರ್ಯವನ್ನು ಸ್ಮರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಸರ ಸ್ನೇಹಿ ರಾಖಿ ಮತ್ತು ಗ್ರೀಟಿಂಗ್‌ಗಳನ್ನು ತಯಾರಿಸಿದ್ದಾರೆ. ಯೋಧರಿಗೆ ವಿಭಿನ್ನ ರೀತಿಯ ಶುಭಾಶಯಗಳನ್ನು ತಿಳಿಸುವ ಪ್ರಯತ್ನ ಇದಾಗಿದೆ ಎನ್ನುತ್ತಾರೆ ಯೋಜನೆಯ ಉಪ ವ್ಯವಸ್ಥಾಪಕ ಗುರುಸಿದ್ದಯ್ಯ ಕೊಣ್ಣೂರಮಠ.

ಕ್ರಿಯಾತ್ಮಕ ಚಟುವಟಿಕೆಗಳಿಂದ ಬಹುತೇಕ ತ್ಯಾಜ್ಯವಸ್ತುಗಳಿಗೆ ಹೊಸ ರೂಪ ನೀಡಬಹುದು. ಯೋಧರಿಗೆ ಪತ್ರ ಮತ್ತು ರಾಖಿಗಳ ಮೂಲಕ ಶುಭಕೊರುವ ಅವಕಾಶ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಲಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಮತ್ತಷ್ಟುಸೃಜನಶೀಲತೆ ಹೆಚ್ಚಿದಂತಾಗುತ್ತದೆ ಎಂದು ಕಾರ್ಡೋಜಾ ಲೀಡ್‌ ಕಾರ್ಯಕ್ರಮದ ವ್ಯವಸ್ಥಾಪಕಿ ಅನಿಷಾ ಅವರು ತಿಳಿಸಿದ್ದಾರೆ. 
 

click me!