ನಳನಳಿಸಲಿದೆ ಶಿರಸಿ ಜೈನ ಮಠದ ಕೆರೆ: 30 ಅಡಿ ಆಳದವರೆಗೆ ಹೂಳು ತೆರವು

Published : May 10, 2023, 07:13 PM IST
ನಳನಳಿಸಲಿದೆ ಶಿರಸಿ ಜೈನ ಮಠದ ಕೆರೆ: 30 ಅಡಿ ಆಳದವರೆಗೆ ಹೂಳು ತೆರವು

ಸಾರಾಂಶ

ಒಂದು ಪಕ್ಕದಲ್ಲಿ ಮಠ, ಇನ್ನೊಂದು ಪಕ್ಕದಲ್ಲಿ ತೋಟ, ಕಾಡು. ಸುಂದರ ಪರಿಸರದ ಮಧ್ಯೆ ಹೂಳು ತುಂಬಿದ್ದ ಕೆರೆಗೆ ಈಗ ಕಾಯಕಲ್ಪ ಆಗುತ್ತಿದೆ. ಈ ಮೂಲಕ ಇಲ್ಲಿನ ಜೈನ ಮಠದ ಪುರಾತನ ಕೆರೆ ಪುನರ್ಜನ್ಮ ಪಡೆಯುತ್ತಿದೆ. 

ಶಿರಸಿ (ಮೇ.10): ಒಂದು ಪಕ್ಕದಲ್ಲಿ ಮಠ, ಇನ್ನೊಂದು ಪಕ್ಕದಲ್ಲಿ ತೋಟ, ಕಾಡು. ಸುಂದರ ಪರಿಸರದ ಮಧ್ಯೆ ಹೂಳು ತುಂಬಿದ್ದ ಕೆರೆಗೆ ಈಗ ಕಾಯಕಲ್ಪ ಆಗುತ್ತಿದೆ. ಈ ಮೂಲಕ ಇಲ್ಲಿನ ಜೈನ ಮಠದ ಪುರಾತನ ಕೆರೆ ಪುನರ್ಜನ್ಮ ಪಡೆಯುತ್ತಿದೆ. ಇನ್ನೊಂದು ವಾರದೊಳಗೆ ಕಳೆದ ಎರಡು ತಿಂಗಳಿಂದ ನಡೆಯುತ್ತಿದ್ದ ಪುನಶ್ಚೇತನ ಕಾರ್ಯ ಪೂರ್ಣ ಆಗುತ್ತಿದ್ದು, ಕೆರೆಗೊಂದು ಆಕಾರ ಬಂದಿದೆ. ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರರು ಈ ಜೈನ ಮಠದ ಕೆರೆ ಅಭಿವೃದ್ಧಿಗೆ ಮುಂದಾಗಿದ್ದು, ಜೀಡು ಬೆಳೆದಿದ್ದ ಕೆರೆ ಜಾಗದಲ್ಲಿ ಜಲ ಸಂರಕ್ಷಣೆ ಕಾಮಗಾರಿ ಬಹುತೇಕ ಪೂರ್ಣ ಆಗುತ್ತಿದೆ. ಕಳೆದ ಹಲವು ದಶಕಗಳಿಂದ ಹೂಳು ತುಂಬಿಕೊಂಡಿದ್ದ ಸುಧಾಪುರ ಕೆರೆ ಈಗ ಒಂದೊಳ್ಳೆ ಸ್ಥಿತಿಗೆ ಬಂದಿದೆ. 

ಕೆರೆ ಹೂಳು ತೆಗೆದು ಮಠದ ಆವಾರದ ತಗ್ಗಿನ ಇನ್ನೊಂದು ಪಾಶ್ರ್ವಕ್ಕೆ ಸಾಗಿಸಲಾಗುತ್ತಿದೆ. ಜೈನ ಮಠದ ಆವರಣದಲ್ಲೇ ಇರುವ ಒಂದು ಎಕರೆಗೂ ಮಿಕ್ಕಿದ ಕೆರೆಯನ್ನು ಸುಮಾರು 30 ಅಡಿ ಆಳದ ತನಕ ಕಾರ್ಯಪಡೆ ಕಳೆದ 45 ದಿನಗಳಿಂದ ಕೆಲಸ ಮಾಡುತ್ತಿದೆ. ಈ ಕೆರೆ ಅಭಿವೃದ್ಧಿಯಿಂದ ಸುತ್ತಲಿನ ಅಡಕೆ ತೋಟ, ಬತ್ತದ ಗದ್ದೆಗೆ ನೀರಾವರಿ ಅನುಕೂಲ ಆಗಲಿದೆ. ಜೀವಜಲಕ್ಕೆ ಶಕ್ತಿ ಬರಲಿದೆ. ಜೈನ ಮಠದ ಶ್ರೀ ಭಟ್ಟಾಕಳಂಕ ಭಟ್ಟಾರಕ ಪಟ್ಟಾಚಾರ್ಯ ವರ್ಯ ಶ್ರೀಗಳ ಸಲಹೆ ಮೇರೆಗೆ ಕಾರ್ಯಪಡೆ ಅಭಿವೃದ್ಧಿಗೆ ಮುಂದಾಗಿದೆ. ಶ್ರೀನಿವಾಸ ಹೆಬ್ಬಾರ್‌ ತಮ್ಮ ಸ್ವಂತ ಖರ್ಚಿನಲ್ಲಿ ಮೂರು ಹಿಟಾಚಿ, ಮೂರ್ನಾಲ್ಕು ಟ್ರ್ಯಾಕ್ಟರ್‌ ಬಳಸಿ ಹೂಳೆತ್ತುವ ಕಾರ್ಯ ನಡೆಸಿದ್ದಾರೆ.

