ಕೊರೋನಾ ಆತಂಕ: ಎಂತಹ ಸಂದಿಗ್ಧ ಪರಿಸ್ಥಿತಿ ಎದುರಿಸಲು ಸಜ್ಜಾಗಿ, ಡಿಸಿಎಂ

By Kannadaprabha NewsFirst Published Apr 24, 2020, 8:29 AM IST
Highlights

ಕೊರೋನಾನಂತಹ ಸಾಂಕ್ರಾಮಿಕ ರೋಗ ಹರಡುವ ಪರಿಸ್ಥಿತಿ ಯಾವುದೇ ವೇಳೆಯಲ್ಲಿಯೂ ಎದುರಾದರು ಸಮರ್ಥವಾಗಿ ಎದುರಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಜ್ಜಾಗಿರಬೇಕು| ಈ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಹಾಲಿ ಇರುವ ಸೌಕರ್ಯ ಮತ್ತು ಅಗತ್ಯ ಇರುವ ಉಪಕರಣಗಳು, ಇತರ ವ್ಯವಸ್ಥೆಯನ್ನು ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ|

ಬೆಂಗಳೂರು(ಏ.24): ಕೋವಿಡ್‌-19 ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್‌ ಸೌಲಭ್ಯ ಸೇರಿದಂತೆ ಇತರೆ ಮೂಲಸೌಕರ್ಯ ಕಲ್ಪಿಸುವುದರ ಜತೆಗೆ ಎಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವಂತೆ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಸೂಚಿಸಿದ್ದಾರೆ.

ಕೊರೋನಾ ವೈರಾಣುನಂತಹ ಯಾವುದೇ ಸಾಂಕ್ರಾಮಿಕ ರೋಗಗಳನ್ನು ನಿರ್ವಹಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಇರುವ ಉಪಕರಣ ಸಂಗ್ರಹ, ನಿರ್ವಹಣೆ ಸೇರಿದಂತೆ ಚಿಕಿತ್ಸೆ, ಸೌಲಭ್ಯ ಹೆಚ್ಚಳಕ್ಕೆ ಕೈಗೊಳ್ಳಲಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ತಬ್ಲೀಘಿಗಳಿಗೆ ರಕ್ಷಣೆ ನೀಡಿದ ಆರೋಪ: ಶಾಸಕ ಜಮೀರ್‌ ವಿರುದ್ಧ ದೂರು

ಈ ವೇಳೆ ಮಾತನಾಡಿದ ಅವರು, ಕೊರೋನಾನಂತಹ ಸಾಂಕ್ರಾಮಿಕ ರೋಗ ಹರಡುವ ಪರಿಸ್ಥಿತಿ ಯಾವುದೇ ವೇಳೆಯಲ್ಲಿಯೂ ಎದುರಾದರು ಸಮರ್ಥವಾಗಿ ಎದುರಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಜ್ಜಾಗಿರಬೇಕು. ಈ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಹಾಲಿ ಇರುವ ಸೌಕರ್ಯ ಮತ್ತು ಅಗತ್ಯ ಇರುವ ಉಪಕರಣಗಳು, ಇತರ ವ್ಯವಸ್ಥೆಯನ್ನು ಪಟ್ಟಿಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಮೇಯರ್‌ ಗೌತಮ್‌ ಕುಮಾರ್‌ ಜೈನ್‌, ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್‌ ಮತ್ತು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್‌ ರಾಜು ಮತ್ತು ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸದ್ಯ ಕೇಂದ್ರದಲ್ಲಿ ಲಭ್ಯ ಇರುವ ಔಷಧ ದಾಸ್ತಾನು, ವೈದ್ಯಕೀಯ ಉಪಕರಣಗಳು, ಒದಗಿಸಿರುವ ಚಿಕಿತ್ಸೆ, ಆರೋಗ್ಯ ಸೇವೆಗಳ ಬಗ್ಗೆ ಡ್ಯಾಶ್‌ಬೋರ್ಡ್‌ ನಿರ್ವಹಣೆ ಮಾಡಲು ತಂತ್ರಜ್ಞಾನ ನೆರವು ಪಡೆಯಬೇಕು. ಆರೋಗ್ಯ ಕೇಂದ್ರದಲ್ಲಿ ಸದ್ಯ ಇರುವ ಔಷಧ ಸಂಗ್ರಹ, ಮಾಸ್ಕ್‌, ಸ್ಯಾನಿಟೈಸರ್‌, ಪಿಪಿಇ ಕಿಟ್‌, ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದು, ಅಗತ್ಯ ಇರುವ ಆಕ್ಸಿಜನ್‌ ವ್ಯವಸ್ಥೆ, ಹಾಸಿಗೆ ಸಾಮರ್ಥ್ಯ ಹೆಚ್ಚಳ, ಪ್ರಯೋಗಾಲಯ ಸೌಲಭ್ಯ ವಿಸ್ತರಣೆ ಮತ್ತು ಹೆಚ್ಚುವರಿ ಔಷಧ ಸಂಗ್ರಹಕ್ಕೆ ಸೂಚನೆ ನೀಡಿದರು.

ಈವರೆಗೆ ವಿದೇಶ ಪ್ರಯಾಣ ಮಾಡಿದವರು ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಮಾತ್ರ ಪರೀಕ್ಷೆಗೊಳಪಡಿಸಲಾಗುತ್ತಿತ್ತು. ಇನ್ನು ಮುಂದೆ ಶೀತ,ನೆಗಡಿ, ಕೆಮ್ಮು ಲಕ್ಷಣಗಳಿದ್ದರೂ ಅವರನ್ನು ತಪಾಸಣೆಗೊಳಪಡಿಸಬೇಕು. ಜತೆಗೆ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ಮಾಡಬೇಕು. ಪ್ರತಿ ದಿನ ಶಿಷ್ಟಾಚಾರ ಬದಲಾಗುತ್ತಿದ್ದು, ಅದನ್ನು ತಪ್ಪದೇ ಅನುಸರಿಸಬೇಕು. ಅಧಿಕಾರಿಗಳು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ನಿರ್ವಹಣೆಗೆ ಮುಂದಾಗಬೇಕು. ಆರೋಗ್ಯ ಕಾರ್ಯಕರ್ತರಿಗೆ ಸಮಸ್ಯೆ ಎದುರಾದರೆ, ಅದಕ್ಕೆ ಸೂಕ್ತ ಪರಿಹಾರ ಒದಗಿಸಿ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಆಗಬೇಕು ಎಂದರು.

ಪಾದಚಾರಿ ರಸ್ತೆಗಳ ಸ್ವಚ್ಛತೆಗೆ ಬಗ್ಗೆ ಆದ್ಯತೆ ನೀಡಿ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಬೀದಿ ಬದಿ ವ್ಯಾಪಾರಿಗಳು ತ್ಯಾಜ್ಯವನ್ನು ರಸ್ತೆಗೆ ಎಸೆಯದಂತೆ ನೋಡಿಕೊಂಡು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಬಗ್ಗೆ ಸೂಕ್ತ ಯೋಜನೆ ರೂಪಿಸಬೇಕು ಎಂದು ಇದೇ ವೇಳೆ ನಿರ್ದೇಶನ ನೀಡಿದರು.
 

click me!