ಬೆಂಗಳೂರು ಗಲಭೆ: ಕಾಂಗ್ರೆಸ್‌ ಮುಖವಾಡ ಬಯಲು, ಡಿಸಿಎಂ ಲಕ್ಷ್ಮಣ ಸವದಿ

Kannadaprabha News   | Asianet News
Published : Aug 15, 2020, 03:40 PM IST
ಬೆಂಗಳೂರು ಗಲಭೆ: ಕಾಂಗ್ರೆಸ್‌ ಮುಖವಾಡ ಬಯಲು, ಡಿಸಿಎಂ ಲಕ್ಷ್ಮಣ ಸವದಿ

ಸಾರಾಂಶ

ತಮ್ಮ ಪಕ್ಷದ ದಲಿತ ನಾಯಕನಿಗೆ ರಕ್ಷಣೆ ನೀಡಲಾಗದ ನಾಯಕರು| ಕಾಂಗ್ರೆಸ್‌ ತನ್ನಲ್ಲಿನ ನಾಯಕತ್ವದ ಕೊರತೆ ಮಾತ್ರವಲ್ಲ, ನೈತಿಕತೆಯ ಕೊರತೆಯನ್ನು ಜಗತ್ತಿಗೆ ಪರಿಚಯಿಸಿಕೊಟ್ಟಿದೆ| ರಾಜ್ಯದ ಘನತೆಯನ್ನು ಹಾಳುಮಾಡುವ ಕ್ಷುಲ್ಲಕ ಪ್ರಯತ್ನ ಮಾಡುತ್ತಿದೆ| 

ರಾಯಚೂರು(ಆ.15): ಬೆಂಗಳೂರಿನ ಕೆಜಿ, ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ, ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಅಧಿಕಾರ ಸಿಕ್ಕಾಗ ದುಷ್ಟರ ಮೇಲಿದ್ದ ಕೇಸ್‌ಗಳನ್ನು ಹಿಂಪಡೆದು ಅವರು ಸಮಾಜ ಘಾತುಕ ಶಕ್ತಿಗಳಾಗಿ ಬೆಳೆಯುವಂತೆ ಪ್ರೋತ್ಸಾಹ ನೀಡಿ, ಈಗ ಪೊಲೀಸರ ಮೇಲೆ ಕರ್ತವ್ಯ ಲೋಪದ ಆರೋಪ ಹೊರೆಸುತ್ತಿರುವ ಕಾಂಗ್ರೆಸ್ಸಿಗರೇ ಆತ್ಮಸಾಕ್ಷಿಯಂತೂ ಇಲ್ಲ. ಕನಿಷ್ಠ ಅವರ ಸೇವೆಗೆ ಕೃತಜ್ಞತೆ ಬೇಡವೇ? ಎಂದು ಡಿಸಿಎಂ ಟ್ವೀಟ್‌ ಮೂಲಕ ಟೀಕಿಸಿದ್ದಾರೆ.

