ಭ್ರಷ್ಟಾಚಾರದಿಂದ ಮುಕ್ತವಾದರೆ ಸಹಕಾರ ಕ್ಷೇತ್ರ ಪ್ರಗತಿ: ಸಂಸದ ಬಿ.ವೈ.ರಾಘವೇಂದ್ರ

By Kannadaprabha NewsFirst Published Aug 26, 2024, 11:43 PM IST
Highlights

ಸಹಕಾರ ಕ್ಷೇತ್ರ ಅತ್ಯಂತ ಬಲಿಷ್ಠವಾಗಿದೆ. ಆದರೆ ಕೆಲವರು ಅದನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿರುವುದರಿಂದ ಹಿನ್ನಡೆಯಾಗುತ್ತಿದೆ. ಸಹಕಾರಿ ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡಿದಾಗ ಮಾತ್ರ ಪ್ರಗತಿ ಸಾಧ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. 

ಶಿವಮೊಗ್ಗ (ಆ.26): ಸಹಕಾರ ಕ್ಷೇತ್ರ ಅತ್ಯಂತ ಬಲಿಷ್ಠವಾಗಿದೆ. ಆದರೆ ಕೆಲವರು ಅದನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿರುವುದರಿಂದ ಹಿನ್ನಡೆಯಾಗುತ್ತಿದೆ. ಸಹಕಾರಿ ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡಿದಾಗ ಮಾತ್ರ ಪ್ರಗತಿ ಸಾಧ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ನಗರದ ದುರ್ಗಿಗುಡಿ ಕೋ ಆಪರೇಟಿವ್ ಸೊಸೈಟಿಯಿಂದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಲವರ ರಾಜಕಾರಣ ಪ್ರವೇಶಕ್ಕೆ ಸಹಕಾರಿ ಕ್ಷೇತ್ರವೂ ಮೆಟ್ಟಿ ಲಾಗುತ್ತಿದೆ. ಈ ರೀತಿ ಆದಾಗ ಸಹಕಾರಿ ಕ್ಷೇತ್ರ ಸೊರಗುತ್ತದೆ. ಹೀಗಾಗಿ ಅನೇಕ ಸಹಕಾರ ಸಂಘಗಳು, ಬ್ಯಾಂಕ್‌ಗಳು ನಷ್ಟ ಅನುಭವಿಸಿವೆ. ಬೆಳೆಸಿದ ಸಂಸ್ಥೆಗೆ ದ್ರೋಹ ಮಾಡಿದ ಯಾರನ್ನೇ ಆದರೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಹಕಾರ ಕ್ಷೇತ್ರವನ್ನು ಇನ್ನಷ್ಟು ಮುಂದೆ ಒಯ್ಯಲು ಪ್ರತ್ಯೇಕ ಇಲಾಖೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಈ ಮೂಲಕ ಶಕ್ತಿ ತುಂಬುವ ಕೆಲಸವೂ ಆಗಿದೆ. ಜನರ ದುಡ್ಡು ದುರ್ಬಳಕೆಯಾಗದಂತೆ ತಡೆಯಲು ಎಲ್ಲ ಕ್ರಮಗಳನ್ನು ಕೇಂದ್ರದಿಂದ ಕೈಗೊಳ್ಳಲಾಗುತ್ತಿದೆ. ಇದರಲ್ಲಿನ ಭ್ರಷ್ಟಾಚಾರ ಹೋದರೆ ಬಡವರಿಗೆ ಅನುಕೂಲವಾಗುತ್ತದೆ ಎಂದರು. ಸ್ವಾತಂತ್ರ್ಯ ಬಂದು ಕೆಲವೇ ತಿಂಗಳಲ್ಲಿ ಸ್ಥಾಪನೆಯಾದ ಈ ಸಂಘ ಇಂದು ವಜ್ರಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಸುದೀರ್ಘ ಯಶಸ್ವಿಯಾಗಿ ನಡೆದುಕೊಂಡು ಬರಲು ಹಿರಿಯರು ಹಾಕಿ ಕೊಟ್ಟ ಭದ್ರ ಬುನಾದಿ ಕಾರಣವಾಗಿದೆ. ಇದರ ಜತೆ ಸೊಸೈಟಿ ಎಲ್ಲರೂ ಸಹಕಾರ ನೀಡಿ ಸಾರ್ಥಕಗೊಳಿಸಿದ್ದಾರೆ ಎಂದು ಹೇಳಿದರು.

