ಉಡುಪಿ: ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬಂದರೂ ಕುಡಿಯುವ ನೀರಿಗೆ ತತ್ವಾರ

By Ravi JanekalFirst Published May 23, 2023, 12:52 PM IST
Highlights

ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಉಡುಪಿ ಜಿಲ್ಲೆಯಲ್ಲೂ ಈ ಬಾರಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಮುಂಗಾರು ಪೂರ್ವ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಜೀವನದಿಗಳು ಬತ್ತಿ ಬರಿದಾಗಿದೆ. ಈ ಬಾರಿ ಮುಂಗಾರು ಮಳೆಯು ವಿಳಂಬ ಸುರಿಯುವ ಕಾರಣ, ಈ ಪರಿಸ್ಥಿತಿ ಮತ್ತಷ್ಟು ಚಿಂತೆಗೀಡು ಮಾಡಿದೆ.

ಉಡುಪಿ (ಮೇ.23) : ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಉಡುಪಿ ಜಿಲ್ಲೆಯಲ್ಲೂ ಈ ಬಾರಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಮುಂಗಾರು ಪೂರ್ವ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಜೀವನದಿಗಳು ಬತ್ತಿ ಬರಿದಾಗಿದೆ. ಈ ಬಾರಿ ಮುಂಗಾರು ಮಳೆಯು ವಿಳಂಬ ಸುರಿಯುವ ಕಾರಣ, ಈ ಪರಿಸ್ಥಿತಿ ಮತ್ತಷ್ಟು ಚಿಂತೆಗೀಡು ಮಾಡಿದೆ.

ಐದು ವರ್ಷಗಳ ಬಳಿಕ ಈ ಬಾರಿ ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ಜೀವನದಿ ಸ್ವರ್ಣೆ ಬರಿದಾಗಿದ್ದು, ಉಡುಪಿಯಲ್ಲಿ ನೀರಿನ ಸಮಸ್ಯೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಈ ನಡುವೆ ಜಿಲ್ಲಾ ಆಸ್ಪತ್ರೆಯಲ್ಲಿ ಟ್ಯಾಂಕರ್ ನ ಮೂಲಕ ನೀರು ಸರಬರಾಜು ಮಾಡುತ್ತಿದ್ದರೂ, ನೀರಿನ ಕೊರತೆಯನ್ನು ನೀಗಿಸಲು ಸಾಧ್ಯವಾಗುತ್ತಿಲ್ಲ

ಉತ್ತರಕನ್ನಡ: ಬರಿದಾಗುತ್ತಿರುವ ಭಟ್ಕಳದ ಕಡವಿನಕಟ್ಟೆ ಡ್ಯಾಂ

4 ಟ್ಯಾಂಕರ್ ನಲ್ಲಿ ನೀರು

ಜಿಲ್ಲಾಸ್ಪತ್ರೆಯಲ್ಲಿ ಒಂದು ಲಕ್ಷ ಲೀಟರ್ ಹಾಗು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೂರು ಲಕ್ಷ ಲೀ ನ ಸಂಪ್ ನ ವ್ಯವಸ್ಥೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ ಜನವರಿಯಿಂದ ಟ್ಯಾಂಕರ್ ನ ಮೂಲಕ ನೀರು ತರಿಸಲು ಆರಂಭಿಸಲಾಗಿದೆ. ಸದ್ಯದ ಸ್ಥಿತಿಯಲ್ಲಿ ಎರಡು ಆಸ್ಪತ್ರೆಗೆ 12,000 ಲೀ ನೀರಿನ್ನು ತಲಾ 4 ಬಾರಿ ಟ್ಯಾಂಕರ್ ನ ಮೂಲಕ ತರಿಸಲಾಗುತ್ತಿದೆ. ಇ ಟೆಂಡರ್ ಮೂಲಕ ಗುತ್ತಿಗೆ ಪಡೆದವರು ಪ್ರತಿ ಟ್ರಿಪ್ ನೀರಿಗೆ 1,300 ರೂ ಶುಲ್ಕ ವಿಧಿಸುತ್ತಿದ್ದಾರೆ. 


