
ದಾವಣಗೆರೆ (ಜು.11): ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ತೆಗೆದುಕೊಂಡಿದ್ದ ಸಾಲದ ಕಂತು ಸಮಯಕ್ಕೆ ಸಲ್ಲಿಸದಿದ್ದ ಕಾರಣಕ್ಕೆ, ಪತಿ ಹೆಂಡತಿಗೆ ಹಲ್ಲೆ ಮಾಡಿ ಮೂಗು ಕಚ್ಚಿ ಕತ್ತರಿಸಿದ ಭೀಕರ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಮಂಟರಘಟ್ಟ ಗ್ರಾಮದಲ್ಲಿ ನಡೆದಿದೆ. ಜುಲೈ 8 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಂಟರಘಟ್ಟ ಗ್ರಾಮದ ನಿವಾಸಿಗಳಾದ ವಿಜಯ್ ಮತ್ತು ವಿದ್ಯಾ ಎಂಬ ದಂಪತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿ ಸುಮಾರು 2 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲದ ಕಂತುಗಳನ್ನು ವಿದ್ಯಾ ಪ್ರತಿದಿನ ಕ್ರಮವಾಗಿ ತೀರಿಸುತ್ತಿದ್ದರು. ಆದರೆ ಕಳೆದ ತಿಂಗಳು ಎರಡು ವಾರದವರೆಗೆ ಕಂತು ಸರಿಯಾಗಿ ನೀಡಲಾಗಿರಲಿಲ್ಲ. ಈ ಬಗ್ಗೆ ಸಂಘದ ಸಿಬ್ಬಂದಿ ವಿಜಯ್ಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು.
ಸಂಘದ ಕಡೆಯಿಂದ ಕರೆ ಬಂದ ಕೂಡಲೇ ವಿಜಯ್ ಕೋಪಗೊಂಡು, ಪತ್ನಿ ವಿದ್ಯಾಳೊಂದಿಗೆ ಗಲಾಟೆ ಆರಂಭಿಸಿದ. ಗಲಾಟೆ ವಿಕೋಪಕ್ಕೆ ತಿರುಗಿ, ವಿಜಯ್ ತನ್ನ ಪತ್ನಿಯ ಮೂಗು ಹಲ್ಲಿನಿಂದ ಕಚ್ಚಿ ಭಾರೀ ಗಾಯ ಮಾಡಿದ್ದಾನೆ. ನಂತರ ಮೂಗು ಏನಾಗಿದೆ ಎಂದು ನೋಡಿದರೆ, ಸಂಪೂರ್ಣವಾಗಿ ತುಂಡಾಗಿ ಬಿದ್ದಿದೆ. ಈ ಘಟನೆಯ ನಂತರ ಪತ್ನಿ ವಿದ್ಯಾ ನೆರೆಮನೆಯವರ ಸಹಾಯದಿಂದ ತಕ್ಷಣವೇ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾದರು.
ಘಟನೆಯ ನಂತರ ವಿದ್ಯಾ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಿಜಯ್ ವಿರುದ್ಧ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ಕ್ರಮ ಕೈಗೊಂಡಿದ್ದಾರೆ.
ಈ ಘಟನೆ ಕುಟುಂಬದಲ್ಲಿ ಹಣಕಾಸು ವಿಚಾರ ಎಷ್ಟು ಗಂಭೀರ ಕಲಹಕ್ಕೆ ಕಾರಣವಾಗಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಮನೆಯ ಕಲಹ, ಆಕ್ರೋಶವನ್ನು ಹಿಡಿತದಲ್ಲಿ ಇಟ್ಟುಕೊಳ್ಳದಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇದು ಸಾಮಾಜಿಕವಾಗಿ ಆತಂಕಕಾರಿ ಬೆಳವಣಿಗೆಯಾಗಿದೆ. ಹಣಕಾಸು ವ್ಯವಹಾರ ಅಥವಾ ದಾಂಪತ್ಯ ಕಲಹಗಳನ್ನು ಗಂಭೀರವಾಗಿ ತೆಗೆದುಕೊಂಡು, ಹಿಂಸೆ ಅಥವಾ ಆಕ್ರಮಣದ ಮಾರ್ಗವನ್ನೇ ಆಯ್ಕೆ ಮಾಡುವುದು ಯಾವುದೇ ಪರಿಸ್ಥಿತಿಯಲ್ಲೂ ನ್ಯಾಯಸಮ್ಮತವಲ್ಲ. ಸಹನೆ, ಸಂವಾದ ಹಾಗೂ ಕಾನೂನಿನ ಮಾರ್ಗವೇ ಸಮಸ್ಯೆಗಳಿಗೆ ಪರಿಹಾರ.