Latest Videos

ಯಾವುದೇ ಕ್ಷೇತ್ರವನ್ನು ಸಹಕಾರಿ ವಲಯ ಬಿಟ್ಟಿಲ್ಲ. ವೈದ್ಯಕೀಯ ಕ್ಷೇತ್ರ ಕೂಡ ಸಹಕಾರಿ ತತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಸಹಕಾರ ಚಳವಳಿಯ ತವರು ಶಿವಮೊಗ್ಗ ಎಂದರೆ ತಪ್ಪಾಗುವುದಿಲ್ಲ. ಹೀಗಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹಕಾರ ಬಲಗೊಳ್ಳಬೇಕಿದೆ ಎಂದರು ಆಶಿಸಿದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಸಹಕಾರ ಕ್ಷೇತ್ರ ಸರ್ಕಾರಿ ಹಿಡಿತದಿಂದ ಮುಕ್ತವಾದಾಗ ಮಾತ್ರ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯಗಲಿದೆ. ರಾಜಕೀಯ ಹಸ್ತಕ್ಷೇಪ ಇಲ್ಲಿ ಇರಬಾರದು. ಸಾಮಾನ್ಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇದನ್ನು ಬೆಳೆಸಿದರೆ ಎಲ್ಲರೂ ಕೂಡ ಆರ್ಥಿಕವಾಗಿ ಶಕ್ತರಾಗಬಹುದಾಗಿದೆ ಎಂದರು. 

ಒಳಮೀಸಲಾತಿ ನೀಡುವ ಬಗ್ಗೆ ಸದಾಶಿವ ಆಯೋಗ ರಚಿಸಿದ್ದು ಕಾಂಗ್ರೆಸ್ ಸರ್ಕಾರ: ಶಾಸಕ ಜಯಚಂದ್ರ

ಸೊಸೈಟಿ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಹಕಾರಿ ವಿ.ರಾಜು ಪ್ರಸ್ತಾವಿಕವಾಗಿ ಮಾತನಾಡಿ, ಅನೇಕ ಹಿರಿಯರು ಸಮಾಲೋಚನೆ ನಡೆಸಿ ಹುಟ್ಟು ಹಾಕಿದ ದುರ್ಗಿಗುಡಿ ಕೋ ಆಪರೇಟಿವ್ ಸೊಸೈಟಿ ಇಂದಿಗೂ ಸದೃಢವಾಗಿ ಮುನ್ನಡೆಯುತ್ತಿದೆ. ಪ್ರತಿನಿತ್ಯ ಸಣ್ಣ ಪುಟ್ಟ ವ್ಯವಹಾರ ನಡೆಸಿ ಜೀವನ ನಡೆಸುವವರಿಗೆ ಸಾಲ ನೀಡುತ್ತಿರುವುದು ಇದರ ಹೆಗ್ಗಳಿಕೆಯಾಗಿದೆ ಎಂದರು. ಸೊಸೈಟಿ ಅಧ್ಯಕ್ಷ ನರಸಿಂಹ ಗಂಧದ ಮನೆ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಬಲ್ಕಿಷ್ ಬಾನು, ಡಾ.ಧನಂಜಯ ಸರ್ಜಿ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಸಹಕಾರಿಗಳಾದ ಎಸ್.ಕೆ. ಮರಿಯಪ್ಪ, ಎಂ.ಕೆ.ಸುರೇಶ್ ಕುಮಾರ್, ಉಮಾಶಂಕರ ಉಪಾಧ್ಯಾಯ, ಎಸ್.ಪಿ.ಶೇಷಾದ್ರಿ, ಸೊಸೈಟಿ ನಿರ್ದೇಶಕರಾದ ಜಿ.ಚಂದ್ರಶೇಖರ್ ಕವಿತಾ ಸಾಗರ್,ಎನ್. ಉಮಾಪತಿ ಮತ್ತಿತರರು ಇದ್ದರು. ಇದೇ ಸಂದರ್ಭ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

click me!