ಉಳ್ಳಾಲದ ದಾಹ ತೀರಿಸುವ ದರ್ಗಾ ಬಾವಿ: ಸರ್ಮಧರ್ಮದವರಿಗೂ ನೀರು ಪೂರೈಕೆ!

By Kannadaprabha NewsFirst Published Jun 9, 2023, 5:46 AM IST
Highlights

ಸರ್ವಧರ್ಮದವರು ಆರಾಧಿಸಿಕೊಂಡು ಗೌರವಿಸುವ ಉಳ್ಳಾಲದ ಇತಿಹಾಸ ಪ್ರಸಿದ್ಧ ಸೈಯ್ಯದ್‌ ಮದನಿ ದರ್ಗಾ ಸುತ್ತಮುತ್ತಲಿನ ಸರ್ವಧರ್ಮದವರಿಗೂ ನೀರಿನ ಬವಣೆ ತೀರಿಸುವ ಮೂಲಕ ಬರ ಪರಿಸ್ಥಿತಿಯಲ್ಲಿ ಸೌಹಾರ್ದತೆಯ ಸೇತುವಾಗಿ ಹಲವು ವರ್ಷಗಳಿಂದ ನೆಲೆನಿಂತಿದೆ. ಉಳ್ಳಾಲ ಭಾಗದ ನೀರಿನ ಸಮಸ್ಯೆ ಎದುರಿಸುವ ಹಿಂದೂ, ಕ್ರೈಸ್ತ, ಮುಸ್ಲಿಂ ಮನೆಗಳಿಗೆ ಸದಾ ಕಾಲ ನೀರಿನಿಂದ ತುಂಬಿರುವ ಈ ಬಾವಿ ಜೀವನಾಧಾರವಾಗಿದೆ.

ವಜ್ರ ಗುಜರನ್‌ ಮಾಡೂರು

ಉಳ್ಳಾಲ (ಜೂ.9) ಸರ್ವಧರ್ಮದವರು ಆರಾಧಿಸಿಕೊಂಡು ಗೌರವಿಸುವ ಉಳ್ಳಾಲದ ಇತಿಹಾಸ ಪ್ರಸಿದ್ಧ ಸೈಯ್ಯದ್‌ ಮದನಿ ದರ್ಗಾ ಸುತ್ತಮುತ್ತಲಿನ ಸರ್ವಧರ್ಮದವರಿಗೂ ನೀರಿನ ಬವಣೆ ತೀರಿಸುವ ಮೂಲಕ ಬರ ಪರಿಸ್ಥಿತಿಯಲ್ಲಿ ಸೌಹಾರ್ದತೆಯ ಸೇತುವಾಗಿ ಹಲವು ವರ್ಷಗಳಿಂದ ನೆಲೆನಿಂತಿದೆ. ಉಳ್ಳಾಲ ಭಾಗದ ನೀರಿನ ಸಮಸ್ಯೆ ಎದುರಿಸುವ ಹಿಂದೂ, ಕ್ರೈಸ್ತ, ಮುಸ್ಲಿಂ ಮನೆಗಳಿಗೆ ಸದಾ ಕಾಲ ನೀರಿನಿಂದ ತುಂಬಿರುವ ಈ ಬಾವಿ ಜೀವನಾಧಾರವಾಗಿದೆ.

ಉಳ್ಳಾಲದ ಇತಿಹಾಸ ಪ್ರಸಿದ್ಧ ಸೈಯ್ಯದ್‌ ಮದನಿ ದರ್ಗಾ ಆವರಣ ಹಾಗೂ ಮೇಲಂಗಡಿ ಎಂಬಲ್ಲಿರುವ ದರ್ಗಾದ ತೆರೆದ ಬಾವಿ ನೀರು ಉಳ್ಳಾಲ ನಗರಸಭೆ ವ್ಯಾಪ್ತಿಯ ಪ್ರದೇಶದ ನೀರಿನ ಬವಣೆ ತೀರಿಸುತ್ತಿದೆ.

ಸೋಮೇಶ್ವರ ನೈತಿಕ ಪೊಲೀಸ್ ಗಿರಿ ಬೆನ್ನಲ್ಲೇ ಇಂದು ಮಂಗಳೂರಿಗೆ ಗೃಹ ಸಚಿವ ಭೇಟಿ!

