Chikkamagaluru: ಡಯಾಲಿಸೀಸ್ ಕೇಂದ್ರಕ್ಕೆ ಗುಣಮಟ್ಟದ ಔಷಧಿ ಪೂರೈಕೆಗೆ ಒತ್ತಾಯ

Published : Oct 10, 2022, 05:51 PM IST
Chikkamagaluru: ಡಯಾಲಿಸೀಸ್ ಕೇಂದ್ರಕ್ಕೆ ಗುಣಮಟ್ಟದ ಔಷಧಿ ಪೂರೈಕೆಗೆ ಒತ್ತಾಯ

ಸಾರಾಂಶ

ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ಡಯಾಲಿಸೀಸ್ ಕೇಂದ್ರಕ್ಕೆ ಗುಣಮಟ್ಟದ ಔಷಧಿ ಮತ್ತಿತರೆ ವೈದ್ಯಕೀಯ ಸಲಕರಣೆಗಳು ಪೂರೈಕೆಯಾಗದ ಹಿನ್ನೆಲೆಯಲ್ಲಿ ರೋಗಿಗಳ ಜೀವಕ್ಕೆ ಕುತ್ತುಂಟಾಗುತ್ತಿದೆ ಎಂದು ಡಯಾಲಿಸೀಸ್ ಪಡೆಯುತ್ತಿರುವ ರೋಗಿಗಳು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಚಿಕ್ಕಮಗಳೂರು (ಅ.10): ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ಡಯಾಲಿಸೀಸ್ ಕೇಂದ್ರಕ್ಕೆ ಗುಣಮಟ್ಟದ ಔಷಧಿ ಮತ್ತಿತರೆ ವೈದ್ಯಕೀಯ ಸಲಕರಣೆಗಳು ಪೂರೈಕೆಯಾಗದ ಹಿನ್ನೆಲೆಯಲ್ಲಿ ರೋಗಿಗಳ ಜೀವಕ್ಕೆ ಕುತ್ತುಂಟಾಗುತ್ತಿದೆ ಎಂದು ಡಯಾಲಿಸೀಸ್ ಪಡೆಯುತ್ತಿರುವ ರೋಗಿಗಳು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಭೇಟಿ ಮಾಡಿದ ರೋಗಿಗಳು ಡಯಾಲಿಸೀಸ್ ಕೇಂದ್ರಗಳಿಗೆ ವಿವಿಧ ಸಲಕರಣೆಗಳು ಹಾಗೂ ಅಗತ್ಯ ಔಷಧಿ ವಸ್ತುಗಳುಗಳನ್ನು ಪೂರೈಸಲು ಗುತ್ತಿಗೆ ಪಡೆದಿರುವ ಸಂಜೀವಿನಿ ಎಂಬ ಸಂಸ್ಥೆಯು ಗುಣಮಟ್ಟದ ವಸ್ತುಗಳನ್ನು ಪೂರೈಸದಿರುವ ಹಿನ್ನೆಲೆಯಲ್ಲಿ ಡಯಾಲಿಸೀಸ್ ಮಾಡಿಸುತ್ತಿರುವ ರೋಗಿಗಳ ಜೀವಕ್ಕೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿದರು. ಡಯಾಲಿಸೀಸ್ ಪಡೆಯುತ್ತಿರುವ ಬೈಪಾಸ್ ರಸ್ತೆಯ ಬಿ.ರಾಜು ಎಂಬುವವರು ಮಾತನಾಡಿ ಹಲವು ಮಂದಿ ರೋಗಿಗಳು ಜೀವ ಕಳೆದುಕೊಂಡಿದ್ದಾರೆ. ಈ ಬಗ್ಗೆ ಹಲವು ಬಾರಿ ದೂರು ಸಲ್ಲಿಸಿದರೂ ಅದೇ ಕಳಪೆಗುಣಮಟ್ಟದ ಔಷಧಿಗಳನ್ನು ಪೂರೈಸಲಾಗುತ್ತಿದೆ. ಇದರಿಂದ ಇಂದೂ ಸಹ ನಾಲ್ವರು ರೋಗಿಗಳು ರಕ್ತ ಹೆಪ್ಪುಗಟ್ಟಿ ಅಸ್ವಸ್ಥರಾಗಿದ್ದಾರೆ ಎಂದು ದೂರಿದರು. ಸರ್ಕಾರ ಈ ಬಗ್ಗೆ ಕೂಡಲೇ ಗಮನ ಹರಿಸಬೇಕು. ಯಾವುದೋ ಸಂಸ್ಥೆಗಳು ಹಣ ಮಾಡಿಕೊಳ್ಳುವ ಸಲುವಾಗಿ ಬಡ ರೋಗಿಗಳನ್ನು ಬಲಿಪಶು ಮಾಡಬಾರದು. ಸಮಸ್ಯೆಯನ್ನು ಬೇಗನೇ ಬಗೆಹರಿಸದೇ ಇದ್ದಲ್ಲಿ ಹಲವು ಜೀವಗಳಿಗೆ ತೊಂದರೆ ಆಗಲಿದ್ದು, ಜಿಲ್ಲಾಡಳಿತ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಆಸ್ಪತ್ರೆಯ ಡಯಾಲಿಸೀಸ್ ಕೇಂದ್ರದಲ್ಲಿ 82 ಮಂದಿ ರೋಗಿಗಳು ಡಯಾಲಿಸೀಸ್ ಪಡೆಯುಕೊಳ್ಳುತ್ತಿದ್ದಾರೆ. ಈ ಪೈಕಿ ಈಗಾಗಲೇ ಹಲವು ಜೀವ ಕಳೆದುಕೊಂಡಿದ್ದಾರೆ. ಇಂದೂ ಸಹ ನಾಲ್ವರು ಅಸ್ವಸ್ಥರಾಗಿರುವುದು ನಮಗೆಲ್ಲರಿಗೂ ಆತಂಕ ಮೂಡಿಸಿದೆ. ಇದೇ ರೀತಿ ಆದರೆ ಸರ್ಕಾರಿ ಆಸ್ಪತ್ರೆ ಇದ್ದೂ ಇಲ್ಲದಂತಾಗುತ್ತದೆ ಎಂದು ಹೇಳಿದರು.

