ಉತ್ತರಕನ್ನಡ: ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಆರೋಗ್ಯ ಇಲಾಖೆಗೆ ಡಿಸಿ ಪ್ರಸ್ತಾವ

Published : Jul 31, 2022, 10:52 AM IST
ಉತ್ತರಕನ್ನಡ: ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಆರೋಗ್ಯ ಇಲಾಖೆಗೆ ಡಿಸಿ ಪ್ರಸ್ತಾವ

ಸಾರಾಂಶ

ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 50 ಹಾಸಿಗೆಯುಳ್ಳ ತುರ್ತು ನಿಗಾ ಘಟಕ ಸ್ಥಾಪಿಸಲು ಅನುಮೋದನೆ ದೊರೆತಿದೆ. 

ಕಾರವಾರ(ಜು.31):  ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಶನಿವಾರ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ಸೂಚನೆ ಮೇರೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಒಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ತೀರಾ ಅವಶ್ಯಕತೆಯಿದ್ದು, ಸರ್ಕಾರಿ ಸೂಪರ ಸ್ಪೆಷಾಲಿಟಿ ಆಸ್ಪತ್ರೆ ಅಥವಾ ಹೊಸ ವೈದ್ಯಕೀಯ ಕಾಲೇಜಿನೊಂದಿಗೆ ಸೂರ್ಪ ಸ್ಟೆಷಾಲಿಟಿ ಸೇವೆ ಲಭ್ಯವಿರುವ ಆಸ್ಪತ್ರೆಯನ್ನು ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಆರಂಭಿಸುವುದು ಅವಶ್ಯಕವಾಗಿರುತ್ತದೆ. ಈ ರೀತಿಯ ಸೇವೆ ಲಭ್ಯವಾದಲ್ಲಿ, ಜಿಲ್ಲೆಯ ಸಾಕಷ್ಟುರೋಗಗಳಿಗೆ ಹೆಚ್ಚಿನ ಕಾಯಿಲೆಗೆ ಚಿಕಿತ್ಸೆ ಮತ್ತು ಅಪಘಾತದ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆ ನೀಡಿ ಜೀವಹಾನಿಯಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಕುಮಟಾದ ಜಮೀನೊಂದರಲ್ಲಿ ಏಕಲವ್ಯ ವಸತಿ ಶಾಲೆಗೆ ಮಂಜೂರಿ ಮಾಡಿದ್ದು, ಈ ಜಾಗವನ್ನು ಆಸ್ಪತ್ರೆ ಉದ್ದೇಶಕ್ಕೆ ಬಳಸುವುದಾದಲ್ಲಿ ಏಕಲವ್ಯ ವಸತಿ ಶಾಲೆಗೆ ಸೂಕ್ತವಾದ ಬೇರೆ ಸ್ಥಳ ಗುರುತಿಸಿ ನೀಡಲಾಗುವುದಾಗಿ ಹೇಳಿದ್ದಾರೆ.
ಜಿಲ್ಲೆಯು ಭೌಗೋಳಿಕವಾಗಿ ಅತಿದೊಡ್ಡ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ಒಂದು ಜಿಲ್ಲಾಸ್ಪತ್ರೆಯು ಕಾರವಾರ ವೈದ್ಯಕೀಯ ಕಾಲೇಜಿನ ಬೋಧಕ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಸರ್ಕಾರಿ ತಾಲೂಕಾ ಆಸ್ಪತ್ರೆಗಳು ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕಾರ್ಯನಿರ್ವಹಿಸುತ್ತಿದ್ದು ಈ ಎಲ್ಲ ಆಸ್ಪತ್ರೆಗಳಲ್ಲಿ ಬೆರಳಣಿಕೆಯ ವೈದ್ಯರ ಸೇವೆ ಮಾತ್ರ ಲಭ್ಯವಿದೆ ಎಂದಿದ್ದಾರೆ.

ಉತ್ತರ ಕನ್ನಡಕ್ಕೊಂದು ಆಸ್ಪತ್ರೆಗಾಗಿ ಬೆಂಗ್ಳೂರಲ್ಲಿ ಪ್ರತಿಭಟನೆ, ಮನ್ ಕೀ ಬಾತ್‌ಗೆ ಕರೆ ಮಾಡಲು ನಿರ್ಣಯ

ವಿಶೇಷ ಪರಿಣಿತಿ ಹೊಂದಿರುವ ಅದರಲ್ಲೂ ಅತಿ ಅವಶ್ಯವಿರುವ ಕಾರ್ಡಿಯಾಲೋಜಿ, ನ್ಯೂರೊಲಜಿ ಹಾಗೂ ಕ್ಯಾನ್ಸರ್‌ ಕಾಯಿಲೆಯ ತಜ್ಞರು ಜಿಲ್ಲೆಯಲ್ಲಿ ಲಭ್ಯವಿಲ್ಲದಿರುವುದರಿಂದ ಜನಸಾಮಾನ್ಯರು ಹೆಚ್ಚಿನ ತಜ್ಞ ಚಿಕಿತ್ಸೆಗೆ ನೆರೆಯ ಜಿಲ್ಲೆಗಳಲ್ಲಿರುವ ಸೂಪರ್‌ ಸ್ಟೆಷಾಲಿಟಿ ಆಸ್ಪತ್ರೆಗಳ ಸೇವೆ ಪಡೆಯಲು ತೆರಳುವುದು ಅನಿವಾರ್ಯವಾಗಿದೆ. ತುರ್ತು ಸಮಯದಲ್ಲಿ ಸಹ ತೊಂದರೆಯು ಅನಾಭವಿಸುವಂತಾಗಿದೆ ಎಂದು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ.

ಬೆಂಗಳೂರು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಪಿಎಂ ಎಬಿಎಚ್‌ಐಎಂನಿಂದ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 50 ಹಾಸಿಗೆಯುಳ್ಳ ತುರ್ತು ನಿಗಾ ಘಟಕ ಸ್ಥಾಪಿಸಲು ಅನುಮೋದನೆ ದೊರೆತಿದೆ. ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ಥಳಾವಕಾಶದ ಕೊರತೆಯಿದೆ. ಕಾರವಾರದಿಂದ 25 ನಿಮಿಷಗಳ ಸಮಯದ ಅಂತರದಲಿರುವ ಅಂಕೋಲಾ ತಾಲೂಕಿನ ಹಟ್ಟಿಕೇರಿ ನೌಕಾದಳ, ನಾಗರಿಕ ವಿಮಾನ ನಿಲ್ದಾಣ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಹತ್ತಿರವಿದ್ದ ಕಾರಣ ಈ ಸ್ಥಳ ಸೂಕ್ತವಾಗಿದೆ ಎಂದಿದ್ದಾರೆ.
 

PREV
Read more Articles on
click me!

Recommended Stories

ಬರೋಬ್ಬರಿ 4 ದಶಕಗಳ ಬೆಂಗಳೂರು ಉಪನಗರ ರೈಲು ಕನಸು ನನಸಾಗೋ ಕಾಲ ಸನ್ನಿಹಿತ, 2028ಕ್ಕೆ ಮೊದಲ ಸೇವೆ ಆರಂಭ!
Bigg Boss ಖ್ಯಾತಿಯ ದಿವ್ಯಾ ಸುರೇಶ್‌ಗೆ ಬೆಚ್ಚಿಬೀಳಿಸುವ ಅನುಭವ: ವಿಡಿಯೋ ಹಂಚಿಕೊಂಡು ಪೊಲೀಸರಿಗೆ ಮನವಿ