ಸರ್ಕಾರ ಇಷ್ಟೊಂದು ಕೀಳುಮಟ್ಟಕ್ಕೆ ಇಳಿದಿದ್ದು, ಬಡವರನ್ನು ನೋಯಿಸಬೇಡಿ, ನಿಮ್ಮ ಮಕ್ಕಳಿಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುವುದಿಲ್ಲ. ಹಳ್ಳಿಗಳಲ್ಲಿ ಬಡವರು ನರಳಾಡುತ್ತ ಸಾಯುತ್ತಿದ್ದಾರೆ. ಸರ್ಕಾರವು ಖಾಸಗಿ ಆಸ್ಪತ್ರೆಯ ಗುಲಾಮಾರಾಗಿದ್ದೇವೆ ಎಂದು ಹೇಳಲಿ ಎಂದು ಎಚ್ ಡಿ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.
ಹಾಸನ (ಏ.27): ಸರ್ಕಾರ ಏನಾದರೂ ಪಾಪರ್ ಬಿದ್ದಿದೆಯಾ?, ಹಣ ಇಲ್ಲ ಅಂದ್ರೆ ಹೇಳಿ ನಾವೇ ಬೀದಿಲಿ ತಟ್ಟೆಹಿಡಿದು ಹಣ ಎತ್ತಿ ಕೊಡ್ತೇವೆ ಎಂದು ಮಾಜಿ ಸಚಿವ, ಶಾಸಕ ಹೆಚ್.ಡಿ. ರೇವಣ್ಣ ವ್ಯಂಗ್ಯವಾಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರತಿದಿನ ಕೊರೋನಾ ಹೆಚ್ಚುತ್ತಿರುವುದರಿಂದ ಚಿಕಿತ್ಸೆಯ ಇಂಜೆಕ್ಷನ್ ಅನ್ನು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಉಚಿತವಾಗಿ ಕೊಡದೆ ಸರ್ಕಾರವು ಕಣ್ಣುಮುಚ್ಚಿ ಕುಳಿತಿದೆ. ಜಿಲ್ಲೆಯಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್ ಕೊರತೆಯಿತ್ತು. ನಾನೇ ಹೇಳಿ 480 ಇಂಜೆಕ್ಷನ್ ಖಾಸಗಿಯವರಿಗೆ ಕೊಡಿಸಿದ್ದೇನೆ. ಡ್ರಗ್ ಕಂಟ್ರೋಲರ್ ಫೋನ್ ರಿಸೀವ್ ಮಾಡ್ತಿಲ್ಲ. ಹಾಸನ ಜಿಲ್ಲೆಗೆ ತಕ್ಷಣದಲ್ಲಿ 2 ಸಾವಿರ ರೆಮ್ಡಿಸಿವಿರ್ ಇಂಜೆಕ್ಷನ್ ಕಳುಹಿಸಿ ಇದನ್ನು ಸಂಪೂರ್ಣ ಉಚಿತವಾಗಿ ಕೊಡಬೇಕು. ಆದರೆ ಇಂಜಕ್ಷನ್ ಮಾರಾಟ ಮಾಡುತ್ತಿದ್ದರೂ ಸರ್ಕಾರವು ಕಣ್ಣುಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದರು.
ಆತಂಕದ ನಡುವೆ ರಾಜ್ಯಕ್ಕೆ ಒಳ್ಳೆ ಸುದ್ದಿ : ಕಡಿಮೆ ಕೇಸ್ - ಗುಣಮುಖರ ಸಂಖ್ಯೆಯೂ ಏರಿಕೆ ...
ಸರ್ಕಾರ ಇಷ್ಟೊಂದು ಕೀಳುಮಟ್ಟಕ್ಕೆ ಇಳಿದಿದ್ದು, ಬಡವರನ್ನು ನೋಯಿಸಬೇಡಿ, ನಿಮ್ಮ ಮಕ್ಕಳಿಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುವುದಿಲ್ಲ. ಹಳ್ಳಿಗಳಲ್ಲಿ ಬಡವರು ನರಳಾಡುತ್ತ ಸಾಯುತ್ತಿದ್ದಾರೆ. ಸರ್ಕಾರವು ಖಾಸಗಿ ಆಸ್ಪತ್ರೆಯ ಗುಲಾಮಾರಾಗಿದ್ದೇವೆ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ? ಈ ಜಿಲ್ಲೆ ಲೂಟಿಕೋರರ ಕೈ ಸೇರಿದೆ. ನನ್ನ 21 ವರ್ಷದ ರಾಜಕೀಯದಲ್ಲಿ ಇಂತಹ ಕೆಟ್ಟಸರ್ಕಾರವನ್ನು ನೋಡಿರಲಿಲ್ಲ. ನಾಯಿಗಳು ಕಾಯುವ ರೀತಿ ಆಸ್ಪತ್ರೆ ಮುಂದೆ ಕೊರೋನಾ ಸೋಂಕಿತರು ನಿಂತಿರುತ್ತಾರೆ. ಕರೆ ಮಾಡಿದರೆ ಆರೋಗ್ಯ ಸಚಿವರು ಫೋನ್ ತೆಗೆಯುವುದಿಲ್ಲ. ಇದೇ ರೀತಿ ಮುಂದುವರಿದರೆ ಸರ್ಕಾರದ ವಿರುದ್ಧ ಪಕ್ಷದಿಂದ ಉಗ್ರ ಹೋರಾಟ ಮಾಡುವ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.