ಅಂಬಲಪಾಡಿ ಬಳಿಯ ಸರಕಾರಿ ಜಾಗದಲ್ಲಿರುವ ಬಾವಿಯಿಂದ ಪೈಪ್ ಲೈನ್ ಮೂಲಕ ಜಿಲ್ಲಾಸ್ಪತ್ರೆಗೆ ನೀರು ಸರಬರಾಜು ಆಗುತ್ತಿತ್ತು. ಆದರೆ ಈ ಬಾರಿ ಮಳೆ ಬಾರದೇ ಇರುವುದರಿಂದ ಬಾವಿಯಲ್ಲಿಯೂ ನೀರಿಲ್ಲ. ದಿನಕ್ಕೆ ನಾಲ್ಕು ಟ್ಯಾಂಕರ್ ನಲ್ಲಿ ನೀರು ತರಿಸಿದರೂ, ಸಾಲುತ್ತಿಲ್ಲ. ನೀರನ್ನು ಎಲ್ಲರೂ ಮಿತವಾಗಿ ಬಳಸಿ ಎಂದು ಸೂಚನೆ ನೀಡಿದ್ದೇವೆ. ಜಿಲ್ಲಾಧಿಕಾರಿಯವರು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ ಎಂದು ಜಿಲ್ಲಾ ಸರ್ಜನ್ ಡಾ| ಸುದೇಶ್ ತಿಳಿಸಿದ್ದಾರೆ.

ಪ್ರತಿದಿನ ಜಿಲ್ಲಾಸ್ಪತ್ರೆಗೆ 1,000 ಹೊರರೋಗಿಗಳು ಆಗಮಿಸುತ್ತಾರೆ. ಒಳರೋಗಿಗಳಾಗಿ ಸರಾಸರಿ 100-130 ರೋಗಿಗಳಿದ್ದಾರೆ. ಇವರೆಲ್ಲರೂ ಶೌಚಾಲಯ, ಬಟ್ಟೆ ಒಗೆಯಲು, ಸ್ನಾನಕ್ಕೆ ನೀರನ್ನು ಉಪಯೋಗಿಸುತ್ತಾರೆ. ಜೊತೆಗೆ ಆಸ್ಪತ್ರೆಯ ಸ್ವಚ್ಚತೆ, ಸಿಬ್ಬಂದಿಗಳ ಬಳಕೆಗೂ ನೀರು ಅಗತ್ಯವಾಗಿದೆ. 

ತುಂಬೆ ಡ್ಯಾಂನಲ್ಲಿ 4 ಮೀಟರ್‌ಗಿಂತ ಕೆಳಗೆ ಇಳಿದ ನೀರು; ಮಂಗಳೂರಿಗೆ ಅಭಾವ ಸಾಧ್ಯತೆ !

ಜಿಲ್ಲಾಧಿಕಾರಿ ಭೇಟಿ

ಜಿಲ್ಲಾಧಿಕಾರಿ ಕೂರ್ಮಾ ರಾವ್ ಸೋಮವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ರೋಗಿಗಳೊಂದಿಗೆ ಮಾತನಾಡಿದರು. ನಂತರ ನೀರನ್ನು ಸಮರ್ಪಕವಾಗಿ ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದರು. 

ಸರಕಾರಿ ವ್ಯವಸ್ಥೆಯ ಇತಿಮಿತಿಯಲ್ಲಿ ಟೆಂಡರ್ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ಆದರೆ ಟ್ಯಾಂಕರ್ ನವರಿಗೂ ನೀರು ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ನೀರಿಗೆ ಬೇಡಿಕೆ ಉಂಟಾದ ಪರಿಣಾಮವಾಗಿ ಬೆಲೆಯೂ ಏರಿಕೆಯಾಗಿದೆ. ದಾನಿಗಳು ಜಿಲ್ಲಾಸ್ಪತ್ರೆಗೆ ನೀರನ್ನು ದಾನವಾಗಿ ನೀಡಿದರೇ ಬಡ ರೋಗಿಗಳಿಗೆ ಅನುಕೂಲವಾದೀತು ಎನ್ನುತ್ತಾರೆ ಜಿಲ್ಲಾಸ್ಪತ್ರೆಯಲ್ಲಿ‌ ದಾಖಲಾಗಿರುವ ರೋಗಿಗಳು.

click me!