Davanagere: ಅಗಲಿದ ಪ್ರೀತಿಯ ಮಾಲೀಕನ ಸಮಾಧಿ ಮೇಲೆ ಮಲಗುವ 'ಡಯನಾ' ಶ್ವಾನ

By Govindaraj SFirst Published Jun 13, 2022, 10:42 PM IST
Highlights

ರಾಜ್ಯದಲ್ಲಿ ತೆರೆಕಂಡಿರುವ ಚಾರ್ಲಿ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಶ್ವಾನ ಪ್ರಿಯರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಒಂದೊಂದು ನಾಯಿ ಹಿಂದೆಯು ಒಂದೊಂದು ಕತೆ ಇರುತ್ತದೆ ಎಂಬುದಕ್ಕೆ ದಾವಣಗೆರೆ ಡಯಾನಾ ಶ್ವಾನ ಸಾಕ್ಷಿಯಾಗಿದೆ. 

ವರದಿ: ವರದರಾಜ್, ದಾವಣಗೆರೆ 

ದಾವಣಗೆರೆ (ಜೂ.13): ರಾಜ್ಯದಲ್ಲಿ ತೆರೆಕಂಡಿರುವ 777 ಚಾರ್ಲಿ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಶ್ವಾನ ಪ್ರಿಯರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಒಂದೊಂದು ನಾಯಿ ಹಿಂದೆಯು ಒಂದೊಂದು ಕತೆ ಇರುತ್ತದೆ ಎಂಬುದಕ್ಕೆ ದಾವಣಗೆರೆ ಡಯಾನಾ ಶ್ವಾನ ಸಾಕ್ಷಿಯಾಗಿದೆ. ಈಗಲು ಮೃತಪಟ್ಟಿರುವ ತನ್ನ ಮಾಲೀಕನ ಸಮಾಧಿ ಬಳಿ ಕೂರುವ ನಾಯಿ ಡಯನಾ ಕತೆ ಬಲು ರೋಚಕವಾಗಿದೆ. ಭಾನುವಾರ ದಾವಣಗೆರೆ ಗೀತಾಂಜಲಿ ಥಿಯೇಟರ್ ಬಳಿ ನಾಯಿಯೊಂದಿಗೆ ಚಾರ್ಲಿ ಸಿನಿಮಾ ನೋಡಲು ಬಿಡಿ ಎಂದು ಮಾಲೀಕ ಪ್ರತಿಭಟನೆ ನಡೆಸಿದ ಸುದ್ದಿ ರಾಜ್ಯದಲ್ಲಿ ಸದ್ದು ಮಾಡಿದ್ದು, ಶ್ವಾನ ಕರೆದುಕೊಂಡು ಹೋಗಲು ನನಗೆ ಅವಕಾಶ ಕೊಡಿ ಎಂದು ಕೆಂಚ ಎಂಬ ನಾಯಿ ಮಾಲೀಕ ಥಿಯೇಟರ್ ಬಳಿ ಒಂದು ಗಂಟೆ ಕೂತಿದ್ದ. ಆ ಡಯಾನಾ ಶ್ವಾನವನ್ನು ಕರೆದುಕೊಂಡು ಹೋಗಲು ಒಂದು ಇಂಟಿರೆಸ್ಟಿಂಗ್ ಕತೆ ಇದೆ. 

ಸಮಾಧಿ ಮೇಲೆ ಮಲಗಿ ಕಂಬನಿ ಮಿಡಿಯುವ ನಾಯಿ: ದಾವಣಗೆರೆ ನಗರದ ಕೆಟಿಜೆ ನಗರದಲ್ಲಿರುವ ಅರುಣ್ ಕುಮಾರ್ ಹಾಗೂ  ಗೌರಮ್ಮ ದಂಪತಿಯ ಪುತ್ರ ಶಿವಶಂಕರ್ ಮತ್ತು ಶ್ವಾನ ಪ್ರಿಯ. ಅವನು 13 ವರ್ಷದವನಿದ್ದಾಗ ಒಂದು ನಾಯಿ ತರಬೇಕೆಂದು ಆಸೆಪಟ್ಟ. ಅದರಂತೆ ರಾಟ್ ವ್ಹೀಲರ್ ನಾಯಿಯನ್ನು ತಂದೆವು. ಆ ಡಯಾನಾ ನಾಯಿಯನ್ನು ತಂದ ಎರಡೇ ತಿಂಗಳಿಗೆ ಶಿವಶಂಕರ್ ಅನಾರೋಗ್ಯದಿಂದ ಸಾವನ್ನಪ್ಪಿದ. ಅವನ ಸಾವನ್ನಪ್ಪಿದ ನಂತರ ಊಟ ತಿಂಡಿ ಬಿಟ್ಟು ನಿತ್ರಾಣಗೊಂಡಿತು. ಕೊನೆಗೆ ಅದಕ್ಕೆ ಟ್ರಿಟ್ಮೆಂಟ್ ಮಾಡಿ ನಾಯಿ ಉಳಿಸಿಕೊಂಡೆವು. ಶಿವಶಂಕರ್ ಸಾವನ್ನಪ್ಪಿದ ನಂತರ ಹಾವೇರಿ ಜಿಲ್ಲೆ ಬೆಳಗುತ್ತಿ ಗ್ರಾಮದಲ್ಲಿ ಸಮಾಧಿ ಮಾಡಲಾಯಿತು. ನಂತರ ಸಮಾಧಿ  ಪೂಜೆಗೆ ಹೋದಾಗ ಅವನ ಸಮಾಧಿ ಮೇಲೆ ಡಯನಾ ಈಗಲು ಮಲಗಿ ಕಂಬನಿ ಮಿಡಿಯುತ್ತಾಳೆ‌. ಆ ಕಾರಣಕ್ಕಾಗಿ ಡಯಾನಾ ಈಗಲು ನನ್ನ ಮನೆ ಮಗ, ಮಗಳು ಎಲ್ಲಾ ಎಂದು ಪೋಷಕರು ಕಣ್ಣೀರು ಹಾಕುತ್ತಾರೆ.

