
ಚಿಕ್ಕಮಗಳೂರು: ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿ ಮಾಡಿರುವ ಸುಳ್ಳು ಆರೋಪ ಪ್ರಕರಣದ ಬಗ್ಗೆ ಕಳಸ ತಾಲೂಕಿನ ಬಲಿಗೆ ಗ್ರಾಮದ ನಿವಾಸಿ ಹಾಗೂ ಧರ್ಮಸ್ಥಳದ ಮಾಜಿ ಉದ್ಯೋಗಿ ಸವಿನ್ ಜೈನ್ ಪ್ರತಿಕ್ರಿಯಿಸಿದ್ದಾರೆ. 1998ರಿಂದ 2002ರವರೆಗೆ ಧರ್ಮಸ್ಥಳದಲ್ಲಿ ಎಲೆಕ್ಟ್ರೀಶಿಯನ್ ಆಗಿ ಕೆಲಸ ಮಾಡಿದ ಸವಿನ್ ಜೈನ್ ಅವರು, ಧರ್ಮಸ್ಥಳದಲ್ಲಿ ಒಂದೇ ದಿನ ಎಂಟು ಶವಗಳನ್ನು ಹೂತ ಇತಿಹಾಸವೇ ಇಲ್ಲ. ಧರ್ಮಸ್ಥಳದಲ್ಲಿ ಸತ್ರೆ ಪುಣ್ಯಕ್ಕಾಗಿ ಹಲವರು ಬಂದು ಸಾಯುತ್ತಾರೆ. ಆದರೆ ಅಲ್ಲಿ ಯಾವುದೇ ಅಪರಾಧ ಚಟುವಟಿಕೆಗಳು ನಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ನಾನು ಧರ್ಮಸ್ಥಳದಲ್ಲಿ ಅನ್ನ ತಿಂದಿದ್ದೇನೆ. ಅಲ್ಲಿ ಶಾಂತಿ, ಸೇವಾ ಮನೋಭಾವ ಮಾತ್ರ ಇದೆ. ಅನಾಮಿಕನ ಆರೋಪಗಳ ಹಿಂದೆ ದೊಡ್ಡ ಷಡ್ಯಂತ್ರವಿದೆ. ಯಾವುದೇ ಸಣ್ಣ ಸಾಕ್ಷಿಯೂ ಇಲ್ಲದೆ. ಆರೋಪದಿಂದ ಧರ್ಮಸ್ಥಳದ ಹೆಸರಿಗೆ ಕಪ್ಪು ಚುಕ್ಕಿ ತರುವ ಪ್ರಯತ್ನ ನಡೆಯುತ್ತಿದೆ.
ಸವಿನ್ ಜೈನ್ ಅವರು ಮೃತ ಸೌಜನ್ಯ ಪ್ರಕರಣಕ್ಕೂ ಸ್ಪಷ್ಟನೆ ನೀಡುತ್ತಾ ಸೌಜನ್ಯಳಿಗೆ ನ್ಯಾಯ ಸಿಗಬೇಕು. ಆದರೆ, ಕೆಲವು ಜನರು ಸೌಜನ್ಯಳ ಫೋಟೋ ಹಿಡಿದು ಹಣ ಮಾಡುತ್ತಿದ್ದಾರೆ. ಈ ಪ್ರಕರಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ತನಿಖೆ ನಡೆಸಿ ಮುಕ್ತಾಯಗೊಳಿಸಬೇಕು ಎಂದು ಹೇಳಿದರು. ಜೀವನದಲ್ಲಿ ಜಿಗುಪ್ಸೆಗೊಂಡು ಕೆಲವರು ಧರ್ಮಸ್ಥಳಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂತಹ ಶವಗಳನ್ನು ಪೊಲೀಸರ ಮತ್ತು ಪಂಚಾಯಿತಿ ಪ್ರತಿನಿಧಿಗಳ ಸಮ್ಮುಖದಲ್ಲೇ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು ಎಂದು ನೆನಪಿಸಿದರು.
