Council Election Karnataka: ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದ ಸಮೀಕ್ಷೆ

By Kannadaprabha NewsFirst Published Dec 13, 2021, 2:21 PM IST
Highlights
  •  ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಯಲ್ಲಿ ತುದಿಗಾಲ ಮೇಲೆ ನಿಲ್ಲಿಸಿರುವ ವಿಧಾನ ಪರಿಷತ್ತು ಚುನಾವಣೆಯ ಫಲಿತಾಂಶ 
  •  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮತಗಟ್ಟೆವಾರು ಮಾಡಲಾಗಿರುವ ಸಮೀಕ್ಷೆ
  • ಮತಗಟ್ಟೆವಾರು ಮಾಡಲಾಗಿರುವ ಸಮೀಕ್ಷೆಯೊಂದು ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ.

  ಚಿಕ್ಕಬಳ್ಳಾಪುರ (ಡಿ.13): ಅವಿಭಜಿತ ಕೋಲಾರ -  ಚಿಕ್ಕಬಳ್ಳಾಪುರ (kolar -Chikkaballapura) ಜಿಲ್ಲೆಯ ಜನತೆಯಲ್ಲಿ ತುದಿಗಾಲ ಮೇಲೆ ನಿಲ್ಲಿಸಿರುವ ವಿಧಾನ ಪರಿಷತ್ತು ಚುನಾವಣೆಯ (MLC Election) ಫಲಿತಾಂಶ ಹೊರ ಬೀಳಲು ಕ್ಷಣಗಣನೆ ಆರಂಭವಾಗಿರುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿರುವ ಮತಗಟ್ಟೆವಾರು ಮಾಡಲಾಗಿರುವ ಸಮೀಕ್ಷೆಯೊಂದು ರಾಜಕೀಯ ಪಕ್ಷಗಳ (Political parties) ನಿದ್ದೆಗೆಡಿಸಿದೆ.  2015 ರ ಚುನಾವಣೆಯಂತೆ ಎರಡು ಜಿಲ್ಲೆಗಳಲ್ಲಿ ಈ ಬಾರಿಯು ಶೇ.99.96 ರಷ್ಟು ಮತದಾನ ದಾಖಲಾಗಿದ್ದು ರಾಜಕೀಯ ಪಕ್ಷಗಳಿಗೆ ಸಹಜವಾಗಿಯೆ ಮಂಗಳವಾರ ಪ್ರಕಟಗೊಳ್ಳುವ ಫಲಿತಾಂಶ 2023ರ ಸಾರ್ವತ್ರಿಕ ವಿಧಾನಸಭೆಗೆ ಸಿದ್ದಗೊಳ್ಳುತ್ತಿರುವ ಕಾಂಗ್ರೆಸ್ (Congress), ಜೆಡಿಎಸ್ (JDS), ಬಿಜೆಪಿ (BJP) ಸೇರಿ ಮೂರು ರಾಜಕೀಯ ಪಕ್ಷಗಳಿಗೆ ಸಮಿಪೈನಲ್ ಎಂದೇ ಭಾವಿಸಿರುವುದರಿಂದ ಫಲಿತಾಂಶ ಪಕ್ಷಗಳ ಹಣೆ ಬರಹ ನಿರ್ಧರಿಸಲಿವೆ. 

14ರಂದು ಕೋಲಾರದಲ್ಲಿ ಮತ ಎಣಿಕೆ: ಬರುವ ಮಂಗಳವಾರ ಕೋಲಾರದಲ್ಲಿ ಮತ ಎಣಿಕೆ ನಡೆಯಲಿದೆ. ಆದರೆ ಮತದಾನ ನಡೆದ ದಿನದಂದು ಕೆಲವರು ಮತಗಟ್ಟೆವಾರು ನಡೆಸಿರುವ ಪಕ್ಷಗಳ ಮತಗಳಿಕೆಯನ್ನು ಅಂದಾಜಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿರುವ ಸಮೀಕ್ಷೆಗಳು ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿದ್ದು ಸೋಲು, ಗೆಲುವು ಬರೀ 300, 500 ಒಳಗೆ ನಿರ್ಧರವಾಗಲಿದೆ. 

