ಕೊರೋನಾ ಭೀತಿ, ಕೊಲ್ಲೂರಿಗೆ ಬರ್ತಿಲ್ಲ ಕೇರಳದ ಭಕ್ತರು

By Kannadaprabha NewsFirst Published Mar 12, 2020, 10:30 AM IST
Highlights

ಕೇರಳದಿಂದ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಕೊರೋನಾ ಕಾರಣದಿಂದ ಜನರು ಕೊಲ್ಲೂರಿಗೆ ಬರುತ್ತಿಲ್ಲ ಎಂದು ಅಂದಾಜಿಸಲಾಗಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ್‌ ಸುತಗುಂಡಿ ತಿಳಿಸಿದ್ದಾರೆ.

ಉಡುಪಿ(ಮಾ.12): ಕೊರೋನ ವೈರಸ್‌ನಿಂದಾಗಿ ಕೊಲ್ಲೂರಿನ ಶ್ರೀ ಮುಕಾಂಬಿಕಾ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಸುಮಾರು ಶೇ.20ರಷ್ಟುಇಳಿಮುಖವಾಗಿದೆ. ಆದರೆ ಉಡುಪಿ ಕೃಷ್ಣ ಮಠದಲ್ಲೇನೂ ಗಣನೀಯ ವ್ಯತ್ಯಾಸವಾಗಿಲ್ಲ. ಕೊಲ್ಲೂರು ದೇವಾಲಯದಲ್ಲಿ ಪ್ರತಿದಿನ ಸುಮಾರು 2500ದಷ್ಟುಮಂದಿ ಭಕ್ತರು ಭೇಟಿ ನೀಡುತ್ತಾರೆ, ಆದರೆ ಕಳೆದ 2 - 3 ದಿನಗಳಿಂದ ಸುಮಾರು 2000 ಮಂದಿಯಷ್ಟೇ ಭೇಟಿ ನೀಡಿದ್ದಾರೆ. ಮುಖ್ಯವಾಗಿ ಕೇರಳದಿಂದ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಕೊರೋನಾ ಕಾರಣದಿಂದ ಜನರು ಬರುತ್ತಿಲ್ಲ ಎಂದು ಅಂದಾಜಿಸಲಾಗಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ್‌ ಸುತಗುಂಡಿ ತಿಳಿಸಿದ್ದಾರೆ.

ಉಡುಪಿ ಕೃಷ್ಣ ಮಠಕ್ಕೂ ಈ ತಿಂಗಳಲ್ಲಿ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಪ್ರತಿವರ್ಷ ಫæಬ್ರವರಿಯಿಂದ ಏಪ್ರಿಲ್‌ ತಿಂಗಳಲ್ಲಿ ಶಾಲಾ ಕಾಲೇಜುಗಳಿಗೆ ಪರೀಕ್ಷೆಯ ಸಮಯವಾಗಿರುವುದರಿಂದ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಕಡಿಮೆಯೇ ಇರುತ್ತದೆ. ಅದರಂತೆ ಕಡಿಮೆಯಾಗಿದೆಯೇ ಹೊರತು ಕೊರೋನಾದಿಂದಾಗಿ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿರುವ ಬಗ್ಗೆ ತಮಗರಿವಿಲ್ಲ. ಪ್ರಸ್ತುತ ದಿನಪ್ರಂತಿ 3,000 ದಷ್ಟುಜನ ಬರ್ತಿದ್ದಾರೆ. ಬೇರೆ ತಿಂಗಳಲ್ಲಿ 5,000 - 10,000ವರೆಗೆ ಭಕ್ತರು ಬರುತ್ತಾರೆ ಎಂದು ಕೃಷ್ಣಮಠದ ಮಾಧ್ಯಮ ವಕ್ತಾರ ಶ್ರೀಶ ಭಟ್‌ ಕಡೇಕಾರ್‌ ತಿಳಿಸಿದ್ದಾರೆ.

ಚುನಾ​ವಣೆ ಗೆಲ್ಲುವ ದುರಾ​ಸೆ: BJP ವಿರುದ್ಧ ನಡೀತು ವಾಮಾಚಾರ..!

ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮತ್ತು ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಯಾತ್ರಿಗಳ ಸಂಖ್ಯೆ ಇಳಿಮುಖವಾಗಿಲ್ಲ. ಪರೀಕ್ಷೆ ಸಂದರ್ಭವಾದ್ದರಿಂದ ಕೊಂಚ ಕಡಿಮೆಯೆನಿಸಿದರೂ, ಉಳಿದಂತೆ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿಲ್ಲ.

click me!