ರೈತರಿಗೆ ಇಲ್ಲಿಗೆ ಗುಡ್ ನ್ಯೂಸ್, ರಾಗಿ ಹಾಗೂ ಭತ್ತದ ಮೇಲಿನ ಬೆಂಬಲ ಬೆಲೆ ಏರಿಕೆಯ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಇಟ್ಟಿದ್ದು ಈ ಬಗ್ಗೆ ಸಿದ್ಧತೆಗೆ ಸೂಚನೆ ನೀಡಿದ್ದಾರೆ.
ರಾಮನಗರ [ಡಿ.09]: ಜಿಲ್ಲೆಯಲ್ಲಿ ರೈತರು ಬೆಳೆದಿರುವ ರಾಗಿ ಮತ್ತು ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆದು ಖರೀದಿ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಅವರು ಬೆಳೆದ ಬೆಳೆಗಳನ್ನು ನೇರವಾಗಿ ಕನಿಷ್ಠ ಬೆಂಬಲ ಯೋಜನೆಯಡಿ ಖರೀದಿಸಲಾಗುವುದು ಎಂದರು.
ಕೇಂದ್ರ ಸರ್ಕಾರ ಒಂದು ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ ರು. 1815, ಗ್ರೇಡ್ ಎ ಭತ್ತಕ್ಕೆ ರು. 1835, ಹಾಗೂ ರಾಗಿಗೆ ರು. 3150 ನಿಗದಿ ಮಾಡಿದೆ. ಖರೀದಿ ಕೇಂದ್ರಗಳನ್ನು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ತೆರೆಯಲಾಗುವುದು. ತಾಲೂಕಿನ ತಹಸೀಲ್ದಾರ್ ನೋಡಲ್ ಅಧಿಕಾರಿಗಳಿಗೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವ ಮೊದಲು ರೈತರಿಂದ ಅವಶ್ಯಕವಿರುವ ಬ್ಯಾಂಕ್ ಖಾತೆಯ ವಿವರ, ಆರ್.ಟಿ.ಸಿ, ಬೆಳೆ ದೃಢೀಕರಣ ಪತ್ರ, ಮೊಬೈಲ್ ಸಂಖ್ಯೆ ಹಾಗೂ ಇನ್ನಿತರೆ ಅವಶ್ಯಕ ದಾಖಲೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಸಂಗ್ರಹಿಸಿಕೊಳ್ಳಿ. ರೈತರು ತಮ್ಮ ಸರಿಯಾದ ಮೊಬೈಲ್ ಸಂಖ್ಯೆಯನ್ನು ನೀಡಿ. ಇದರಿಂದ ಅಧಿಕಾರಿಗಳು ತಮ್ಮನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು. ರೈತರಿಂದ ಹಣವನ್ನು ಸಹ ಆರ್ಟಿಜಿಎಸ್ ಮೂಲಕ ಪಾವತಿಸಲಾಗುವುದು ಎಂದರು.
ಬೆಂಗಳೂರು, ಶಿವಮೊಗ್ಗದಲ್ಲಿ ಕಂಬಳ ನಡೆಸಲು ಚಿಂತನೆ: ಡಿಸಿಎಂ...
ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್ ಮಾತನಾಡಿ, ಕಳೆದ ಸಾಲಿನಲ್ಲಿ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ 5192 ಕ್ವಿಂಟಲ್ ಭತ್ತ ಹಾಗೂ 1,20,000 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗಿದೆ. ಈ ಬಾರಿ ರೈತರನ್ನು ಖರೀದಿ ಕೇಂದ್ರದ ಮುಂದೆ ಕಾಯಿಸದೆ ಖರೀದಿಸಲು ಕೂಪನ್ ವ್ಯವಸ್ಥೆ ಮಾಡಲು ಚಿಂತಿಸಲಾಗುತ್ತಿದೆ. ರೈತರಿಂದ ಭತ್ತ ಹಾಗೂ ರಾಗಿಯ ಸ್ಯಾಂಪಲ್ ಪಡೆದು ಅದರ ಗುಣಮಟ್ಟವನ್ನು ಪರೀಕ್ಷಿಸಿ ನಂತರ ಖರೀದಿಸಲಾಗುವುದು ಎಂದರು.