ಜೊತೆಗೆ ಕಾಂಗ್ರೆಸ್, ಬಿಜೆಪಿ ಮಧ್ಯೆಗೆ ಸೋಲು, ಗೆಲುವು ನಿರ್ಧಾರವಾಗಲಿದೆ ಎಂದು ಹೇಳಿದ್ದು ಕೆಲವು ಸಮೀಕ್ಷೆಗಳಲ್ಲಿ (Survey) ಕಾಂಗ್ರೆಸ್ ಗೆಲುವು ಅಂತ ಹೇಳಿದರೆ ಮತ್ತೆ ಕೆಲವರು ಬಿಜೆಪಿಗೆ ಗೆಲುವು ಎಂದು ಹೇಳಿರುವುದು ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಮತದಾನ ದಿನದಂದು ಪ್ರತಿ ತಾಲೂಕಿನಲ್ಲಿರುವ ಒಟ್ಟು ಮತದಾರರು, ಪಕ್ಷವಾರು ಗಳಿಸುವ ಮತಗಳನ್ನು ಕ್ರೂಢೀಕರಿಸಿ ಸಮೀಕ್ಷೆಗಳಲ್ಲಿ ತಮ್ಮ ರಾಜಕೀಯ ವಿಶ್ಲೇಷಣೆಯೊಂದಿಗೆ ಸೋಲು, ಗೆಲುವಿನ ಬಗ್ಗೆ ಹೇಳಿದ್ದು ಈಗ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವಿಧಾನ ಪರಿಷತ್ತು ಚುನಾವಣೆ ಫಲಿತಾಂಶದ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. 

ರಾಜಕೀಯ ಪಕ್ಷಗಳ ಬೆಂಬಲಿಗರು ಕೂಡ ನಮ್ಮದೇ ಪಕ್ಷದ ಗೆಲುವು ಎನ್ನುವ ರೀತಿಯಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಸಹಜವಾಗಿಯೆ ಜಿಲ್ಲೆಯ ಜನತೆಯನ್ನು ವಿಧಾನ ಪರಿಷತ್ತು ಚುನಾವಣೆ (Election) ಫಲಿತಾಂಶ ತುದಿಗಾಲಲ್ಲಿ ನಿಲ್ಲಿಸಿದೆ.  

ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ನಡುಕ :   ಸ್ಥಳೀಯ ಸಂಸ್ಥೆಗಳಿಂದ ಶುಕ್ರವಾರ ವಿಧಾನ ಪರಿಷತ್‌ಗೆ (MLC Election) ಕೋಲಾರ - ಚಿಕ್ಕಬಳ್ಳಾಪುರ (Kolar - Chikkaballapura ) ಜಿಲ್ಲೆಗಳಿಂದ ನಡೆದ ಚುನಾವಣೆಯಲ್ಲಿ (Election) ಮತ ಚಲಾವಣೆ ಮಾಡಿರುವ ಮತದಾರರು ಬಾಯಿ ಬಿಡದೇ ಇರುವುದರಿಂದ ಅಭ್ಯರ್ಥಿಗಳಲ್ಲಿ ಆತಂಕ ಉಂಟಾಗಿದೆ. ಯಾವುದೇ ಸಾರ್ವತ್ರಿಕ ಚುನಾವಣೆ ನಡೆದ ಒಂದೆರಡು ದಿನಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಗೆಲುವಿಗಾಗಿ ಬಾಜಿಗಳ ಭರಾಟೆ ಇರುತ್ತಿತ್ತು. ಆದರೆ ಈ ಚುನಾವಣೆಯಲ್ಲಿ ಮತದಾನ ಮುಗಿದು ಎರಡು ದಿನ ಕಳೆದರೂ ಯಾವುದೇ ಅಭ್ಯರ್ಥಿಯ ಪರ ಬಾಜಿ ಕಟ್ಟಲು ಯಾರೂ ಮುಂದೆ ಬರುತ್ತಿಲ್ಲ. ಇದೂ ಸಹ ಅಭ್ಯರ್ಥಿಗಳನ್ನು ಮತ್ತಷ್ಟು ಕಂಗೆಡಿಸಿದೆ.

