
ಧಾರವಾಡ (ಜೂ.13): ತಾಲ್ಲೂಕಿನ ಗರಗ ಗ್ರಾಮದಲ್ಲಿ ನಡೆದಿದ್ದ ಅಪ್ರಾಪ್ತೆ ಬಾಲಕಿಯ ಆ*ತ್ಮಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಗರಗ ಪೊಲೀಸ್ ಇನ್ಸ್ಪೆಕ್ಟರ್ (CPI) ಶಿವಯೋಗಿ ಲೋಹಾರ್ ಅವರನ್ನು ಅಮಾನತುಗೊಳಿಸಿ ಧಾರವಾಡ ಎಸ್ಪಿ ಗುಂಜನ್ ಆರ್ಯ ಆದೇಶ ಹೊರಡಿಸಿದ್ದಾರೆ.
ಮೇ 8 ರಂದು ಗರಗ ಗ್ರಾಮದ ಅಪ್ರಾಪ್ತೆ ಬಾಲಕಿ ಪೂರ್ಣಿಮಾ ವಡ್ಡರ್ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಳು. ಇದು 'ಲವ್ ಜಿಹಾದ್' ಪ್ರಕರಣ ಎಂದು ಆರೋಪಿಸಲಾಗಿತ್ತು. ಆದರೆ, ಈ ಬಗ್ಗೆ ತಕ್ಷಣವೇ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳದ ಇನ್ಸ್ಪೆಕ್ಟರ್ ಶಿವಯೋಗಿ ಲೋಹಾರ್, ಪ್ರಕರಣವನ್ನು ಮುಚ್ಚಿಹಾಕಲು ರಾಜಿ ಸಂಧಾನ ಮಾಡಿಸಿದ್ದರು ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣ ದಾಖಲಿಸಲು ತೀವ್ರ ವಿಳಂಬ ಧೋರಣೆ ಅನುಸರಿಸಿದ ಹಿನ್ನೆಲೆಯಲ್ಲಿ ಎಸ್ಪಿ ಈ ಕ್ರಮ ಜರುಗಿಸಿದ್ದಾರೆ.
ಪೊಲೀಸರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಬಜರಂಗದಳದ ಕಾರ್ಯಕರ್ತರು, ನಿನ್ನೆ ಗರಗ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಸಾರ್ವಜನಿಕ ವಲಯ ಹಾಗೂ ಸಂಘಟನೆಗಳಿಂದ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಎಸ್ಪಿ ಗುಂಜನ್ ಆರ್ಯ ಅವರು ಇನ್ಸ್ಪೆಕ್ಟರ್ನನ್ನು ಅಮಾನತುಗೊಳಿಸಿ ಇಂದು ಅಧಿಕೃತ ಆದೇಶ ಹೊರಡಿಸಿದ್ದಾರೆ.