ಡಿ.ಜೆ. ಹಳ್ಳಿಯಲ್ಲಿ ನಡೆದ ಘಟನೆ ಸಾಮಾಜಿಕ ನ್ಯಾಯದ ಪ್ರತಿಪಾದಕರು ಎಂದು ಕರೆಸಿಕೊಳ್ಳುವ ಕಾಂಗ್ರೆಸ್‌ನವರ ನಿಜ ಬಣ್ಣ ಬಯಲು ಮಾಡಿಕೊಂಡಿದೆ. ತಮ್ಮ ಪಕ್ಷದ ದಲಿತ ನಾಯಕನಿಗೆ ರಕ್ಷಣೆ ನೀಡಲಾಗದ ಪಕ್ಷದ ನಾಯಕರು, ಘಟನೆಗೆ ಕಾರಣನಾದ ವ್ಯಕ್ತಿ ಬಿಜೆಪಿ ಕಾರ್ಯಕರ್ತನೆಂದು ಬಿಂಬಿಸುವ ವ್ಯರ್ಥ ಪ್ರಯತ್ನವನ್ನೂ ಮಾಡಿದರು. ಇವರ ಮಿಥ್ಯಾರೋಪಗಳ ಬಗ್ಗೆ ಪ್ರಶ್ನಿಸಿದ ಭಾಜಪದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಲ್‌. ಸಂತೋಷ್‌ ಜೀ ಪ್ರಶ್ನಿಸಿದಾಗ, ನಾಯಕತ್ವದ ಭ್ರಷ್ಟತೆ ಹಾಗೂ ನಾಯಕತ್ವದ ದಿವಾಳಿತನ ಪ್ರದರ್ಶಿಸಿದ ಕಾಂಗ್ರೆಸ್‌, ಜಮೀರ್‌ ಅಹಮ್ಮದ್‌ರ ಮುಖಾಂತರ ಉತ್ತರ ಹೇಳಲು ಹೊರಟಿದೆ. ಪ್ರಕೃತಿಯಲ್ಲಿ ನಾವೆಲ್ಲಾ ಸಹಜವಾಗಿ ನೋಡಿರುವ ಸಂಗತಿಯೊಂದನ್ನು ಈ ಸನ್ನಿವೇಶ ನೆನಪಿಸುತ್ತಿದೆ.

'ಗಲಭೆಕೋರರು ಯಾವ ಹೋರಾಟ ಮಾಡಿದ್ದರು ಅಂತ ಜಮೀರ್ ಪರಿಹಾರ ನೀಡಿದ್ದಾನೆ'

ಆನೆ ನಡೆವ ಹಾದಿಯಲ್ಲಿ, ಸಣ್ಣ ಪುಟ್ಟ ಪ್ರಾಣಿಗಳು ಊಳಿಡುವುದು ಸಹಜ ಅಲ್ಲವೇ?! ಸಂತೋಷ್‌ ಜೀ ಯಂತಹ ಸಿದ್ಧಾಂತ ಬದ್ಧ, ನೀತಿ ರಾಜಕಾರಣ ಮಾಡುವ ವ್ಯಕ್ತಿಯ ಬಗ್ಗೆ ಮಾತನಾಡಿ ಕಾಂಗ್ರೆಸ್‌ ತನ್ನಲ್ಲಿನ ನಾಯಕತ್ವದ ಕೊರತೆ ಮಾತ್ರವಲ್ಲ, ನೈತಿಕತೆಯ ಕೊರತೆಯನ್ನು ಜಗತ್ತಿಗೆ ಪರಿಚಯಿಸಿಕೊಟ್ಟಿದೆ. ಸಮಾಜ ಘಾತುಕ ವಿಚ್ಛಿದ್ರಕಾರಿ ಶಕ್ತಿಗಳನ್ನು ಬೆಂಬಲಿಸುತ್ತಾ ಶಾಂತಿ, ಸಾಮರಸ್ಯ ಮಾತ್ರವಲ್ಲ, ರಾಜ್ಯದ ಘನತೆಯನ್ನು ಹಾಳುಮಾಡುವ ಕ್ಷುಲ್ಲಕ ಪ್ರಯತ್ನ ಮಾಡುತ್ತಿದೆ. ತಮ್ಮ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್‌ ಇನ್ನೊಬ್ಬರ ಮೇಲೆ ದೋಷಾರೋಪ ಮಾಡುವ ಹಳೆಯ ಚಾಳಿಯನ್ನೇ ಮುಂದುವರೆಸಿದೆ.

ಪರಮ ದೇಶಭಕ್ತ, ನೀತಿ ರಾಜಕಾರಣಿ, ನಿಸ್ವಾರ್ಥ ವ್ಯಕ್ತಿತ್ವದ ಬಿ.ಎಲ್‌.ಸಂತೋಷ್‌ ಜೀ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದಾಗ, ಅವರ ಟ್ವೀಟ್‌ ಅನ್ನು ಕೆಣಕುವ ಮೂಲಕ ಕಾಂಗ್ರೆಸ್‌ ತಮ್ಮ ಪಕ್ಷ ದೇಶದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಕಿಡಿಕಾಡಿದ್ದಾರೆ.
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!