ಗದಗ ಜಿಲ್ಲೆ ಸದ್ಯಕ್ಕೆ ಕೊರೋನಾ ಮುಕ್ತ..!

By Kannadaprabha NewsFirst Published May 10, 2020, 9:26 AM IST
Highlights

ಗದಗ ಜಿಲ್ಲೆಯಲ್ಲಿ ಪತ್ತೆಯಾದ 5 ಪ್ರಕರಣಗಳಲ್ಲಿ 1 ಸಾವು, ಇನ್ನುಳಿದ 4 ಗುಣಮುಖವಾಗಿ ಬಿಡುಗಡೆ| ಬಾಗಲಕೋಟೆ ಜಿಲ್ಲೆಯ ಐವರು (ಜಿಲ್ಲೆಯ ಕೃಷ್ಣಾಪುರ ಗ್ರಾಮದ ಗರ್ಭಿಣಿ ಸೇರಿ) ಸೋಂಕಿತರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಹೋಗಿರುವ ಹಿನ್ನೆಲೆಯಲ್ಲಿ ಕೋವಿಡ್‌ 19 ಯಾವಾಗಲಾದರೂ ವಕ್ಕರಿಸುವ ಭೀತಿಯನ್ನು ಅಲ್ಲಗಳೆಯುವಂತಿಲ್ಲ|
 

ಗದಗ(ಮೇ.10): ಜಿಲ್ಲೆ ಸದ್ಯಕ್ಕೆ ಕೊರೋನಾ ಮುಕ್ತವಾಗಿದೆ, ಸೋಂಕು ಪೀಡಿತರಾಗಿದ್ದ ಎಲ್ಲ ನಾಲ್ವರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ ಬಾಗಲಕೋಟೆ ಜಿಲ್ಲೆಯ ಐವರು (ಜಿಲ್ಲೆಯ ಕೃಷ್ಣಾಪುರ ಗ್ರಾಮದ ಗÜರ್ಭಿಣಿ ಸೇರಿ) ಸೋಂಕಿತರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಹೋಗಿರುವ ಹಿನ್ನೆಲೆಯಲ್ಲಿ ಕೋವಿಡ್‌ 19 ಯಾವಾಗಲಾದರೂ ವಕ್ಕರಿಸುವ ಭೀತಿಯನ್ನು ಅಲ್ಲಗಳೆಯುವಂತಿಲ್ಲ.

ಬೇರೆ ಬೇರೆ ಜಿಲ್ಲೆಗಳಲ್ಲಿ ಕೊರೋನಾ ಅಬ್ಬರಿಸುತ್ತಿದ್ದರೂ, ಗದಗ ಜಿಲ್ಲೆಗೆ ಅತೀ ಹೆಚ್ಚಿನ ಕಾರ್ಮಿಕರು ದೂರ ದೂರದ ಜಿಲ್ಲೆ ಮತ್ತು ರಾಜ್ಯಗಳಿಂದ ಮರಳಿದ್ದರೂ ಒಂದೇ ಒಂದು ಕೊರೋನಾ ಪ್ರಕರಣ ಇರದೇ ಜನತೆ ನೆಮ್ಮದಿಯಿಂದ ಲಾಕ್‌ಡೌನ್‌ನಲ್ಲಿದ್ದರು. ಅನಿರೀಕ್ಷಿತ ಎನ್ನುವ ರೀತಿಯಲ್ಲಿ ಏಪ್ರಿಲ್‌ 4ರಂದು ತೀವ್ರ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾದ ಗದಗ ನಗರದ ರಂಗನವಾಡಾದ 80 ವರ್ಷದ ವೃದ್ಧೆಗೆ ಏ. 6ರಂದು ಸೋಂಕು ದೃಢಪಡುವ ಮೂಲಕ ದೊಡ್ಡ ಆತಂಕಕ್ಕೆ ಕಾರಣವಾಗಿತ್ತು. ಇದು ಜಿಲ್ಲೆಯ ಮೊದಲ ಪ್ರಕರಣವಾಗಿತ್ತು.

ಗದಗ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಹರಡುವ ಭೀತಿ: ಆತಂಕದಲ್ಲಿ ಜನತೆ..!

ಕೊರೋನಾ ಟ್ರ್ಯಾಕ್‌:

