Tumakur : ಪ್ರಜಾಪ್ರಭುತ್ವದಲ್ಲಿ ಪ್ರತಿಭೆ ಪ್ರದರ್ಶನಕ್ಕೆ ಮುಕ್ತ ವೇದಿಕೆ

By Kannadaprabha NewsFirst Published Nov 30, 2022, 5:13 AM IST
Highlights

ರಾಜ-ಮಹಾರಾಜರ ಕಾಲದಲ್ಲಿ ವಿದ್ವಾಂಸರು ಮತ್ತು ಕಲಾವಿದರಿಗೆ ಆಸ್ಥಾನದಲ್ಲಿ ಮಾತ್ರ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಇತ್ತು. ಇಂದು ಎಲ್ಲ ವರ್ಗದ ಜನರಿಗೂ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಮುಕ್ತ ವೇದಿಕೆಯನ್ನು ಪ್ರಜಾಪ್ರಭುತ್ವ ಕಲ್ಪಿಸಿದೆ ಎಂದು ಪಿಯು ಇಲಾಖೆ ಉಪನಿರ್ದೇಶಕ ಗಂಗಾಧರ್‌ ತಿಳಿಸಿದರು.

 ತುಮಕೂರು (ನ.30)  :  ರಾಜ-ಮಹಾರಾಜರ ಕಾಲದಲ್ಲಿ ವಿದ್ವಾಂಸರು ಮತ್ತು ಕಲಾವಿದರಿಗೆ ಆಸ್ಥಾನದಲ್ಲಿ ಮಾತ್ರ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಇತ್ತು. ಇಂದು ಎಲ್ಲ ವರ್ಗದ ಜನರಿಗೂ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಮುಕ್ತ ವೇದಿಕೆಯನ್ನು ಪ್ರಜಾಪ್ರಭುತ್ವ ಕಲ್ಪಿಸಿದೆ ಎಂದು ಪಿಯು ಇಲಾಖೆ ಉಪನಿರ್ದೇಶಕ ಗಂಗಾಧರ್‌ ತಿಳಿಸಿದರು.

ನಗರದ ಎಂಪ್ರೆಸ್‌ ಕಾಲೇಜಿನ (College) ಆಡಿಟೋರಿಯಂನಲ್ಲಿ ಪದವಿ ಪೂರ್ವ ಶಿಕ್ಷಣ (Education)  ಇಲಾಖೆ, ಎಂಪ್ರೆಸ್‌ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ವಿಭಾಗೀಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಉಚಿತ ಲ್ಯಾಪ್‌ಟ್ಯಾಪ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಹೊರತರಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವೇದಿಕೆ ಕಲ್ಪಿಸಲಾಗಿದೆ. ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಮುಖ್ಯ, ಇಲಾಖೆ ನೀಡಿರುವ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನು ಯಶಸ್ವಿಯಾಗಿ ಪ್ರದರ್ಶಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿಭಾಗ ಮಟ್ಟದ ಕಾರ್ಯಕ್ರಮವನ್ನು ತುಮಕೂರಿನಲ್ಲಿ ಆಯೋಜನೆ ಮಾಡಬೇಕೆಂಬ ಪ್ರಸ್ತಾಪ ಬಂದಾಗ, ಇಂತಹ ದೊಡ್ಡ ಕಾರ್ಯಕ್ರಮವನ್ನು ಸರ್ಕಾರಿ ಕಾಲೇಜುಗಳಲ್ಲಿ ಆಯೋಜಿಸುವುದು ಕಷ್ಟಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಸ್ಮಾರ್ಚ್‌ಸಿಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಆಡಿಟೋರಿಯಂನಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲು ಸಾಧ್ಯವಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರಾಚಾರ್ಯರ ಸಂಘ, ಉಪನ್ಯಾಸಕರ ಸಂಘ ಸೇರಿದಂತೆ ಎಲ್ಲ ಸಂಘಗಳು ಹಾಗೂ ಸಿಬ್ಬಂದಿ ವರ್ಗ ಶ್ರಮಿಸಿದೆ ಎಂದು ಹೇಳಿದರು.

