ದಂಪತಿ ಸಂಶಯಾಸ್ಪದ ಸಾವು| ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ನಡೆದ ಘಟನೆ| ಪತ್ನಿ ವಿಷ ಸೇವಿಸಿ ಸಾವು| ಪತಿ ಕಾಲುವೆಗೆ ಕಾರು ಸಮೇತ ಹಾರಿ ಆತ್ಮಹತ್ಯೆ| ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ ಮೃತ ಯುವತಿಯ ತಂದೆ|
ಗೋಕಾಕ[ಜ.31] : ದಂಪತಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ನಡೆದಿದೆ. ಪತ್ನಿ ವಿಷ ಸೇವಿಸಿ ಸಾವನ್ನಪ್ಪಿದ್ದರೆ, ಪತಿ ಘಟಪ್ರಭಾ ಎಡದಂಡೆ ಕಾಲುವೆಗೆ ಕಾರು ಸಮೇತ ಹಾರಿ ಆತ್ಮಹತ್ಯೆ ಮಡಿಕೊಂಡಿದ್ದಾನೆ.
ಜಯಲಕ್ಷ್ಮೀ ಲಕ್ಷ್ಮಣ ದ್ಯಾಮನ್ನವರ (25) ವಿವಾಹಿತ ಯುವತಿ ಬುಧವಾರ ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಚಿಕಿತ್ಸೆಗಾಗಿ ಗೋಕಾಕ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಂಜೆ 6 ಗಂಟೆ ಸುಮಾರಿಗೆ ಮೃತಪಟ್ಟಿದ್ದಾಳೆ. ಮೃತ ಯುವತಿಯ ತಂದೆ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ್ದಾನೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮೃತಳ ಪತಿ ಲಕ್ಷ್ಮಣ ಹಣಮಂತ ದ್ಯಾಮನ್ನವರ (28) ಬುಧವಾರ ಗೋಕಾಕ ತಾಲೂಕಿನ ಕೊಳವಿ ಗ್ರಾಮದ ಹತ್ತಿರವಿರುವ ಘಟಪ್ರಭಾ ಬಲದಂಡೆ ಕಾಲುವೆಗೆ ಕಾರು ಸಮೇತ ಹಾರಿದ್ದು ಗುರುವಾರ ಸಂಜೆ ಪೊಲೀಸರು ಆತನ ಶವ ಪತ್ತೆ ಹಚ್ಚಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರ ಸಹಕಾರದಿಂದ ಕಾರು ಮತ್ತು ಆತನ ಶವವನ್ನು ಹೊರತಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಲಕ್ಷ್ಮಣ ಪತ್ನಿಯ ಸಾವಿನ ಸುದ್ದಿ ತಿಳಿದ ತಕ್ಷಣ ಕಾಲುವೆಗೆ ಬಿದ್ದಿದ್ದಾನೆ ಅಥವಾ ಬೇರೆ ಕಾರಣ ಏನಿದೆ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ. ದಂಪತಿ ಈ ಸಾವು ನಿಗೂಢವಾಗಿದೆ. ಈ ಎರಡು ಪ್ರಕರಣಗಳು ಗೋಕಾಕ ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದಾಖಲಾಗಿವೆ.
ಇನ್ನು ಮೃತ ಲಕ್ಷ್ಮಣ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅಕ್ಕನ ಮಗ ಎಂದು ತಿಳಿದು ಬಂದಿದೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.