ಏಪ್ರಿಲ್‌ 6ರಂದು ಜಿಲ್ಲೆಯ ಮೊದಲ ಕೊರೋನಾ ಪ್ರಕರಣ (ಪಿ-166) ದಾಖಲಾಗಿ ಆತಂಕದಲ್ಲಿರುವಾಗಲೇ ಏ. 9ರಂದು ವೃದ್ಧೆ ಮೃತಪಟ್ಟು ಮತ್ತಷ್ಟುಆತಂಕ ಹೆಚ್ಚಿಸಿದಳು. ಇದಾದ 10 ದಿನಗಳ ಕಾಲ ಯಾವುದೇ ಪ್ರಕರಣಗಳು ಇರಲಿಲ್ಲ. ಆದರೆ ಏ. 16ರಂದು ಮೃತಪಟ್ಟವೃದ್ಧೆಯ ಆತ್ಮೀಯ ಸ್ನೇಹಿತೆಯಾಗಿದ್ದ ಅದೇ ಭಾಗದ ನಿವಾಸಿ 59 ವರ್ಷದ (ಪಿ-304) ಮಹಿಳೆಗೆ ಸೋಂಕು ದೃಢಪಟ್ಟು ಜಿಲ್ಲೆಯಾದ್ಯಂತ ಭಯದ ವಾತಾವರಣ ನಿರ್ಮಾಣವಾಯಿತು. ಇದನ್ನೇ ಅರಗಿಸಿಕೊಳ್ಳಲು ಹೆಣಗುತ್ತಿದ್ದ ಜಿಲ್ಲೆಯ ಜನತೆಗೆ ಏ. 18ರಂದು (ಪಿ-304) ವೃದ್ಧೆಯ ಹತ್ತಿರದ ಸಂಬಂಧಿ 42 ವರ್ಷದ (ಪಿ-370) ವ್ಯಕ್ತಿಗೆ ಸೋಂಕು ದೃಢವಾಯಿತು. ಏ. 20ರಂದು 24 ವರ್ಷದ (ಪಿ-396) ಯುವಕನಿಗೂ ಸೋಂಕು ಖಚಿತವಾಗಿ ಗದಗ ನಗರದ ರಂಗನವಾಡ ಭಾಗದಿಂದಲೇ 4 ಪ್ರಕರಣಗಳು ಪತ್ತೆಯಾಗಿ ಗದಗ ನಗರವೇ ತತ್ತರಗೊಂಡಿತ್ತು. ಇದಾದ 10 ದಿನಗಳವರೆಗೂ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್‌ ಪ್ರಕರಣಗಳು ಇಲ್ಲ ಎಂದು ಜನ ನಿಟ್ಟುಸಿರು ಬಿಡುತ್ತಿದ್ದ ಸಂದರ್ಭದಲ್ಲಿಯೇ ಏ. 28ರಂದು ರಂಗನವಾಡಾದಿಂದ ಬೇರೆಡೆ ಶಿಫ್ಟ್‌ ಆಗಿ ಪಕ್ಕದ ಗಂಜಿಬಸವೇಶ್ವರ ಓಣಿಯ ನಿವಾಸಿ 75 ವರ್ಷದ ವಯೋವೃದ್ಧರಿಗೆ (ಪಿ-514) ಸೋಂಕು ಖಚಿತವಾಗುತ್ತಿದ್ದಂತೆ ಎಲ್ಲೆಡೆಯೂ ದೊಡ್ಡ ಆತಂಕಕ್ಕೆ ಕಾರಣವಾಗಿತ್ತು. ಆದರೆ ಕಳೆದ 12 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ.

ಒಂದು ಸಾವು 4 ಬಿಡುಗಡೆ:

ಜಿಲ್ಲೆಯಲ್ಲಿ ಐವರಿಗೆ ಸೋಂಕು ತಗುಲಿದ್ದು, ಅವರಲ್ಲಿ ಓರ್ವ ವೃದ್ಧೆ ಮೃತಪಟ್ಟಿದ್ದು, ಇನ್ನುಳಿದ 4 ಜನ ಸಂಪೂರ್ಣ ಗುಣಮುಖವಾಗಿ ಬಿಡುಗಡೆಯಾಗಿದ್ದಾರೆ. ಮೇ 1 ರಂದೇ ಪಿ-304 ಗುಣಮುಖರಾಗಿ ಬಿಡುಗಡೆಯಾಗಿದ್ದರು. ಇದೀಗ ಶನಿವಾರ ಇನ್ನುಳಿದ ಮೂವರು (ಪಿ-370), (ಪಿ-396), (ಪಿ-514) ಜಿಲ್ಲಾ ಕೊವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಗದಗ ಜಿಲ್ಲೆ ಸದ್ಯಕ್ಕೆ ಕೊರೋನಾ ಮುಕ್ತ ಜಿಲ್ಲೆಯಾಗಿದೆ.

ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ 4 ಜನ ಸಂಪೂರ್ಣ ಗುಣಮುಖವಾಗಿ ಬಿಡುಗಡೆಯಾಗಿದ್ದು ಸಂತೋಷದ ವಿಷಯವಾಗಿದೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿ ಅವರು ಗುಣಮುಖರಾಗಲು ಶ್ರಮಿಸಿದ ಎಲ್ಲಾ ವೈದ್ಯರಿಗೆ ಅನಂತ ಕೃತಜ್ಞೆಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ.

ಜಿಲ್ಲೆಯ ಎಲ್ಲಾ ಹಿರಿಯ, ಕಿರಿಯ ಮತ್ತು ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ನಿರಂತರ ಶ್ರಮದಿಂದಾಗಿ ಇಂದು ಗದಗ ಜಿಲ್ಲೆಯ ಎಲ್ಲಾ 4 ಸಕ್ರಿಯ ಪ್ರಕರಣಗಳು ಸೋಂಕು ಮುಕ್ತವಾಗಿದ್ದು, ಸೋಂಕಿತ ವೃದ್ಧೆಯೊಬ್ಬರು ಮೃತಪಟ್ಟರು ಎನನುವುದು ವಿಷಾಧದ ಸಂಗತಿ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
 

click me!