ಚಿಕ್ಕಮಗಳೂರಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಾತನಾಡಿದ ಮಹಿಳಾ ಭಕ್ತರು, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪ್ರಚಾರದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರ ನಡೆಸುತ್ತಿರುವ ದೊಡ್ಡ ಷಡ್ಯಂತ್ರ. ಇದರ ಹಿಂದೆ ಎಸ್ಟಿಪಿಐ ಕಮ್ಯೂನಿಸ್ಟ್ರ ಕೈವಾಡ ಸ್ಪಷ್ಟವಾಗಿ ಕಾಣುತ್ತಿದೆ. ಯಾರು ‘ಬುರುಡೆ, ಬುರುಡೆ’ ಎಂದು ತೋರಿಸಿದರೂ, ಅವರ ಬುರುಡೆ ಹೊಡೆಯುವವರೆಗೂ ನಮ್ಮ ಉಗ್ರ ಹೋರಾಟ ಮುಂದುವರಿಯುತ್ತದೆ ಎಂದು ಅವರು ಎಚ್ಚರಿಸಿದರು.
ಮಹಿಳಾ ಭಕ್ತರು 13ನೇ ಪಾಯಿಂಟ್ನಲ್ಲಿ ನಡೆದ ಶೋಧ ಕಾರ್ಯದ ವಿವರವನ್ನು ಹಂಚಿಕೊಂಡು, “ಮೊದಲು ಸಣ್ಣ ಹಿಟಾಚಿ ಯಂತ್ರವನ್ನು ತಂದರು, ನಂತರ ದೊಡ್ಡ ಹಿಟಾಚಿ ಯಂತ್ರವನ್ನು ಬಳಿಸಿದರು. ಸಾಮಾನ್ಯ ಬುದ್ಧಿಯಿಂದಲೇ ತಿಳಿಯುವ ವಿಷಯ ಹದಿಮೂರು ಅಡಿ ಅಗೆದು ಒಬ್ಬ ಮನುಷ್ಯನ ಶವವನ್ನು ಸಮಾಧಿ ಮಾಡಬಹುದೇ? ಅನಾಮಿಕ ತೋರಿಸಿದ ಜಾಗದಲ್ಲಿ ಒಂದು ಮೂಳೆಯೂ ಸಿಕ್ಕಿಲ್ಲ, ಯಾವುದೇ ಪುರಾವೆಯೂ ದೊರೆತಿಲ್ಲ ಎಂದು ಹೇಳಿದರು. ಧರ್ಮಸ್ಥಳವು ಕೇವಲ ಧಾರ್ಮಿಕ ಕ್ಷೇತ್ರವಲ್ಲ, ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದ ಕೇಂದ್ರವಾಗಿದೆ. ಧರ್ಮಸ್ಥಳ ಒಂದು ದೊಡ್ಡ ಆಲದ ಮರದಂತದ್ದು ಅದನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಘೋಷಿಸಿದರು.
ಧರ್ಮಸ್ಥಳದಲ್ಲಿ ಮೃತದೇಹಕ್ಕಾಗಿ ನಡೆಯುತ್ತಿರುವ ನಿರಂತರ ಉತ್ಖನನದ ವಿರುದ್ಧ ಭಕ್ತರಿಂದ ಚಿಕ್ಕಮಗಳೂರಿನಲ್ಲಿ ಬೃಹತ್ ಪ್ರತಿಭಟನೆ ಜರುಗಿತು. ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ವರೆಗೂ 2 ಕಿಲೋಮೀಟರ್ ಉದ್ದದ ಮೆರವಣಿಗೆಯಲ್ಲಿ 2,000ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದರು. ಮೈಕಿನಲ್ಲಿ "ಓಂ ನಮಃ ಶಿವಾಯ" ಭಜನೆಗಳನ್ನು ಹಾಡುತ್ತಾ, ತಮಟೆ ಬಾರಿಸುತ್ತಾ, ಎಂ.ಜಿ. ರಸ್ತೆಯ ಮೂಲಕ ಭಕ್ತರು ಮೆರವಣಿಗೆ ನಡೆಸಿದರು. ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ನೂರಾರು ಮಹಿಳೆಯರು ಸಹ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಹನುಮಂತಪ್ಪ ವೃತ್ತದಿಂದ ಪ್ರಾರಂಭವಾದ ಮೆರವಣಿಗೆಯು ಭಕ್ತರ ಏಕತೆಯನ್ನು ತೋರಿಸಿತು. ಭಕ್ತರು, “ಸುಳ್ಳಿನ ಮೃತದೇಹದ ಆರೋಪದ ಹಿಂದೆ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ಇದೆ. ಕುತಂತ್ರಿಗಳ ಷಡ್ಯಂತ್ರಕ್ಕೆ ಸರ್ಕಾರವೇ ಬೆಂಬಲ ನೀಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.