ಉಳ್ಳಾಲ ದರ್ಗಾ ಅಧೀನದ ಬಾವಿಯಿಂದ ನಗರಸಭಾ ಆಡಳಿತ ಲಾರಿ/ ಟ್ಯಾಂಕರ್‌ಗಳಲ್ಲಿ ನೀರು ಸಂಗ್ರಹಿಸಿ ಬೇರೆ ಬೇರೆ ಕಡೆಗೆ ಸರಬರಾಜು ಮಾಡುತ್ತಿದೆ. ದಿನನಿತ್ಯ 127 ಲಾರಿ- ಟ್ಯಾಂಕರ್‌ಗಳಲ್ಲಿ ಅಂದಾಜು 3 ಲಕ್ಷ ಲೀ.ನಷ್ಟುನೀರನ್ನು ಉಳ್ಳಾಲ ದರ್ಗಾ ಅಧೀನದ ಬಾವಿಯಿಂದ ಸಂಗ್ರಹಿಸಿ ಉಳ್ಳಾಲದ ಸುತ್ತಮುತ್ತಲಿನ ಪ್ರದೇಶಗಳಿಗೆ ಪೂರೈಕೆ ಮಾಡಲಾಗುತ್ತಿದೆ.

ಉಚಿತ ನೀರು: ಸ್ಥಳೀಯರು ಕೂಡಾ ಉಚಿತವಾಗಿ ನೀರು ಕೊಂಡೊಯ್ಯುತ್ತಾರೆ. ಬಾವಿ ಸಣ್ಣದಾಗಿದ್ದರೂ ತೆಗೆದಷ್ಟುನೀರಿನ ಒರತೆ ಬರುತ್ತಿರುವುದು ವಿಶೇಷ. ಎಂತಹ ಬೇಸಿಗೆಯಲ್ಲೂ ಈ ಬಾವಿಯ ನೀರು ಬತ್ತುವುದಿಲ್ಲ.

ನೀರು ಮೇಲೆತ್ತಲು ಮೋಟಾರಿಗೆ ಬಳಕೆಯಾಗುವ ವಿದ್ಯುತ್‌ ಬಿಲ್‌ ಕೂಡಾ ದರ್ಗಾ ಪಾವತಿಸುತ್ತದೆ. ಅಂಬಟ್ಟಡಿ, ಹಿದಾಯತ್‌ ನಗರ, ಕಲ್ಲಾಪು ಪಟ್ಲ, ಜೋಸೆಫ್‌ ನಗರ, ಬಬ್ಬುಕಟ್ಟೆ, ಹಿರಾನಗರ, ಜಮಾಲ್‌ ಕಂಪೌಂಡ್‌, ಚಂಬುಗುಡ್ಡೆ, ಪಿಲಾರ್‌, ಸಫ್ವಾನ್‌ ನಗರ, ಚೆಂಬುಗುಡ್ಡೆ ರೈಸ್‌ಮಿಲ್‌, ಮಸಣ ಗುಡ್ಡ, ಗಾಂಧಿನಗರ, ಕಾಪಿಕಾಡ್‌, ಉಮಾಮಹೇಶ್ವರಿ, ಅಳೇಕಲ ಕಕ್ಕೆತೋಟ, ಪಾಂಡೇಲ್‌ ಪಕ್ಕ, ಮಾರ್ಗತಲೆ, ಹೊæೖಗೆ, ಚೆಂಬುಗುಡ್ಡೆ ಚಚ್‌ರ್‍, 108 ಗಂಜಿಕೇಂದ್ರ, ಮುಕಚ್ಚೇರಿ, ತಲವು ಗುಡ್ಡೆ, ಒಂಬತ್ತುಕೆರೆ ಅನಿಲ ಕಂಪೌಂಡ್‌, ಅಬ್ಬಂಜರ, ಒಂಬತ್ತುಕೆರೆ ಸುವರ್ಣ ರಸ್ತೆ ಮುಂತಾದ ಪ್ರದೇಶಗಳಿಗೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗುತ್ತಿದೆ.

