Chitradurga: ಕಬ್ಬಳ ಮಕ್ಕಳು, ಗ್ರಾಮಸ್ಥರೊಂದಿಗೆ ಡಿಸಿ ಸಂವಾದ

By Govindaraj SFirst Published Nov 30, 2022, 1:30 PM IST
Highlights

ಕೋಟೆ ನಾಡಿನ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿದ ನಂತರ ಹಳ್ಳಿಗಳ ರೌಂಡಪ್‌ ಆರಂಭಿಸಿರುವ ದಿವ್ಯಾಪ್ರಭು ಮಂಗಳವಾರ ಹೊಸದುರ್ಗ ತಾಲೂಕಿನ ದೇವಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಳ ಗ್ರಾಮದ ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೊಸದುರ್ಗ (ನ.30): ಕೋಟೆ ನಾಡಿನ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿದ ನಂತರ ಹಳ್ಳಿಗಳ ರೌಂಡಪ್‌ ಆರಂಭಿಸಿರುವ ದಿವ್ಯಾಪ್ರಭು ಮಂಗಳವಾರ ಹೊಸದುರ್ಗ ತಾಲೂಕಿನ ದೇವಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಳ ಗ್ರಾಮದ ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಬ್ಬಳ ಗ್ರಾಮದ ಶಾಲೆ, ಅಂಗನವಾಡಿಯಲ್ಲಿ ಮಕ್ಕಳ ಹಾಜರಾಗಿ ಕುರಿತು ಮೊದಲಿಗೆ ಮಾಹಿತಿ ಪಡೆದರು, ಬಳಿಕ ಶಾಲೆಯ ಅಡುಗೆ ಕೋಣೆ, ಶೌಚಾಲಯದತ್ತ ಕಣ್ಣಾಯಿಸಿದರು. ಶೌಚಾಲಯ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿರುವುದು ಗಮನಿಸಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಲೆಯಲ್ಲಿ ಮಕ್ಕಳಿಗೆ ನೀಡುವ ಬಿಸಿಯೂಟದ ಆಹಾರ ಪದಾರ್ಥಗಳಾದ ಬೇಳೆ, ಅಕ್ಕಿ, ತರಕಾರಿ ಇತ್ಯಾದಿಗಳನ್ನು ಪರಿಶೀಲಿಸಿ, ಸರ್ಕಾರದ ನಿಯಮಾನುಸಾರವಾಗಿ ನಿಗದಿತ ಪ್ರಮಾಣದಷ್ಟುಆಹಾರಧಾನ್ಯ ಬಳಸಬೇಕು. ಗುಣಮಟ್ಟದ, ಶುಚಿ ರುಚಿಯಾದ ಮಧ್ಯಾಹ್ನದ ಬಿಸಿಯೂಟ ನೀಡಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಆಹಾರ ತಯಾರಿಸಬೇಕು ಎಂದು ಅಡುಗೆ ಸಿಬ್ಬಂದಿಗೆ ತಾಕೀತು ಮಾಡಿದರು. ಶಾಲೆಯಲ್ಲಿ ಸ್ಮಾರ್ಚ್‌ ಕ್ಲಾಸ್‌ ಸೌಲಭ್ಯವಿದ್ದು, ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಅನೈತಿಕ ಸಂಬಂಧಕ್ಕೆ ಗಂಡ ಅಡ್ಡಿ ಎಂದು ಕೊಲೆ: ಸಿನಿಮಾ ರೀತಿಯಲ್ಲಿ ಮರ್ಡರ್‌ ರಹಸ್ಯ ಬಯಲು

