ರಾಮನಗರ ಜಿಲ್ಲೆಯ ಕೊರೋನಾ, ಬ್ಲ್ಯಾಕ್‌ ಫಂಗಸ್‌ ಬಗ್ಗೆ ಮಾಹಿತಿ ಕೊಟ್ಟ ಡಿಸಿಎಂ

By Suvarna NewsFirst Published May 26, 2021, 8:56 PM IST
Highlights

* ರಾಮನಗರ ಜಿಲ್ಲೆಯ ಕೊರೋನಾ, ಬ್ಲ್ಯಾಕ್‌ ಫಂಗಸ್‌ ಬಗ್ಗೆ ಮಾಹಿತಿ ಕೊಟ್ಟ ಡಿಸಿಎಂ
* ರಾಮನಗರ ಜಿಲ್ಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ನ 6 ಪ್ರಕರಣ ಪತ್ತೆ
*ಒಂದು ವಾರದಲ್ಲಿ ಕಪ್ಪು ಶಿಲೀಂದ್ರಕ್ಕೆ ಔಷಧಿ ಕೊರತೆ ನಿವಾರಣೆ ಎಂದ ಡಾ.ಸಿ.ಎನ್.‌ಅಶ್ವತ್ಥನಾರಾಯಣ

ಬೆಂಗಳೂರು, (ಮೇ.26): ರಾಮನಗರ ಜಿಲ್ಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ನ ಆರು ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು, ಐವರಿಗೆ  ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮತ್ತು ಇನ್ನೊಬ್ಬರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು. 

ಕೋವಿಡ್‌ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಘಟಕ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಬುಧವಾರ ಹಮ್ಮಿಕೊಳ್ಳಲಾಗಿದ್ದ ಆನ್‌ಲೈನ್‌ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬ್ಲ್ಯಾಕ್‌ ಫಂಗಸ್‌ಗೆ ಔಷಧಿ ಕೊರತೆ ಇದೆ. ಇನ್ನೊಂದು ವಾರದಲ್ಲಿ ಈ ಎಲ್ಲ ಕೊರತೆಯನ್ನೂ ನೀಗಿಸಲಾಗುವುದು. ರಾಮನಗರವೂ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಔಷಧಿಯನ್ನು ಒದಗಿಸಲಾಗುವುದು ಎಂದರು.‌ 

ಕೊರೋನಾ 3ನೇ ಅಲೆ ಎದುರಿಸಲು ರಾಜ್ಯ ಸರ್ಕಾರ ಸಜ್ಜು: ತಜ್ಞ ವೈದ್ಯರ ಉನ್ನತ ಮಟ್ಟದ ಸಮಿತಿ ರಚನೆ

ಕೋವಿಡ್ ಕೇರ್ ಗಳಲ್ಲಿ 1891 ಸೋಂಕಿತರು 
ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದ್ದು, ಪಾಸಿಟಿವಿಟಿ ದರವೂ ಕಡಿಮೆ ಇದೆ. ಅದಕ್ಕೆ ಪೂರಕವಾಗಿ ಜಿಲ್ಲಾ ಕೇಂದ್ರ ಮತ್ತು ತಾಲೂಕು ಮಟ್ಟದಲ್ಲಿಯೂ ಉತ್ತಮ ಚಿಕಿತ್ಸೆ ಲಭ್ಯವಾಗುತ್ತಿದೆ. ಒಂದು ವಾರದಿಂದ ಹೋಮ್ ಐಸೋಲೇಷನ್ ಮಾಡುವುದನ್ನು ನಿಲ್ಲಿಸಲಾಗಿದೆ. ಈಗ ಕನಿಷ್ಠ ಒಬ್ಬರೂ ಹೋಮ್ ಐಸೋಲೇಷನ್ ನಲ್ಲಿ ಇಲ್ಲ.  ಇಡೀ ಜಿಲ್ಲೆಯಲ್ಲಿ ಈಗ 1891 ಸೋಂಕಿತರು ಕೋವಿಡ್ ಕೇರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಹೊಸದಾಗಿ 191 ಸೋಂಕಿತರನ್ನು ಕೋವಿಡ್ ಕೇರ್ಗಳಿಗೆ ಶಿಫ್ಟ್ ಮಾಡಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು. 

ಉಳಿದಂತೆ ಜಿಲ್ಲೆಯಲ್ಲಿ ಸರಾಸರಿ ದಿನಕ್ಕೆ 252 ಜನರಿಗೆ ಸೋಂಕು ತಗುಲುತ್ತಿದೆ. ಈ ಪ್ರಮಾಣಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಚಿಕಿತ್ಸೆ, ಔಷಧಿ, ಆಕ್ಸಿಜನ್, ಐಸಿಯು ಬೆಡ್, ವೆಂಟಿಲೇಟರ್ಗಳಿಗೆ ಕೊರತೆ ಇಲ್ಲ. ಅಲ್ಲದೆ, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿಯೇ ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಲ್ಯಾಬ್ಗಳಿಂದ ೨೪ ಗಂಟೆಯೊಳಗೇ ವರದಿಗಳು ಬರುತ್ತಿವೆ. ಹೀಗಾಗಿ ಸಕಾಲದಲ್ಲಿ ಚಿಕಿತ್ಸೆ ಆರಂಭವಾಗಿ ಪ್ರಾಣ ನಷ್ಟ ತಪ್ಪುತ್ತಿದೆ. ಇಡೀ ರಾಜ್ಯದಲ್ಲಿಯೇ ರಾಮನಗರ ಜಿಲ್ಲೆಯಲ್ಲಿ ಕೋವಿಡ್ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದರು.

ಮೇ 30ರಂದು ಸೇವಾ ಕಾರ್ಯಕ್ರಮ 
ಇದೇ ಮೇ 30ರಂದು ಕೇಂದ್ರದ ನರೇಂದ್ರ ಮೋದಿ ಅವರ ೨ನೇ ಅವಧಿಯ ಸರಕಾರ ಎರಡು ವರ್ಷ ಪೂರೈಸಿ  ಮೂರನೇ ವರ್ಷಕ್ಕೆ ಕಾಲಿಡಲಿದೆ. ಜಿಲ್ಲೆಯಲ್ಲಿ ಅಂದು ಅದ್ಧೂರಿ ಕಾರ್ಯಕ್ರಮಗಳು ಬೇಡ. ಅದರ ಬದಲಿಗೆ ಕೋವಿಡ್ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಸೇವೆ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಲೂವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು. 

ಬೂತ್, ಪಂಚಾಯಿತಿ ಮಟ್ಟದಲ್ಲಿ ತಂಡಗಳನ್ನು ರಚನೆ ಮಾಡಿಕೊಂಡು ದಿನವಿಡೀ ಸೇವಾ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯವಾಗಿ ಕೋವಿಡ್ನಿಂದ ಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವು ಕೊಡುವುದೇ ಮೂಲೋದ್ದೇಶವಾಗಿದೆ. ಇದರಲ್ಲಿ ಎಲ್ಲ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು ಭಾಗಿಯಾಗಬೇಕು ಎಂಬ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 

ಬಿಜೆಪಿ ರಾಮನಗರ ಜಿಲ್ಲಾಧ್ಯಕ್ಷ ಹುಲವಾಡಿ ರಮೇಶ್, ಸಂಘಟನಾ ಕಾರ್ಯದರ್ಶಿ ಕಾಂತರಾಜ್, ಮಂಡಲಾಧ್ಯಕ್ಷ ಧನಂಜಯ ಸೇರಿದಂತೆ ಎಲ್ಲ ತಾಲೂಕುಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.

click me!