ಉಳ್ಳಾಲ ದರ್ಗಾ ಆವರಣದ ತೆರೆದ ಬಾವಿಯ ಮೂಲಕ ಸಾವಿರಾರು ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು ದಿನದ 24 ಗಂಟೆಯೂ ನೀರನ್ನು ನೀಡಲಾಗುತ್ತಿದೆ. ಪ್ರತಿ ವರ್ಷ ಕೂಡ ಬೇಸಿಗೆ ಸಂದರ್ಭದಲ್ಲಿ ಈ ಬಾವಿಯ ಮೂಲಕ ಉಳ್ಳಾಲ ಸುತ್ತ ಮುತ್ತದ ಪ್ರದೇಶಗಳಿಗೆ ನೀರನ್ನು ನೀಡಲಾಗುತ್ತಿದೆ. ಯಾವುದೇ ಜಾತಿ, ಧರ್ಮವನ್ನು ನೋಡದೇ ಸಮಾನತೆಯ ಆಧಾರದಲ್ಲಿ ನೀರನ್ನು ಕೊಡಲಾಗುತ್ತಿದೆ.

-ಹನೀಫ್‌ ಹಾಜಿ, ಅಧ್ಯಕ್ಷ, ಉಳ್ಳಾಲ ನಗರಸಭೆ

ಉಳ್ಳಾಲ ಪೊಲೀಸರ ಹಿಂದೂ ವಿರೋಧಿ ನೀತಿಗೆ ಸೂಕ್ತ ಉತ್ತರ: ಪುತ್ತಿಲ ಎಚ್ಚರಿಕೆ 

1996ರ ಕಾಲದಲ್ಲಿ ಇಡೀ ಸಮಾಜವೇ ಗೌರವಿಸಿದ್ದ ಅಂದಿನ ದರ್ಗಾ ಅಧ್ಯಕ್ಷ ಇಬ್ರಾಹಿಂ ಹಾಜಿ ಆರಂಭಿಸಿದ್ದ ಉಚಿತ ನೀರಿನ ಕೊಡುಗೆ ನನ್ನನ್ನು ನಾಯಕನನ್ನಾಗಿ ಮಾಡಿದೆ. ನನ್ನ ರೀತಿಯಲ್ಲಿ ಅನೇಕರು ಉಳ್ಳಾಲದಲ್ಲಿ ನಗರಸಭೆಯಲ್ಲಿ ಸದಸ್ಯರೂ ಆಗಿದ್ದಾರೆ. ಅಂದು ನೀರಿನ ವ್ಯವಸ್ಥೆ ಇಲ್ಲದ ಸಂದರ್ಭ ಖುದ್ದು ದರ್ಗಾದಿಂದಲೇ ಟ್ಯಾಂಕರ್‌ ಹೊರಡಿಸಿ ರಸ್ತೆಯಿಲ್ಲದ ಕಡೆಗಳಲ್ಲಿ ನೀರು ನೀಡಿ ಎಲ್ಲ ಧರ್ಮದವರಿಗೂ ಮಾದರಿಯಾಗಿದ್ದರು. ಈಗ ದರ್ಗಾ ಟ್ಯಾಂಕರ್‌ ಇಲ್ಲದಿರುವುದರಿಂದ ಜನಸಂಖ್ಯೆಯೂ ಹೆಚ್ಚಾಗಿರುವುದರಿಂದ ದರ್ಗಾ ನೀರು ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲೇ ಬವಣೆ ತೀರಿಸುತ್ತಿದೆ. ನೀರು ಮಾರಾಟದ ಸಂದರ್ಭದಲ್ಲಿಯೂ ಉಚಿತವಾಗಿ ನೀರು ಕೊಡುವ ಮನಸ್ಸು ಶ್ರೇಷ್ಠವಾದುದು.

-ದಿನೇಶ್‌ ಕುಂಪಲ, ಕ್ಷೇತ್ರ ಅಧ್ಯಕ್ಷ ಭಾರತೀಯ ತೀಯ ಸಮಾಜ ಉಳ್ಳಾಲ ತಾಲೂಕು

click me!