ಎಂಪ್ರೆಸ್‌ ಕಾಲೇಜಿನ ಪ್ರಾಂಶುಪಾಲ ಷಣ್ಮುಖಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಪೋ›ತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಪ್ರಾರಂಭಿಸಿರುವ ಉಚಿತ ಲ್ಯಾಪ್‌ಟ್ಯಾಪ್‌ ವಿತರಣೆಯನ್ನು ತುಮಕೂರು ಜಿಲ್ಲೆಯಲ್ಲಿ 2021-22ರ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪರಿಶಿಷ್ಟಜಾತಿ ಮತ್ತು ಪಂಗಡದ 24 ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದರು.

ಅಕ್ಷರ ಜ್ಞಾನದಿಂದ ಮಾತ್ರ ವೈಯಕ್ತಿಕ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಅರಿತು ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ತೇಜನ ಪಡೆಯುವುದರೊಂದಿಗೆ ತಮ್ಮಲ್ಲಿರುವ ಸುಪ್ತ ಪ್ರತಿಭೆ ವೇದಿಕೆ ಒದಗಿಸಲು ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾಗಿರುವ 10 ಜಿಲ್ಲೆಯ ವಿದ್ಯಾರ್ಥಿಗಳು ತುಮಕೂರು ನಗರದಲ್ಲಿ ನಡೆಯುತ್ತಿರುವ ವಿಭಾಗಮಟ್ಟದ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯರ ಸಂಘದ ಅಧ್ಯಕ್ಷ ಲಿಂಗದೇವರು, ಉಪನ್ಯಾಸಕರ ಸಂಘದ ಪದಾಧಿಕಾರಿ ಮಹಾಲಿಂಗೇಶ್‌, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಪಿ.ಜೆ.ಜಯಶೀಲ, ದೈಹಿಕ ಉಪನ್ಯಾಸಕ ಸಂಘದ ಅಧ್ಯಕ್ಷ ಬಸವರಾಜು, ಎಂಪ್ರೆಸ್‌ ಎಸ್‌ಡಿಎಂಸಿ ಉಪಾಧ್ಯಕ್ಷೆ ರಾಧಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಅಜಯ್‌ಕುಮಾರ್‌, ಉಪನ್ಯಾಸಕರಾದ ಜ್ಯೋತಿಪ್ರಕಾಶ್‌, ಅಜಯ್‌ಕುಮಾರ್‌, ಸದಾಶಿವಯ್ಯ ಸೇರಿದಂತೆ ಕಾಲೇಜು ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಚಟುವಟಿಕೆಯ ಸ್ಪರ್ಧೆಗಳು ನಡೆದವು.

ವ್ಯಕ್ತಿತ್ವ ವಿಕಸನದಲ್ಲಿ ಕಲಿಕೆಯೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳು ಮುಖ್ಯವಾಗುತ್ತವೆ. ಈ ನಿಟ್ಟಿನಲ್ಲಿ ಉಪನ್ಯಾಸಕರು, ಪೋಷಕರು ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸಬೇಕು, ಪೋ›ತ್ಸಾಹ ನೀಡಿದರೆ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬಹುದಾಗಿದೆ. ಭಾಗವಹಿಸುವ 480 ಮಕ್ಕಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿದ್ಯಾರ್ಥಿಗಳು ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಕಾಲೇಜಿಗೆ ಹಾಗೂ ಜಿಲ್ಲೆಗೆ ಹೆಸರು ತರಬಹುದಾಗಿದೆ.

ಷಣ್ಮುಖಪ್ಪ ಪ್ರಾಂಶುಪಾಲ, ಎಂಪ್ರೆಸ್‌ ಕಾಲೇಜು

  • ರಾಜ-ಮಹಾರಾಜರ ಕಾಲದಲ್ಲಿ ವಿದ್ವಾಂಸರು ಮತ್ತು ಕಲಾವಿದರಿಗೆ ಆಸ್ಥಾನದಲ್ಲಿ ಮಾತ್ರ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ
  • ಇಂದು ಎಲ್ಲ ವರ್ಗದ ಜನರಿಗೂ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಮುಕ್ತ ವೇದಿಕೆಯನ್ನು ಪ್ರಜಾಪ್ರಭುತ್ವ ಕಲ್ಪಿಸಿದೆ
click me!