ಬಿಜೆಪಿ (BJP) ಮತ್ತು ಜೆಡಿಎಸ್‌ (JDS) ಹೊಂದಾಣಿಕೆಯಾಗುತ್ತದೆ ಎಂದು ಕೊನೆ ಗಳಿಗೆಯ ತನಕ ನಿರೀಕ್ಷಿಸಲಾಗಿತ್ತು. ಆದರೆ ಜೆಡಿಎಸ್‌  ಚುನಾವಣಾ ಕಣಕ್ಕೆ ಧುಮುಕಿ ತಮ್ಮ ಪಕ್ಷದ ಮತದಾರರನ್ನು ಭದ್ರಪಡಿಸಿ ಕೊಂಡಿತಲ್ಲದೆ ಕಾಂಗ್ರೆಸ್‌ (congress) ಒಳ ಏಟಿನ ಮತಗಳನ್ನು ಸೆಳೆಯಲು ಮುಂದಾಗಿದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿಗೆ ನಡುಕ ಶುರುವಾಗಿದೆ. ಏನೇ ಆದರೂ ಚಿಂತಾಮಣಿ (Chintamani) ಮಾಜಿ ಶಾಸಕ ಹಾಗು ಮುಳಬಾಗಲಿನ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ (Kottur Manjunath) ಕಾಂಗ್ರೆಸ್‌ ಅಭ್ಯರ್ಥಿ ಪರ ಕೆಲಸ ಮಾಡಿರುವುದರಿಂದ ಹಾಗು ಬಿಜೆಪಿ ಪ್ರಬಲ ಪೈಪೋಟಿ ನಡೆಸಿರುವುದರಿಂದ ನಮ್ಮ ಗೆಲವು ನಿಶ್ಚಿತ ಎನ್ನುತ್ತಿದ್ದಾರೆ.

ಬಿಜೆಪಿಗೆ ಜೆಡಿಎಸ್‌ ಮತ ಸಿಗಲೇ ಇಲ್ಲ : ಎರಡೂ ಜಿಲ್ಲೆಗಳಲ್ಲಿ ಮತದಾರರಲ್ಲಿ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ (BJP) ಅಬ್ಬರದ ಪ್ರಚಾರದೊಂದಿಗೆ ಒಂದು ವಾರದಿಂದಲೇ ಮತದಾರರಿಗೆ ಎಲ್ಲಾ ಆಸೆ ಅಮಿಷಗಳನ್ನು ಒಡ್ಡಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ (Congress) ಮತಗಳನ್ನು ತಮ್ಮ ಅಭ್ಯರ್ಥಿಗೆ ಹಾಕಿಸಲು ಎಲ್ಲಾ ರೀತಿಯ ಕಸರತ್ತುಗಳನ್ನು ಮಾಡಿತು. ಜೆಡಿಎಸ್‌ ಮತಗಳು ನಮಗೆ ಬರುತ್ತವೆ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿ ಕೊನೆ ಗಳಿಗೆಯಲ್ಲಿ ಜೆಡಿಎಸ್‌ ಪ್ರಚಾರದ ಅಖಾಡಕ್ಕೆ ಧುಮುಕಿ ಎಲ್ಲರಿಗಿಂತಲೂ ಒಂದು ಕೈ ಮುಂದೆ ಎನ್ನುವ ರೀತಿಯಲ್ಲಿ ಮತದಾರರನ್ನು ನೋಡಿಕೊಂಡ ಪರಿಣಾಮವಾಗಿ ಮೂರೂ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಮತದಾರ ಸ್ಪಷ್ಟ ನಿಲುವು ತಾಳಲಿಲ್ಲ.

ಮೂರೂ ಪಕ್ಷಗಳ ಅಭ್ಯರ್ಥಿಗಳ ಗೆಲುವು ಕಬ್ಬಿಣದ ಕಡಲೆಯಾಗಿದ್ದು, ಮತ ಎಣಿಕೆ (Counting) ಡಿ. 14 ರಂದು ನಡೆಯಲಿರುವುದರಿಂದ ಬಾಜು ಕಟ್ಟುವವರಿಗೆ ಒಂದು ದಿನ ಮಾತ್ರ ಬಾಕಿಯಿದೆ. ಆದರೆ ಮತದಾರರ ಸ್ವಷ್ಟ ನಿಲುವು ಸಿಗದೇ ಇರುವುದರಿಂದ ಬಾಜು ಕಟ್ಟುವವರು ಮುಂದೆ ಬರುತ್ತಿಲ್ಲ.

click me!