ಚಿಂಚೋಳಿ: ಕಿರಾಣಿ ಅಂಗಡಿಯಲ್ಲಿ ಸಿಲಿಂಡರ್‌ ಸ್ಫೋಟ, ತಪ್ಪಿದ ಭಾರೀ ಅನಾಹುತ..!

By Kannadaprabha NewsFirst Published Aug 27, 2020, 2:53 PM IST
Highlights

ಕಿರಾಣಿ ಅಂಗಡಿಯಲ್ಲಿ ಸಿಲಿಂಡರ್‌ ಸ್ಫೋಟ, ಸುಟ್ಟು ಕರಕಲಾದ ಕಿರಾಣಿ ಸಾಮಾನುಗಳು| ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹೊಸಳ್ಳಿ(ಹೆಚ್‌)ಕ್ರಾಸ್‌ನಲ್ಲಿ ನಡೆದ ಘಟನೆ| ಅದೃಷ್ಟವಷಾತ್‌ ಯಾವುದೇ ಪ್ರಾಣಹಾನಿ ಸಂಭಿಸಿಲ್ಲ| 

ಚಿಂಚೋಳಿ(ಆ.27): ತಾಲೂಕಿನ ಹೊಸಳ್ಳಿ(ಹೆಚ್‌) ಕ್ರಾಸಿನಲ್ಲಿರುವ ಕಿರಾಣಿ ಅಂಗಡಿಯಲ್ಲಿ ಬುಧವಾರ ಬೆಳಿಗ್ಗೆ ಸಿಲಿಂಡರ್‌ ಸೋರಿಕೆಯಾಗಿ ಸ್ಪೋಟಗೊಂಡಿದ್ದರಿಂದ ಕಿರಾಣಿ ಅಂಗಡಿಯಲ್ಲಿರುವ ಎಲ್ಲ ಸಾಮಾನುಗಳು ಸುಟ್ಟು ಕರಕಲಾಗಿವೆ. ಅಂದಾಜು 6 ಲಕ್ಷ ರುಪಾಯಿ ಮೌಲ್ಯದ ಸಾಮಾನುಗಳು ಸುಟ್ಟಿವೆ.

ಹೊಸಳ್ಳಿ ಗ್ರಾಮದ ದಶರಥ ಖತಲಪ್ಪನಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿದ್ದ ಸಿಲಿಂಡರ್‌ ಅನೀಲ ಸೋರಿಕೆಯಾಗಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ನೋಡಿ ಭಯಭೀತನಾಗಿ ಹೊರಗೆ ಓಡಿ ಬಂದ ತಕ್ಷಣ ಸಿಲಿಂಡರ್‌ ಸ್ಪೋಟಗೊಂಡಿದೆ. ಆದರೆ ಯಾವುದೇ ಜೀವ ಹಾನಿಯಾಗಿಲ್ಲ. ಅಂಗಡಿಯಲ್ಲಿಟ್ಟಿ ಎಲ್ಲ ಕಿರಾಣಿ ಸಾಮಾನುಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ.

ಜೇವರ್ಗಿ: ಕುಡಿದ ನಶೆಯಲ್ಲಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ

ದಶರಥ ಇದ್ದ ಎರಡು ಎಕರೆ ಜಮೀನು ಮಾರಾಟ ಮಾಡಿ ಹೊಸಳ್ಳಿ ಕ್ರಾಸಿನಲ್ಲಿ ಕಳೆದ ಎರಡು ತಿಂಗಳ ಹಿಂದೆ ಹೊಸದಾಗಿ ಕಿರಾಣಿ ಅಂಗಡಿ ಪ್ರಾರಂಭಿಸಿ ಜೀವನ ಸಾಗಿಸುತ್ತಿದ್ದರು. ಆದರೆ ಬುಧವಾರ ಇಡೀ ಕಿರಾಣಿ ಅಂಗಡಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಸುಟ್ಟು ಹೋಗಿದ್ದ ಅಂಗಡಿ ಮುಂದೆ ಅಸಹಾಯಕರಾಗಿ ಚಿಂತೆಯಲ್ಲಿ ತೊಡಗಿದ್ದಾರೆ.

ಸುದ್ದಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕೆ ಬರುವಷ್ಟರಲ್ಲಿಯೇ ಎಲ್ಲವೂ ಬೆಂಕಿಯಲ್ಲಿ ಸುಟ್ಟು ಹೋಗಿದ್ದವು. ಘಟನಾ ಸ್ಥಳಕ್ಕೆ ರಟಕಲ್‌ ಪೋಲಿಸ ಠಾಣೆ ಸಬ್‌ ಇನ್ಸಪೆಕ್ಟರ್‌ ಶಿವಶಂಕರ ಸುಬೇದಾರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

click me!