ಆರ್‌ಎಡಿಎಫ್‌ನಲ್ಲಿ ನಿರ್ಮಾಣವಾಗಿರುವ ಅಂಗನವಾಡಿ ಕಟ್ಟಡ ನಿರ್ಮಾಣ ಪರಿಶೀಲಿಸಿ, ಅಂಗನವಾಡಿ ಮಕ್ಕಳಿಗೆ ನೀಡುವ ಮೊಟ್ಟೆ, ಚಿಕ್ಕಿ ಮುಂತಾದ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಇಂಗ್ಲಿಷ್‌ ಭಾಷಾ ಕಲಿಕೆಯಲ್ಲಿ ಸಮಸ್ಯೆಗಳಿದ್ದರೆ, ಅವುಗಳನ್ನು ನಿವಾರಿಸಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಯಾವುದೇ ಮುಜುಗರವಿಲ್ಲದೆ ಇಂಗ್ಲಿಷ್‌ ಭಾಷೆಯಲ್ಲಿ ಉತ್ತಮ ಪ್ರೌಢಿಮೆ ಬೆಳೆಸಿಕೊಳ್ಳಬೇಕು. ಪ್ರತಿನಿತ್ಯವೂ ಪಾಠಗಳ ಅಧ್ಯಯನ ಮಾಡುವ ವಿಧಾನದ ಕುರಿತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಕಬ್ಬಳ ಗ್ರಾಮದ ಗ್ರಾಮಸ್ಥರೊಂದಿಗೆ ಚರ್ಚಿಸಿ ಅಹವಾಲು ಆಲಿಸಿದರು. ಸೊಳ್ಳೆ ಮುಕ್ತ ಗ್ರಾಮವನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದ ಅವರು, ಪ್ರತಿಯೊಬ್ಬರು ಶೌಚಾಲಯ ಬಳಕೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸುವಂತೆ ತಾಕೀತು ಮಾಡಿದರು.

ಕುಂದು-ಕೊರತೆ ಆಲಿಸಿದ ಡಿಸಿ: ಗ್ರಾಮದ ರಸ್ತೆ ಒತ್ತುವರಿಯಾಗಿರುವ ಕುರಿತು ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ರಸ್ತೆಯನ್ನು ಅಳತೆ ಮಾಡಿ, ಒಂದು ವೇಳೆ ಒತ್ತುವರಿಯಾಗಿದ್ದರೆ ನಿಯಮಾನುಸಾರ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಹಸೀಲ್ದಾರ್‌ ಮಲ್ಲಿಕಾರ್ಜುನ್‌ಗೆ ಸೂಚನೆ ನೀಡಿದರು. ಹೊಸದುರ್ಗ ತಹಸೀಲ್ದಾರ್‌ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಸಾರ್ವಜನಿಕರ ಕುಂದು-ಕೊರತೆ ಆಲಿಸಿದರು. ನಂತರ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಪ್ರಗತಿ ಪರಿಶೀಲನೆ ನಡೆಸಿ, ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಮತದಾರರ ಪಟ್ಟಿಪರಿಷ್ಕರಣೆ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.

Chikkaballapur: ಎಎಸ್‌ಐ ಮನೆ ದರೋಡೆ ನಡೆಸಿದ್ದ ಅಂತರಾಜ್ಯ ಕಳ್ಳರ ಬಂಧನ

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ: ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಘಟಕ ದುರಸ್ತಿಗೆ ಬಂದಾಗ, ಪರಿಹಾರ ಕೈಗೊಳ್ಳಲು ಸಂಬಂಧಪಟ್ಟಅಧಿಕಾರಿಗಳಿಗೆ ಮಾಹಿತಿ ನೀಡಲು ದೂರವಾಣಿ ವಿವರ ಒಳಗೊಂಡ ಮಾಹಿತಿ ಫಲಕವನ್ನು ಸ್ಥಳದಲ್ಲಿ ಅಳವಡಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು. ಆರ್‌ಒ ಘಟಕ ದುರಸ್ತಿಗೆ ಬಂದಾಗ 24 ಗಂಟೆಯೊಳಗೆ ಕೈಗೊಂಡು ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಹೇಳಿದರು.

click me!