
ದಾವಣಗೆರೆ (ಮಾ.22): ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭೀಕರ ಬಂಡಾಯದ ಬಿಸಿ ತಟ್ಟಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಸಿಡಿದೆದ್ದಿರುವ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ನಗರದ ಅಖ್ತರ್ ರಝಾ ವೃತ್ತದಲ್ಲಿ ಜಮಾಯಿಸಿದ ನೂರಾರು ಅಲ್ಪಸಂಖ್ಯಾತ ಸಮುದಾಯದ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೈಯಲ್ಲಿ ಕಪ್ಪು ಬಾವುಟಗಳನ್ನು ಹಿಡಿದು, 'ಜಸ್ಟೀಸ್ ಫಾರ್ ಮೈನಾರಿಟೀಸ್' (ಅಲ್ಪಸಂಖ್ಯಾತರಿಗೆ ನ್ಯಾಯ ಸಿಗಲಿ) ಮತ್ತು 'ಜಸ್ಟೀಸ್ ಫಾರ್ ಅಹಿಂದ' ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. 'ಅಯ್ಯಯ್ಯೋ ಅನ್ಯಾಯ' ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು. ಸಾದಿಕ್ ಪೈಲ್ವಾನ್ ಅವರಂತಹ ನಿಷ್ಠಾವಂತ ಮುಖಂಡರಿಗೆ ಟಿಕೆಟ್ ನೀಡದೆ ವಂಚಿಸಲಾಗಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪವಾಗಿತ್ತು.
ಈ ಬಂಡಾಯದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಪರಿಸ್ಥಿತಿಯನ್ನು ಅತ್ಯಂತ ಸಂಯಮದಿಂದ ನಿಭಾಯಿಸಿದರು. "'ಯಾರೂ ಹೊಸಬರಲ್ಲ, ಎಲ್ಲರೂ ನಮ್ಮವರೇ. ಚುನಾವಣೆ ಬಂದಾಗ ಶಾಸಕ ಆಗಬೇಕು ಎಂಬ ಆಸೆ ಇರುವುದು ಸಹಜ. ಟಿಕೆಟ್ ಕೇಳುವುದರಲ್ಲಿ ತಪ್ಪೇನಿಲ್ಲ. ನಾನು ಕೂಡ ಈ ಹಿಂದೆ ನಾಮಪತ್ರ ವಾಪಸ್ ತೆಗೆದುಕೊಳ್ಳಿ ಎಂದರೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದೆ. ಆಕಾಂಕ್ಷಿಗಳು ಸ್ವಲ್ಪ ಸಿಟ್ಟಿನಲ್ಲಿರುವುದು ಸಹಜ, ನಾಳೆ ಅವರೊಂದಿಗೆ ಮಾತನಾಡಿ ಎಲ್ಲವನ್ನೂ ಸರಿಪಡಿಸುತ್ತೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿರುವ ಸಾದಿಕ್ ಪೈಲ್ವಾನ್ ಕುರಿತು ಮಾತನಾಡಿದ ಸಚಿವರು, 'ಸಾದಿಕ್ ಅವರಿಗೆ ಫೋನ್ ಮಾಡಿದ್ದೆ, ಅವರು ರಿಸೀವ್ ಮಾಡಿಲ್ಲ. ಅವರು ಮತ್ತು ಅವರ ತಮ್ಮ ಆಯೂಬ್ (ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು) ನಮ್ಮ ಪಕ್ಷದ ಅವಿಭಾಜ್ಯ ಅಂಗಗಳು. ಬಂಡಾಯ ಶಮನ ಮಾಡುವ ವಿಶ್ವಾಸ ನನಗಿದೆ. ಅಲ್ಲದೆ, ಅಲ್ಪಸಂಖ್ಯಾತ ಸಮುದಾಯದ ಅಸಮಾಧಾನ ತಣಿಸಲು ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ದಾವಣಗೆರೆಗೆ ಕರೆಸುವ ಬಗ್ಗೆಯೂ ಸುಳಿವು ನೀಡಿದರು. ಸಿಎಂ ಸಿದ್ದರಾಮಯ್ಯ ಮತ್ತು ನಾನು ಜಮೀರ್ ಅವರಿಗೆ ದಾವಣಗೆರೆಗೆ ಬರಲು ಕೇಳಿದ್ದೇವೆ. ಅವರು ಕೇರಳ ಪ್ರವಾಸ ಮುಗಿಸಿ ಬರುವ ಸಾಧ್ಯತೆ ಇದೆ' ಎಂದು ತಿಳಿಸಿದರು.
ಚುನಾವಣಾ ಪ್ರಚಾರಕ್ಕೆ ವೇಗ ನೀಡಲು ನಾಳೆ ದಾವಣಗೆರೆಗೆ ಕಾಂಗ್ರೆಸ್ನ ಘಟಾನುಘಟಿ ನಾಯಕರು ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಜಮೀರ್ ಅಹ್ಮದ್, ಎಂ.ಬಿ. ಪಾಟೀಲ್ ಮತ್ತು ಸಂತೋಷ್ ಲಾಡ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ವಿಶೇಷವೆಂದರೆ, ದಾವಣಗೆರೆಯ ಕೆಲವು ಆರ್ಎಸ್ಎಸ್ ಪ್ರಮುಖ ನಾಯಕರು ಕೂಡ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿರುವುದು ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ಮಲ್ಲಿಕಾರ್ಜುನ ಹೇಳಿದರು.