ಕುಂಚಿಟಿಗರನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸಲು ಆಗ್ರಹ

By Kannadaprabha NewsFirst Published Dec 27, 2022, 5:48 AM IST
Highlights

ಒಕ್ಕಲಿಗರ ಮೀಸಲಾತಿಯನ್ನು ಶೇ.4 ರಿಂದ 12 ವರೆಗೆ ಏರಿಸಲು ಹಾಗೂ ಕುಂಚಿಟಿಗ ಜಾತಿಯನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ತಿಳಿಸಿದರು.

 ಶಿರಾ (ಡಿ.27):  ಒಕ್ಕಲಿಗರ ಮೀಸಲಾತಿಯನ್ನು ಶೇ.4 ರಿಂದ 12 ವರೆಗೆ ಏರಿಸಲು ಹಾಗೂ ಕುಂಚಿಟಿಗ ಜಾತಿಯನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ತಿಳಿಸಿದರು.

ಈ ಬಗ್ಗೆ ಮಾತನಾಡಿದ ಅವರು, ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ (Okkaliga)  ಸಮುದಾಯದ ಸಚಿವರುಗಳು ಹಾಗೂ ಶಾಸಕರುಗಳ ಜೊತೆಗೆ ಸದಸ್ಯರಾದ ಚಿದಾನಂದ್‌ ಎಂ.ಗೌಡ ಅವರೊಂದಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿ ಸಲ್ಲಿಸಿದ್ದೇವೆ. ಹಾಗೂ ಬಂಟರು, ರೆಡ್ಡಿ ಒಕ್ಕಲಿಗರನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸುವಂತೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ವಿಧಾನಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ ಮಾತನಾಡಿ, ಕರ್ನಾಟಕ ರಾಜ್ಯದ ಕುಂಚಿಟಿಗ ಸಮುದಾಯದ ಕುಲ ಶಾಸ್ತ್ರೀಯ ವರದಿಯನ್ವಯ ಕರ್ನಾಟಕ’ ರಾಜ್ಯದಲ್ಲಿ ವಾಸಿಸುತ್ತಿರುವ ಕುಂಚಿಟಿಗ ಜನಾಂಗವು ಸುಮಾರು 25 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಸುಮಾರು 17 ಜಿಲ್ಲೆಗಳ 42 ತಾಲೂಕುಗಳಲ್ಲಿ ವಾಸಿಸುತ್ತಿದ್ದಾರೆ. ಈ ಜನಾಂಗವೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಜನಾಂಗವಾಗಿದೆ. ಬಹಳ ಹಿಂದಿನಿಂದಲೂ ಈ ಸಮುದಾಯವು ಕುಂಚಿಟಿಗ, ಕುಂಚಿಟಿಗ ಒಕ್ಕಲಿಗ, ಕುಂಚಿಟಿಗ ವಕ್ಕಲಿಗ ಎಂದು ಗುರುತಿಸಿಕೊಂಡಿದೆ. ಜೊತೆಗೆ ಈ ಹಿಂದಿನ ಸರಕಾರಗಳು ನೇಮಿಸಿದ್ದ ಹಾವನೂರು ಆಯೋಗ, ಚಿನ್ನಪ್ಪರೆಡ್ಡಿ ಆಯೋಗ ಹಾಗೂ ವೆಂಕಟಸ್ವಾಮಿ ಆಯೋಗದ ವರದಿ, ಮಂಡಲ್‌ ವರದಿ ಇವೆಲ್ಲವನ್ನೂ ಆಧರಿಸಿ, ಈ ಜಾತಿಯನ್ನು ಒಕ್ಕಲಿಗರ ಇತರ ಉಪಜಾತಿಯ ಜೊತೆ ಪ್ರವರ್ಗ 3ಎ/1(ಎಲ್‌)ನಲ್ಲಿ ಕುಂಚಿಟಿಗ ಎಂದು ನಮೂದಿಸಿ ಆದೇಶ ಹೊರಡಿಸಲಾಯಿತು. ಅದರನ್ವಯ ಕುಂಚಿಟಿಗರು ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ದಾಖಲು ಮಾಡುವಾಗ ಹಾಗೂ ಉದ್ಯೋಗಕ್ಕಾಗಿ ಮೀಸಲಾತಿಯನ್ನು ಕೋರಿ ತಮ್ಮ ಜಾತಿಯನ್ನು ನಮೂದಿಸುವಾಗ ಕೆಲವರು ಕುಂಚಿಟಿಗ ಎಂದು, ಇನ್ನು ಕೆಲವರು ಕುಂಚಿಟಿಗ ವಕ್ಕಲಿಗ ಎಂದು, ಮತ್ತೆ ಕೆಲವರು ಕುಂಚಿಟಿಗ ಒಕ್ಕಲಿಗ ಎಂದು ನಮೂದಿಸಿದ್ದಾರೆ. ಹಾಗೇ ತಮ್ಮ ಶಾಲಾ ಕಾಲೇಜು ಮುಖ್ಯಸ್ಥರಿಂದ ಜಾತಿ ಪ್ರಮಾಣ ಪತ್ರವನ್ನೂ ಪಡೆದಿರುತ್ತಾರೆ ಎಂದರು.

ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಕೆಲವು ತಾಲೂಕು ತಹಸೀಲ್ದಾರರು ಕುಂಚಿಟಿಗ ಒಕ್ಕಲಿಗರಿಗೆ ಜಾತಿ ಪ್ರಮಾಣ ಪತ್ರವನ್ನು ನೀಡುವುದನ್ನು ತಿರಸ್ಕರಿಸುತ್ತಿದ್ದಾರೆ. ಕಾರಣ ಕೇಳಿದರೆ, ಕುಂಚಿಟಿಗ ಒಕ್ಕಲಿಗ, ಕುಂಚಿಟಿಗ ವಕ್ಕಲಿಗ ಎಂಬ ಜಾತಿಗಳು ಪ್ರವರ್ಗ(3) ನ ಸರಕಾರಿ ಆದೇಶದಲ್ಲಿ ನಮೂದಾಗದೇ ಇರುವುದರಿಂದ ಕುಂಚಿಟಿಗ ಒಕ್ಕಲಿಗರು ಎಂದು ಪ್ರಮಾಣ ಪತ್ರವನ್ನು ನೀಡುವುದಕ್ಕಾಗುವುದಿಲ್ಲ ಎಂದು ತಿಳಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ಈ ಸಮುದಾಯಕ್ಕೆ ಸೇರಿದ ಸಾವಿರಾರು ಮಂದಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಸರ್ಕಾರದ ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಅಧ್ಯಯನದ ಪ್ರಕಾರ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ನನ್ನ ಕುಂಚಿಟಿಗ ಜಾತಿಯವರು ಹಿಂದುಳಿದಿರುವುದರಿಂದ ಕುಂಚಿಟಿಗ ಜಾತಿಯನ್ನು ಕೇಂದ್ರ ಹಿಂದುಳಿದ(ಔಃಅ) ಪಟ್ಟಿಯಲ್ಲಿ ಕುಂಚಿಟಿಗರನ್ನು ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಎಲ್ಲಾ ಮಂತ್ರಿಗಳು ಹಾಗೂ ಶಾಸಕರುಗಳು ಸೇರಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರುಗಳಾದ ಆರ್‌. ಅಶೋಕ್‌, ಅಶ್ವಥ್‌ ನಾರಾಯಣ್‌, ಡಾ. ಕೆ ಸುಧಾಕರ್‌, ಗೋಪಾಲಯ್ಯ, ಮುಖ್ಯ ಸಚೇತಕರಾದ ವೈ.ಎ ನಾರಾಯಣ ಸ್ವಾಮಿ, ನಾರಾಯಣ ಗೌಡ, ಎಸ್‌.ಟಿ ಸೋಮಶೇಖರ್‌, ಒಕ್ಕಲಿಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೃಷ್ಣಪ್ಪ. ಶಾಸಕರಾದ ಮಸಾಲೆ ಜಯರಾಮ್‌, ವಿಧಾನ ಪರಿಷತ್‌ ಸದಸ್ಯರಾದ ತುಳಸಿ ಮುನಿರಾಜು ಗೌಡ, ಪ್ರಾಣೇಶ್‌ ಸೇರಿದಂತೆ ಹಲವರು ಹಾಜರಿದ್ದರು.

------

23ಶಿರಾ2 ಒಕ್ಕಲಿಗರ ಮೀಸಲಾತಿ ಏರಿಕೆ ಹಾಗೂ ಕುಂಚಿಟಿಗ ಜಾತಿಯನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿದರು.

click me!