Bengaluru: ಮಲ್ಲೇಶ್ವರದಲ್ಲಿ ಮಿನಿ ಜಯದೇವ ಆಸ್ಪತ್ರೆ ಶುರು

ಸರ್ಕಾರ ಕೂಡಲೇ ಸಂಜೀವಿ ಸಂಸ್ಥೆಗೆ ನೀಡಿರುವ ಗುತ್ತಿಗೆಯನ್ನು ರದ್ದು ಪಡಿಸಿ ಸರ್ಕಾರದಿಂದ ನೇರವಾಗಿ ಅಥವಾ ಬೇರೆ ಸಂಸ್ಥೆಯ ಮೂಲಕ ಗುಣಪಟ್ಟದ ಔಷಧಿ ಮತ್ತಿತರರೆ ವಸ್ತುಗಳನ್ನು ಪೂರೈಸಬೇಕು ಎಂದು ಆಗ್ರಹಿಸಿದರು.ಈ ಸಮಸ್ಯೆ ಬಗ್ಗೆ ಈ ಹಿಂದಿನಿಂದಲೂ ಜಿಲ್ಲಾಧಿಕಾರಿಗಳು, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್, ಶಾಸಕರು ಎಲ್ಲರಿಗೂ ಅರ್ಜಿ ಕೊಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

Bengaluru: ಬೌರಿಂಗ್‌ ಆಸ್ಪತ್ರೆ ಅವ್ಯವಸ್ಥೆಗೆ ನ್ಯಾಯಮೂರ್ತಿ ವೀರಪ್ಪ ಕಿಡಿ

ಡಯಾಲಿಸೀಸ್ ಪಡೆಯುತ್ತಿರುವವರು ಎಲ್ಲರೂ ಬಡ ರೋಗಿಗಳೇ ಆಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ನೀಡಲು ಶಕ್ತರಿಲ್ಲ. ಸರ್ಕಾರಿ ಆಸ್ಪತ್ರೆಯನ್ನೇ ನಂಬಿಕೊಂಡಿರುವ ರೋಗಿಗಳಿಗೆ ಇಲ್ಲಿಯೂ ಸರಿಯಾದ ವ್ಯವಸ್ಥೆ ಸಿಗದೇ ಇದ್ದರೆ ಹೇಗೆ ಎಂದು ಅಳಲು ತೋಡಿಕೊಂಡರು.ಸಮಸ್ಯ ಬಗ್ಗೆ ಕೂಡಲೇ ಗಮನ ಹರಿಸಿ ಗುಣಮಟ್ಟದ ಸಲಕರಣೆಗಳ ಪೂರೈಕೆಗೆ ಕ್ರಮ ಕೈಗೊಂಡು ಬಡ ರೋಗಿಗಳ ಜೀವ ಉಳಿಸಬೇಕು ಎಂದು ಮನವಿ ಮಾಡಿದರು.

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು