ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಿ; ಸರ್ಕಾರಕ್ಕೆ ಒತ್ತಾಯ

By Naveen KodaseFirst Published Jun 13, 2020, 8:35 AM IST
Highlights

1) ದೀರ್ಘಕಾಲಗಳಿಂದ ಸೇವೆ ಸಲ್ಲಿಸುತ್ತಾ ಬಂದ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ನೀಡುವವರೆಗೂ ಯಾವುದೇ ಹೊಸ ನೇಮಕಾತಿ ಮಾಡಬಾರದು. 

2) ಅನಗತ್ಯವಾಗಿ ಕಾರ್ಯಭಾರವಿಲ್ಲದೇ ಇದ್ದರೂ ನಿಯೋಜನೆ ಮಾಡಿರುವುದನ್ನು ರದ್ದುಪಡಿಸಬೇಕು.

3) ಅತಿಥಿ ಉಪನ್ಯಾಸಕರ ಸೇವೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಬೇಕು.

4) ವರ್ಷದ 12 ತಿಂಗಳೂ ವೇತನ ನೀಡುವುದರ ಜತೆಗೆ ಉದ್ಯೋಗ ಭದ್ರತೆ ಒದಗಿಸಬೇಕು.

ಇದು ಅತಿಥಿ ಉಪನ್ಯಾಸಕರ ಬೇಡಿಕೆಯಾಗಿದ್ದು, ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಜೂ.13): ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಡಾ.ಎಚ್‌. ಸೋಮಶೇಖರ್‌ ಶಿವಮೊಗ್ಗಿ ಮಾತನಾಡಿ, ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಮಂದಿ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಇವರ ಅಭದ್ರತೆಯ ವಾತಾವರಣ ಹೋಗಲಾಡಿಸಬೇಕು ಎಂದು ಆಗ್ರಹಿಸಿದರು. ಕೋವಿಡ್‌-19 ಸಂಕಷ್ಟಸಂದರ್ಭದಲ್ಲಿ ತರಗತಿ ಪ್ರಾರಂಭವಾಗುವುದು ಯಾವಾಗ ಎಂದು ಗೊತ್ತಿಲ್ಲ. ಹೀಗಿರುವಾಗ 5-6ತಿಂಗಳು ವೇತನವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಈಗಾಗಲೇ ಇದೇ ಶೈಕ್ಷಣಿಕ ವರ್ಷದಲ್ಲಿ 4 ಜನ ಅತಿಥಿ ಉಪನ್ಯಾಸಕರು ಜೀವನದ ನಿರ್ವಹಣೆ ಮಾಡಲಾಗದೆ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಯಾವುದೇ ರೀತಿಯಾದ ನೆರವು ಸರ್ಕಾರದಿಂದ ಸಿಕ್ಕಿಲ್ಲ ಎಂದು ದೂರಿದರು.

ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಅತಿಥಿ ಶಿಕ್ಷಕರನ್ನು, ಉಪನ್ಯಾಸಕರನ್ನು ಕಾಯಂ ಮಾಡಿ, ಉದ್ಯೋಗ ಭದ್ರತೆ ನೀಡಲಾಗಿದೆ. ಹರಿಯಾಣ ರಾಜ್ಯ ಯುಜಿಸಿ ಶಿಫಾರಸ್ಸಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಸೂತ್ರದ ಅಡಿ ವೇತನ ನೀಡಿ ಕೆಲಸದಿಂದ ತೆಗೆದು ಹಾಕದಂತೆ ನೋಡಿಕೊಂಡಿದೆ ಎಂದರು.

ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆ: ಅವಧಿ​ ವಿಸ್ತರಣೆ

ಅಸ್ಸಾಂನಂತಹ ಪುಟ್ಟರಾಜ್ಯ 45 ಸಾವಿರ ಅತಿಥಿ ಶಿಕ್ಷಕರು, ಉಪನ್ಯಾಸಕರನ್ನು ಕಾಯಂ ಮಾಡಲು ಮುಂದಾಗಿದೆ. ಆಂಧ್ರಪ್ರದೇಶದಲ್ಲಿ 25 ಸಾವಿರ ಅತಿಥಿ ಶಿಕ್ಷಕರು, ಉಪನ್ಯಾಸಕರನ್ನು ಕಾಯಂ ಮಾಡಲಾಗಿದೆ. ದೆಹಲಿ ಸರ್ಕಾರ ಕೂಡ 25 ಸಾವಿರ ಶಿಕ್ಷಕರನ್ನು ಕಾಯಂ ಮಾಡಲು ನಿಯಮಾವಳಿ ರಚಿಸಿದೆ. ಇದೆ ಮಾದರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕೂಡ ಅತಿಥಿ ಉಪನ್ಯಾಸಕರ ಬಹು ದಿನದ ಬೇಡಿಕೆ ಈಡೇರಿಸಬೇಕು ಎಂದರು.

ವರದಿ ನೀಡಿದರೂ ಕ್ರಮವಿಲ್ಲ:

ದುರಂತ ಎಂದರೆ ಕರ್ನಾಟಕದಲ್ಲಿ ಈ ಹಿಂದಿನ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ನೀಡುವ ಸಂಬಂಧ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲು ಅಗತ್ಯ ವರದಿ ನೀಡುವಂತೆ ಕಾಲೇಜು ಶಿಕ್ಷಣ ಇಲಾಖೆಗೆ ತಿಳಿಸಿತ್ತು. ವರದಿ ನೀಡಿ ವರುಷಗಳೇ ಕಳೆದರೂ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದು ಸರ್ಕಾರದ ಇಚ್ಛಾ ಶಕ್ತಿ ಕೊರತೆಯನ್ನು ತೋರಿಸುತ್ತದೆ. ಶಿಕ್ಷಕರ, ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ವಿಧಾನಪರಿಷತ್‌ ಸದಸ್ಯರು ನಮ್ಮ ಬಗ್ಗೆ ಸಹಾನುಭೂತಿಯ ಮಾತನಾಡುತ್ತಾರೆ. ಆದರೆ ಸದನದ ಒಳಗೆ ಶಿಕ್ಷಕರ ಪರವಾಗಿ ಗಟ್ಟಿಯಾದ ಧ್ವನಿ ಎತ್ತಿ, ಅತಿಥಿ ಉಪನ್ಯಾಸಕರ ಪರವಾಗಿ ಒಂದು ಶಾಶ್ವತ ನೀತಿ ರೂಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು. ಗೋಷ್ಠಿಯಲ್ಲಿ ಡಾ.ಎಂ.ಸಿ.ನರಹರಿ, ಸತೀಶ್‌, ರೂಪಾ, ಚೆನ್ನಕೇಶವ್‌ ಉಪಸ್ಥಿತರಿದ್ದರು.
 

click me!