Davanagere: 777 ಚಾರ್ಲಿ ವೀಕ್ಷಣೆಗೆ ಡಯನಾಗೆ ಸಿಗಲಿಲ್ಲ ಅನುಮತಿ: ಪ್ರತಿಭಟಿಸಿದ ಮಾಲೀಕ

ಪ್ಲೀಸ್ ಒಂದು ಬಾರಿ ಸಿನಿಮಾ ನೋಡಲು ಅವಕಾಶ ಕೊಡಿ ಎಂದು ಕಣ್ಣೀರು ಹಾಕಿದ ತಾಯಿ: ಮೃತ ಬಾಲಕ ಶಿವಶಂಕರ್ ನ ಸಮಾಧಿ ಬಳಿ ಹೋದ್ರೆ ಡಯಾನಾ ಈಗಲು ಸಮಾಧಿ ಮೇಲೆ ಏರಿ ಮಲಗುತ್ತದೆ. ನನ್ನ ಮಗನಿಗೆ ಅವನ ಸಾವಿನ ಬಗ್ಗೆ ಗೊತ್ತಿತ್ತೋ ಏನೋ ಅದೇ ಕಾರಣಕ್ಕೆ ಮನೆ ಬರಡಾಗದಿರಲಿ ಎಂದು ಶ್ವಾನ ಬಿಟ್ಟು ಹೋಗಿದ್ದಾನೆ. ಅದನ್ನು ಶಿವಶಂಕರ್ ತರ ಎಂದು ಅದರ ಹುಟ್ಟುಹಬ್ಬ ಆಚರಿಸುತ್ತೇವೆ. ನಾವು ತಿನ್ನುವ ತಿಂಡಿ ತಿನಿಸುಗಳನ್ನು ಅದಕ್ಕೆ ಕೊಡುತ್ತೇವೆ. ಅದು ನಮ್ಮ ಮನೆ‌ ಸದಸ್ಯ ಕೂಡ. ಆ ಕಾರಣಕ್ಕಾಗಿ ನಾವು ಥಿಯೇಟರ್ ಗೆ ಸಿನಿಮಾ ನೋಡಲು ಮೂರು ಟಿಕೇಟ್ ತೆಗೆಸಿ ಚಾರ್ಲಿ 777 ಸಿನಿಮಾ ನೋಡಲು ಕರೆದುಕೊಂಡು ಹೋದೆವು‌. ಆದ್ರೆ ಥಿಯೇಟರ್ ಮಾಲೀಕರು ಅವಕಾಶ ಕಲ್ಪಿಸುತ್ತಿಲ್ಲ. ಅದು ನಾಯಿ ಅಲ್ಲ ನನ್ನ ಮಗ ಶಿವಶಂಕರ್ ತರ ಪ್ಲೀಸ್ ದಯವಿಟ್ಟು ಸಿನಿಮಾ ನೋಡಲು ಅವಕಾಶ ಕೊಡಿ ಎಂದು ತಾಯಿ ಗೌರಮ್ಮ ದಾವಣಗೆರೆ ಜಿಲ್ಲಾಧಿಕಾರಿಯಲ್ಲಿ ಮನವಿ ಮಾಡಿದ್ದಾರೆ.

ದಾವಣಗೆರೆಯಲ್ಲಿ ಫಲವತ್ತಾದ ಮಣ್ಣಿನ ಮಾರಾಟ ಭರಾಟೆ ಜೋರು

ತಮ್ಮ ಮುದ್ದಿನ ನಾಯಿ ಜೊತೆ ಚಾರ್ಲಿ 777  ನೋಡಲು ಶ್ವಾನ ಪ್ರಿಯರೆಲ್ಲಾ ಡಿಸಿಗೆ ಮನವಿ ಮಾಡುತ್ತೇವೆ.‌ ಕನಿಷ್ಠ 50 ನಾಯಿ ಪೋಷಕರನ್ನು ಕರೆದುಕೊಂಡು ಹೋಗಿ ಮನವಿ ಮಾಡುತ್ತೇವೆ.  ಜಿಲ್ಲಾಧಿಕಾರಿಗಳು ಪರ್ಮಿಷನ್ ಕೊಡದಿದ್ದರೆ  ಬೆಂಗಳೂರಿಗೆ ಹೋಗಿ ಚಾರ್ಲಿ ಹಾಗೂ ರಕ್ಷಿತ್ ಶೆಟ್ಟಿ ಜೊತೆಗೆ ಸಿನಿಮಾ ನೋಡಲು ಪ್ಲಾನ್ ಹಾಕಿಕೊಂಡಿದ್ದೇವೆ ಎಂದು ಡಯನಾ ಮಾಲೀಕರು ತಿಳಿಸಿದ್ದಾರೆ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ ರಿಯಲ್ ಲೈಫ್‌ನಲ್ಲಿ ಕೂಡ ಚಾರ್ಲಿ ರೀತಿ ನಾಯಿಗಳು ಇರ್ತಾವೆ ಎನ್ನುವುದಕ್ಕೆ ಡಯಾನಾಳೇ ಸಾಕ್ಷಿಯಾಗಿದೆ.

click me!