ಮೈಸೂರಲ್ಲಿ IAS ಸಮರ : ಡಿಸಿ ಮನೆ ಸ್ವಿಮ್ಮಿಂಗ್ ಪೂಲ್ ತನಿಖೆಗೆ ಆದೇಶಿಸಿದ ಸರಕಾರ

By Suvarna NewsFirst Published Jun 4, 2021, 1:46 PM IST
Highlights
  • ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ಸಮರ ತಾರಕಕ್ಕೆ
  • ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ  ಮೊದಲ ಬಾರಿ ಈ ಬಗ್ಗೆ ಪ್ರತಿಕ್ರಿಯೆ
  • ಎಲ್ಲವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತರುತ್ತೇನೆ - ಡೀಸಿ

ಮೈಸೂರು (ಜೂ.04): ಮೈಸೂರಲ್ಲಿ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿರುವಾಗಲೇ, ಸರಕಾರ ಡಿಸಿ ಮನೆಯಲ್ಲಿ ಕಟ್ಟಿಸಿರುವ ಒಳಾಂಗಾಣ ಸ್ವಿಮ್ಮಿಂಗ್ ಪೂಲಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಆದೇಶಿಸಿದ್ದು, ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಸರಕಾರಿ ಬಂಗಲೆಯಲ್ಲಿ ಕಟ್ಟಿಸಿದ ಸ್ವಿಮ್ಮಿಂಗ್ ಪೂಲ್ ಹಾಗೂ ಜಿಮ್‌ಗೆ ಸಂಬಂಧಿಸಿದಂತೆ ತನಿಖೆಯಾಗಬೇಕೆಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಮೇ 31ರಂದೇ ಆದೇಶಿಸಿದ್ದಾರೆ. ಆದರೆ, ಶಿಲ್ಪಾ ನಾಗ್ ರಾಜೀನಾಮೆ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ಏತನ್ಮಧ್ಯೆ ರೋಹಿಣಿ ಸಿಂಧೂರಿ ಈ ಸ್ವಿಮ್ಮಿಂಗ್ ಪೂಲ್ ಅನ್ನು ನಿರ್ಮಿತಿ ಕೇಂದ್ರ ನಿರ್ಮಿಸಿದ್ದು, 28 ಲಕ್ಷ ರೂ ವ್ಯಯಿಸಿದೆ. ಹೇಗೆ ವೆಚ್ಚವನ್ನು ಕಡಿತಗೊಳಿಸಬಹುದೆಂದು ತಿಳಿದುಕೊಳ್ಳಲು ಈ ಪೂಲ್ ಅನ್ನು ಪ್ರಾಯೋಗಿಕವಾಗಿ ನಿರ್ಮಿಸಿದೆ, ಎಂದು ಸಮಜಾಯಿಸಿ ನೀಡಿದ್ದಾರೆ.

ಅಲ್ಲದೇ ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ಸಮರ ತಾರಕಕ್ಕೆ ಏರಿದ್ದು ಈ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇಂದು ಮೊದಲ ಬಾರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 

ನಮಗೆ ಕೋವಿಡ್ ಅಂಕಿ ಅಂಶ, ಸಿಎಸ್‌ಆರ್ ಫಂಡ್ ಮಾಹಿತಿ ಬಂದಿಲ್ಲ. ನೀವೂ ಎಷ್ಟು ಸಿಎಸ್‌ಆರ್ ಫಂಡ್ ಬಳಕೆ ಮಾಡಿದ್ದೀರಾ? ವಾರ್ಡ್ ವೈಸ್ ಎಷ್ಟು ಕೋವಿಡ್ ಪ್ರಕರಣ ಇದೆ.  ಸಿಎಸ್‌ಆರ್ ಫಂಡ್ ಯಾರಿಗೆ ಖರ್ಚು ಮಾಡಿದ್ದೀರಾ ಕೊಡಿ ಎಂದು ಈ‌ ಮಾಹಿತಿಯನ್ನು ಪಾಲಿಕೆ ಆಯುಕ್ತರಿಗೆ ಕೇಳಿದ್ದೇನೆ  ಎಂದು ಮೈಸೂರಿನಲ್ಲಿಂದು ಡೀಸಿ ರೋಹಿಣಿ ಸಿಂಧೂರಿ ಹೇಳಿದರು.

ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಮೈಸೂರಿಗೆ ಬರುತ್ತಿದ್ದಾರೆ.  ಎಲ್ಲಾ ವಿಚಾರ ಅವರ ಗಮನಕ್ಕೂ ತರುತ್ತೇವೆ. ಪ್ರತೀ ಜಿಲ್ಲೆಯಲ್ಲಿ ಸಿಎಸ್ಆರ್ ಫಂಡ್ ಇರಲಿದೆ.  ಶೇ. 30 ರಷ್ಟು ಫಂಡ್ ರಿಸರ್ವ್ ಫಂಡ್ ಇಡಬೇಕು. ಒಂದು ವಾರದಲ್ಲಿ ಜಿಲ್ಲೆಯಲ್ಲಿ ವೈದ್ಯರ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮ  ನಡೆಯುತ್ತಿದೆ.  ಇದಕ್ಕೆ ನಾವು ಸಿಎಸ್‌ಆರ್ ಫಂಡ್ ಪಡೆದುಕೊಳ್ಳಬೇಕಿದೆ ಎಂದರು.

ಐಎಎಸ್ vs ಐಎಎಸ್: ಶಿಲ್ಪಾ ನಾಗ್ ಆರೋಪಗಳಿಗೆ ರೋಹಿಣಿ ಸಿಂಧೂರಿ ಪ್ರತ್ಯುತ್ತರ .

ಸಿಎಸ್‌ಆರ್ ಫಂಡ್ ಏನಾಗಿದೆ ಎಂದು ಪಾಲಿಕೆ ಆಯುಕ್ತರಿಗೆ ಕೇಳಿದ್ದೇವೆ. ಇದಕ್ಕೆ ಅವರು ಎಲ್ಲವೂ ಖರ್ಚಾಗಿದೆ ಎಂದಿದ್ದಾರೆ. ಅದು ಹೇಗೆ ಖರ್ಚಾಗಿದೆ ಮಾಹಿತಿ ಕೊಡಿ ಎಂದು ಕೇಳಿದ್ದೇವೆ ಅಷ್ಟೇ.  12 ಕೋಟಿ ಖರ್ಚಾಗಿದೆ ಎಂದರೆ ಎಲ್ಲಿ ಖರ್ಚಾಗಿದೆ ಮಾಹಿತಿ ಕೊಡಿ ಎಂದಿದ್ದೇವೆ. ನಿಮಗೆ ನಿಮ್ಮ ಮೇಲಿನ ಅಧಿಕಾರಿ ಬಗ್ಗೆ ಬೇಸರ ಇದ್ದರೆ ಹೇಳಬೇಕು. ಅದನ್ನ ಬಿಟ್ಟು ಮಾಧ್ಯಮದ ಮುಂದೆ ಹೇಳೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ಪ್ರತಿಯೊಂದಕ್ಕೂ ಒಂದು ಸಿಸ್ಟಮ್ ಇರುತ್ತದೆ.  ಆ ಸಿಸ್ಟಮ್ ಮೂಲಕವೇ ಹೋಗಬೇಕು ಅದನ್ನ ಮೀರಬಾರದು. ಅವರು ಬಂದಾಗಿನಿಂದ ಸಮಸ್ಯೆ ಹೇಳಿಕೊಂಡಿಲ್ಲ. ಇದೀಗ ಒಂದು ವಾರ ಹತ್ತು ದಿನದಿಂದ ಸಮಸ್ಯೆ ಇದೆ  ಎನ್ನುತ್ತಿದ್ದಾರೆ ಎಂದರು.  

ಮೈಸೂರು ಪಾಲಿಕೆ ಆಯುಕ್ತೆ ರಾಜೀನಾಮೆ, ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ..

ನಾವೇನಿದ್ದರೂ ಸರ್ಕಾರಕ್ಕೆ ವರದಿ ಕೊಡುತ್ತೇವೆ. ನಾವು ಈ ಬಗ್ಗೆ ಕೇವಲ ಪ್ರೆಸ್ ನೋಟ್ ಕೊಟ್ಟಿದ್ದೇವೆ.  ಈ‌ಗ ಎಲ್ಲರಿಗೂ ಒತ್ತಡ ಇದೆ. ಇಡೀ ಸಿಸ್ಟಮ್ ಈಗ ಒತ್ತಡದಲ್ಲಿ ಕೆಲಸ ಮಾಡುತ್ತಿದೆ.  ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು ಎಲ್ಲರೂ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಸರಿಯಾದ ಮಾಹಿತಿ ಕೊಡಬೇಕು ಎಂಬುದು ನಮ್ಮ ಗುರಿ. ಯಾರಿಗೆ ಒತ್ತವಿಲ್ಲ ಹೇಳಿ ಎಂದು ಮೈಸೂರಿನಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!