Karnataka Election 2023: ಮತದಾರರನ್ನು ಸೆಳೆಯಲು ಮತಗಟ್ಟೆಯಲ್ಲಿ ಧಾರವಾಡ ಪೇಡೆ ವಿಶೇಷ!

ಸೇವೆಗೆ ಅವಕಾಶ: ಕೆರೆ ಅಭಿವೃದ್ಧಿ ವೀಕ್ಷಣೆಯ ನಡುವೆ ಮಾತನಾಡಿದ ಹೆಬ್ಬಾರ್‌ ಅವರು, ಶಿರಸಿ ಜೀವಜಲ ಕಾರ್ಯಪಡೆಯಿಂದ ಹಲವಾರು ಕೆರೆಗಳ ಅಭಿವೃದ್ಧಿ ಮಾಡಲಾಗಿದೆ. ಈಗ ಜೈನ ಮಠದ ಆವರಣದಲ್ಲಿರುವ ಕೆರೆ ಹೂಳುತ್ತುವ ಕಾರ್ಯ ಬಹುತೇಕ ಮುಗಿದಿದೆ. ಅಂದಾಜು 30 ಅಡಿ ಹೂಳು ಎತ್ತಲಾಗಿದೆ. ಮುಂದಿನ ವರ್ಷದ ಮೇದಲ್ಲಿ 20 ಅಡಿ ಕನಿಷ್ಠ ನೀರು ನಿಲ್ಲುವ ಸಾಧ್ಯತೆ ಇದೆ ಎಂದರು ಹೆಬ್ಬಾರ. ವಿ.ಪಿ. ಹೆಗಡೆ ವೈಶಾಲಿ, ಅಕ್ಷಯ ಹೆಗಡೆ, ಎಂ.ಎಂ. ಭಟ್‌, ಶ್ರೀಧರ ಭಟ್ಟಕೊಳಗಿಬೀಸ್‌, ನಾಗರಾಜ ಶೆಟ್ಟಿಮುಂತಾದವರು ಇದ್ದರು.

ಜೈನ ಮಠದ ಬಾಗಿಲಿನಲ್ಲಿ ಇದ್ದ ಪುರಾತನ ಕೆರೆ ಅಭಿವೃದ್ಧಿಗೆ ಜೀವ ಜಲ ಕಾರ್ಯಪಡೆಗೆ ಸಿಕ್ಕ ಅವಕಾಶವು ಒಂದು ಪುಣ್ಯ ಎಂದೇ ಭಾವಿಸಿದ್ದೇವೆ. ವಾರಾಂತ್ಯದಲ್ಲಿ ಕೆರೆ ಅಭಿವೃದ್ಧಿ ಪೂರ್ಣವಾಗಲಿದೆ.
-ಶ್ರೀನಿವಾಸ ಹೆಬ್ಬಾರ, ಅಧ್ಯಕ್ಷರು, ಜೀವ ಜಲ ಕಾರ್ಯಪಡೆ, ಶಿರಸಿ

Karnataka Election 2023: ಬಳ್ಳಾರಿಯಲ್ಲಿ ಎರಡು ಕೈ ಇಲ್ಲದ ದಿವ್ಯಾಂಗನಿಂದ ಮತದಾನ

ಸರ್ಕಾರದಿಂದಾಗಲಿ, ಸಂಘ-ಸಂಸ್ಥೆಗಳಿಂದಾಗಲೀ ಯಾವ ಸಹಾಯವನ್ನೂ ನಿರೀಕ್ಷಿಸದೇ ತಮ್ಮದೇ ಮಾರ್ಗದಲ್ಲಿ ಖುಷಿ ಕಂಡುಕೊಳ್ಳುತ್ತಿರುವ ಜೀವಜಲ ಕಾರ್ಯಪಡೆಯ ಅಧ್ಯಕ್ಷರಾದ ಹೆಬ್ಬಾರ ಅವರು ಸಮಾಜಕ್ಕೊಂದು ಭೂಷಣ. ಅವರಿಗೆ ನೈತಿಕ ಬೆಂಬಲ ನೀಡುವಷ್ಟಕ್ಕಾದರೂ ಅವರ ಜತೆಗಿರಬೇಕು.
-ವೈಶಾಲಿ ವಿ.ಪಿ. ಹೆಗಡೆ, ಅಂಕಣಕಾರ

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