
ಬಾಗಲಕೋಟೆ: ಧರ್ಮಸ್ಥಳ ಪ್ರಕರಣ ಸಂಬಂಧ ಕ್ಷೇತ್ರದ ಹೆಸರು ಹಾಳು ಮಾಡುತ್ತಿದ್ದಾರೆಂದು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಯ್ತು. ಧರ್ಮಸ್ಥಳ ಅಭಿಮಾನಿಗಳ ಸಂಘದಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಸ್ಲಿಂ ಮಹಿಳೆಯೊಬ್ಬರು ಧರ್ಮಸ್ಥಳದ ಸೇವೆಯನ್ನು ಹೊಗಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಮಂಜುನಾಥ ಸ್ವಾಮಿಯ ಕೃಪೆಯಿಂದ ನಮಗೂ ಸಾಕಷ್ಟು ಒಳ್ಳೆಯದಾಗಿದೆ. ಹೆಣ್ಣುಮಕ್ಕಳಿಗೆ ಧರ್ಮಸ್ಥಳದಿಂದ ಸಾಕಷ್ಟು ಅನುಕೂಲಗಳು ಸಿಕ್ಕಿವೆ. ಕೆಲವರು ತಮ್ಮ ಆಶೆ ಮತ್ತು ಹಣಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಅಂತಹವರಿಗೆ ಮುಂದೆ ಮಂಜುನಾಥ ಸ್ವಾಮಿ ಏನು ಮಾಡ್ತಾನೋ, ಅದನ್ನು ಅವರೇ ನೋಡುತ್ತಾರೆ. ಧರ್ಮಸ್ಥಳ ಸಂಘದಿಂದ ಮಕ್ಕಳ ಶಿಕ್ಷಣ ಸೇರಿದಂತೆ ಅನೇಕ ಸೌಲಭ್ಯಗಳು ಲಭ್ಯವಾಗಿವೆ. ಎಲ್ಲವನ್ನೂ ಇಲ್ಲಿಯೇ ಇದ್ದು ಮಾಡಿಕೊಂಡಿದ್ದೇವೆ. ಹೆಗ್ಗಡೆಯವರ ಜೊತೆ ನಾವೆಲ್ಲಾ ಹೆಣ್ಣುಮಕ್ಕಳ ಪರವಾಗಿ ಸದಾ ನಿಂತುಕೊಳ್ಳುತ್ತೇವೆ. ಅವರು ಧೈರ್ಯದಿಂದ ಇರಬೇಕೆಂಬುದೇ ನಮ್ಮ ಹಾರೈಕೆ ಎಂದಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಧರ್ಮಸ್ಥಳ ರಕ್ಷಣೆಗೆ ನಿಂತ ಭಕ್ತರು, ಬಾಗಲಕೋಟೆ ಧರ್ಮಸ್ಥಳ ಅಭಿಮಾನಿಗಳ ಸಂಘದಿಂದ ನವನಗರದ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಭಕ್ತರು ಧರ್ಮಸ್ಥಳ ಕ್ಷೇತ್ರ ಮತ್ತು ಹೆಗ್ಗಡೆಯವರ ಕುಟುಂಬದ ವಿರುದ್ಧ ಕೆಲವರು ಅವಹೇಳನಕಾರಿ ಮಾತು ಆಡಿರುವುದು ನಮಗೆ ನೋವು ತಂದಿದೆ. ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಾವು ಆಗ್ರಹಿಸುತ್ತೇವೆ. ಫೇಕ್ ಯೂಟ್ಯೂಬ್ ಚಾನೆಲ್ಗಳ ಮೂಲಕ ಧರ್ಮಸ್ಥಳದ ಹೆಸರು ಕೆಡಿಸುವ ಕೆಲಸ ತಕ್ಷಣ ನಿಲ್ಲಬೇಕು. ಎಸ್ಐಟಿ ತನಿಖೆಯನ್ನು ನಾವು ಸ್ವಾಗತಿಸುತ್ತೇವೆ. ಆರೋಪ ಮಾಡುವವರಿಗೆ ವಿದೇಶದಿಂದ ಹಣ ಬರುತ್ತಿದೆ, ಅದನ್ನೂ ಎಸ್ಐಟಿ ತನಿಖೆ ಮಾಡಬೇಕು. ಹೆಗ್ಗಡೆಯವರು ದೇವರಿದ್ದಂತೆ, ಅವರಿಗೆ ನೋವಾದರೆ ನಮಗೆಲ್ಲ ನೋವಾಗುತ್ತದೆ. ಅವಿವೇಕಿಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪೂಜ್ಯರ ಹಿಂದೆ ಸದಾಕಾಲ ನಾವು ಭಕ್ತರಾಗಿ ನಿಂತುಕೊಳ್ಳುತ್ತೇವೆ.
ಅಪ್ಪಾಜಿ (ಹೆಗ್ಗಡೆ) ಪರವಾಗಿ ಎಲ್ಲಿ ಬೇಕಾದರೂ ಹೋಗಲು ನಾವು ಸಿದ್ಧ. ಇಷ್ಟರವರೆಗೂ ತಾಳಿದ್ದೇವೆ, ಈಗ ಕಟ್ಟೊಡೆದಿದೆ. ಆರೋಪ ಮಾಡಿದವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಧರ್ಮ ಒಡೆಯುವವರ ವಿರುದ್ಧ ತಕ್ಷಣ ಕ್ರಮವಾಗಬೇಕು. ತನಿಖೆ ಮಾಡುತ್ತಿರುವವರೇ ಮೊದಲು ಬುದ್ಧಿಗೇಡಿಗಳಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳಿಗೆ ಮೊದಲು ಈ ವಿಷಯ ತಿಳಿಸಬೇಕು, ಅವರು ದೇಶ-ಧರ್ಮದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಬೇಕು. ಆರೋಪ ಸುಳ್ಳು ಎಂದು ಸಾಬೀತಾದರೆ, ಆರೋಪಿಗಳಿಗೆ ಜನರಿಂದಲೇ ಶಿಕ್ಷೆ ಕೊಡಿಸಬೇಕು. ಮಹಿಳೆಯರ ಸ್ವಸಹಾಯ ಸಂಘದ ಮೂಲಕ ನಮ್ಮನ್ನು ಗಟ್ಟಿಗೊಳಿಸಿರುವುದರಿಂದ ಹೋರಾಟ ನಿಲ್ಲುವುದಿಲ್ಲ.