ರೈತರಿಗೆ ಬೇಸಿಗೆಯಲ್ಲೂ 7 ಗಂಟೆ 3 ಫೇಸ್ ವಿದ್ಯುತ್: ಸಚಿವ ಕೆ.ಜೆ.ಜಾರ್ಜ್

Published : Mar 22, 2026, 05:37 PM IST
kj george

ಸಾರಾಂಶ

ರೈತರ ನೀರಾವರಿ ಪಂಪ್ ಸೆಟ್ ಗಳಿಗೆ ದಿನವಹಿ ಏಳು ಗಂಟೆಗಳ ಮೂರು ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಇದನ್ನು ಬೇಸಿಗೆ ಅವಧಿಯಲ್ಲೂ ಮುಂದುವರಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಮಂಡ್ಯ (ಮಾ.22): ರಾಜ್ಯದಲ್ಲಿ ಪ್ರಸ್ತುತ ರೈತರ ನೀರಾವರಿ ಪಂಪ್ ಸೆಟ್ ಗಳಿಗೆ ದಿನವಹಿ ಏಳು ಗಂಟೆಗಳ ಮೂರು ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಇದನ್ನು ಬೇಸಿಗೆ ಅವಧಿಯಲ್ಲೂ ಮುಂದುವರಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಬೇಸಿಗೆ ಅವಧಿಯಲ್ಲಿ ವಿದ್ಯುತ್ ಬಳಕೆ ಪ್ರಮಾಣವು ಗಣನೀಯವಾಗಿ ಏರಿಕೆ ಆಗುವುದರಿಂದ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆಯಲ್ಲಿ 7 ಗಂಟೆಗಳ ವಿದ್ಯುತ್ ಪೂರೈಸುವ ಕುರಿತು ಶಾಸಕ ಮಧು ಜಿ.ಮಾದೇಗೌಡ ಅವರು ವಿಧಾನ ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಈ ಮಾಹಿತಿ ನೀಡಿದ್ದಾರೆ.

ತಾಂತ್ರಿಕ ಸಾಧ್ಯತೆಯಿರುವ ಉಪ ಕೇಂದ್ರಗಳಿಂದ ಹೊರಹೊಮ್ಮುತ್ತಿರುವ ಕೃಷಿ ವಿದ್ಯುತ್ ಮಾರ್ಗಗಳಲ್ಲಿರುವ ರೈತರ ನೀರಾವರಿ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆಯಲ್ಲಿ 07 ಗಂಟೆಗಳಂತೆ ಹಾಗೂ ತಾಂತ್ರಿಕ ಕಾರ್ಯಸಾಧ್ಯವಿಲ್ಲದ ಕೃಷಿ ವಿದ್ಯುತ್ ಮಾರ್ಗಗಳಲ್ಲಿರುವ ರೈತರ ನೀರಾವರಿ ಪಂಪ್ ಸೆಟ್ ಗಳಿಗೆ ಬ್ಯಾಚ್ ಗಳಲ್ಲಿ ಒಟ್ಟು 07 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಸುಮಾರು 35.96 ಲಕ್ಷ ಕೃಷಿ ನೀರಾವರಿ ಪಂಪ್ ಸೆಟ್ ಗಳಿವೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್ 97,334 ಮಿಲಿಯನ್ ಯುನಿಟ್ (ಅಂದಾಜು) ಗಳಲ್ಲಿ ಐ.ಸಿ.ಸೆಟ್ಟು ಸ್ಥಾವರಗಳಿಗೆ 25,760 ಮಿಲಿಯನ್ ಯುನಿಟ್ (ಅಂದಾಜು) (ಶೇ 26.47) ಬಳಕೆಯಾಗುತ್ತಿದೆ ಎಂದಿದ್ದಾರೆ.

ಶೇ 5ರಷ್ಟು ಹೆಚ್ಚಳ ಸಾಧ್ಯತೆ: ರಾಜ್ಯದಲ್ಲಿ ಪ್ರಸಕ್ತ ವರ್ಷದ ಮಾರ್ಚ್ ನಿಂದ ಮೇ ತಿಂಗಳಾಂತ್ಯದವರೆಗೆ ಅಂದಾಜಿಸಲಾದ ಬೇಡಿಕೆ ಪ್ರಮಾಣವು 27,631 ಮಿ.ಯುನಿಟ್ ಇದ್ದು ಈ ಅವಧಿಯಲ್ಲಿ ಅಂದಾಜಿಸಲಾದ ದೈನಂದಿನದ ವಿದ್ಯುತ್ ಬೇಡಿಕೆ ಪ್ರಮಾಣ 300.34 ಮಿ.ಯುನಿಟ್ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬೇಡಿಕೆ ಪ್ರಮಾಣ ಒಟ್ಟು 26,468 ಮಿ.ಯುನಿಟ್ ಇದ್ದು ಈ ಅವಧಿಯಲ್ಲಿ ದೈನಂದಿನದ ವಿದ್ಯುತ್ ಬೇಡಿಕೆ ಪ್ರಮಾಣ 287.70 ಮಿ.ಯುನಿಟ್ ಇತ್ತು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೇಡಿಕೆಯಲ್ಲಿ ಶೇ.4ರಿಂದ ಶೇ.5ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಮಾರ್ಚ್ ನಿಂದ ಮೇ ವರೆಗಿನ ಅವಧಿಯಲ್ಲಿ ರಾಜ್ಯವು ಮಾರ್ಚ್ 07ರಂದು 18,395 ಮೆಗಾವ್ಯಾಟ್ ಗರಿಷ್ಠ ಬೇಡಿಕೆಯನ್ನು ಪೂರೈಸಿತ್ತು. ಈ ವರ್ಷವು ಗರಿಷ್ಠ ಬೇಡಿಕೆ ಸುಮಾರು 19,000 ಮೆಗಾವ್ಯಾಟ್ ಗೆ ತಲುಪುವ ನಿರೀಕ್ಷೆ ಇದೆ ಎಂದು ವಿವರಿಸಿದ್ದಾರೆ.

ಉತ್ಪಾದನೆ ಶಕ್ತಿ ಕಡಿಮೆಯಾದಲ್ಲಿ ಖರೀದಿ

ರಾಜ್ಯದಲ್ಲಿ ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಸಲಾಗುತ್ತಿದೆ. ರಾಜ್ಯದ ಉತ್ಪಾದನಾ ಘಟಕಗಳಿಂದ ಉತ್ಪಾದನೆಯಾಗುವ ನಿಗದಿತ ಶಕ್ತಿಯು ಕಡಿಮೆಯಾದಲ್ಲಿ ಬ್ಯಾಂಕಿಂಗ್ ಸಿಸ್ಟಂ ನಲ್ಲಿ ಅಥವಾ ಮುಕ್ತ ಮಾರುಕಟ್ಟೆಯಲ್ಲಿ ವಿದ್ಯುತ್ ಅನ್ನು ಪಡೆದು ಬೇಡಿಕೆ ಪೂರೈಸಲಾಗುವುದು ಎಂದು ಭರವಸೆ ನೀಡಿದ್ದಾರೆ.

PREV
Read more Articles on
click me!

Recommended Stories

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ: ಕೇಂದ್ರ ಸಚಿವ ವಿ.ಸೋಮಣ್ಣ ವಿಶ್ವಾಸ
ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಕೇಸ್‌ಗೆ 'ಉಗಾಂಡಾ' ಟ್ವಿಸ್ಟ್: 50 ಕೆಜಿ ಗೋಲ್ಡ್ ಡೀಲಿಂಗ್‌ನಲ್ಲಿ ಯಾಮಾರಿದ್ದ ನಟಿ