'ಒಂದು ಕಾಲದಲ್ಲಿ ಮನೆಗೆ ಬಿ ಫಾರಂ ಬರುತ್ತೆ ಅಂತಿದ್ರು, ಈಗ ಅಲೆಯುತ್ತಿದ್ದಾರೆ..' ಶಾಮನೂರು ಕುಟುಂಬಕ್ಕೆ ಜೆಡಿಎಸ್‌ ಮಾಜಿ ಶಾಸಕ ಟಾಂಗ್‌!

Published : Mar 21, 2026, 02:50 PM IST
JDS Ex MLA HS Shivashankar

ಸಾರಾಂಶ

ದಾವಣಗೆರೆ ರಾಜಕಾರಣದಲ್ಲಿ ಶಾಮನೂರು ಕುಟುಂಬದ ಪ್ರಾಬಲ್ಯದ ಕುರಿತು ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ವ್ಯಂಗ್ಯವಾಡಿದ್ದಾರೆ. ಒಂದು ಕಾಲದಲ್ಲಿ ಬಿ-ಫಾರಂ ಮನೆಗೆ ಬರುತ್ತಿತ್ತು, ಈಗ ಅದಕ್ಕಾಗಿ ಅಲೆಯುವಂತಾಗಿದೆ ಎಂದು ಟೀಕಿಸಿದ್ದಾರೆ.

ದಾವಣಗೆರೆ (ಮಾ.21): ಜಿಲ್ಲೆಯ ರಾಜಕಾರಣದಲ್ಲಿ ದಶಕಗಳ ಕಾಲ ಪ್ರಾಬಲ್ಯ ಹೊಂದಿದ್ದ ಶಾಮನೂರು ಕುಟುಂಬಕ್ಕೆ ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಪರೋಕ್ಷವಾಗಿ ತೀಕ್ಷ್ಣ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಕಗ್ಗಂಟಾಗಿರುವ ಬೆನ್ನಲ್ಲೇ ಮಾತನಾಡಿರುವ ಅವರು, "ಒಂದು ಕಾಲದಲ್ಲಿ ಬಿ-ಫಾರಂ ನಮ್ಮ ಮನೆಗೇ ಹುಡುಕಿಕೊಂಡು ಬರುತ್ತಿತ್ತು ಅಂತಿದ್ರು, ಆದರೆ ಈಗ ಬಿ-ಫಾರಂಗಾಗಿ ಅಲೆಯುವ ಕಾಲ ಬಂದಿದೆ," ಎಂದು ತಿವಿದಿದ್ದಾರೆ.

ಉಪಚುನಾವಣೆಯಲ್ಲಿ ಎನ್‌ಡಿಎ (NDA) ಮೈತ್ರಿಕೂಟದ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಜೆಡಿಎಸ್ ಸಂಪೂರ್ಣ ಬೆಂಬಲ ಘೋಷಿಸಿದೆ. ಈ ಕುರಿತು ಮಾತನಾಡಿದ ಶಿವಶಂಕರ್"ನಮ್ಮ ಪಕ್ಷದ ಬೆಂಬಲ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಇದೆ. ಅವರ ಪರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಇದು ವಿಚಿತ್ರ ಚುನಾವಣೆ. ಇದು ಕೇವಲ ಮತದಾನವಲ್ಲ, ಬದಲಿಗೆ 'ಶ್ರೀಸಾಮಾನ್ಯ Vs ಶ್ರೀಮಂತಿಕೆ' ನಡುವಿನ ಹೋರಾಟ' ಎಂದು ಹೇಳಿದ್ದಾರೆ. ಕೇವಲ ಹಣ ಬಲದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಈ ಬಾರಿ ಸಾಬೀತಾಗಲಿದೆ. ಇಲ್ಲಿ ಜನಬಲವೇ ಅಂತಿಮ ಎಂದಿದ್ದಾರೆ.

ಕಾಂಗ್ರೆಸ್ ಟಿಕೆಟ್ ಗೊಂದಲ ಹಾಗೂ ಮುಸ್ಲಿಂ ರಾಜಕಾರಣ

ಕಾಂಗ್ರೆಸ್‌ನಲ್ಲಿ ಎದ್ದಿರುವ ಟಿಕೆಟ್ ಫೈಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, "ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಇಲ್ಲದ ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಂತಾಗಿದೆ. ಒಂದು ವೇಳೆ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಈ ಬಾರಿ ಪೈಪೋಟಿ ಮತ್ತಷ್ಟು ಹೆಚ್ಚಾಗಲಿದೆ," ಎಂದಿದ್ದಾರೆ.

ರಾಜಕೀಯ ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ಎಚ್ಚರಿಸಿದ ಶಿವಶಂಕರ್, "ಸೂರ್ಯ ಮೇಲೆ ಏರಿದ ಮೇಲೆ ಕೆಳಗೆ ಇಳಿಯಲೇಬೇಕು. ಕೋಟೆ ಕಟ್ಟಿದವರು ಇತಿಹಾಸದಲ್ಲಿ ಮಣ್ಣಾಗಿ ಹೋಗಿದ್ದಾರೆ. ರಾಜಕೀಯ ಸ್ಥಾನಮಾನಗಳು ಯಾವತ್ತೂ ಸ್ಥಿರವಲ್ಲ. ಕಾಲ ಬದಲಾದಂತೆ ಬದಲಾವಣೆ ಅನಿವಾರ್ಯ," ಎಂದು ಪರೋಕ್ಷವಾಗಿ ಶಾಮನೂರು ಕುಟುಂಬದ ಹಿಡಿತ ಸಡಿಲವಾಗುತ್ತಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

 

PREV
Read more Articles on
click me!

Recommended Stories

ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ! 10ಕ್ಕೂ ಹೆಚ್ಚು ಜನರಿಗೆ ಗಾಯ
ಪ್ರಾಮಾಣಿಕತೆ ಮೆರೆದ ಬಿಎಂಟಿಸಿ ಸಿಬ್ಬಂದಿ; ₹10 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಪ್ರಯಾಣಿಕರಿಗೆ ವಾಪಾಸ್!