ಗದಗ: ಮುಂದುವರಿದ ಕಾರ್ಯಾಚರಣೆ, ಪತ್ತೆಯಾಗದ ಚಿರತೆ

By Kannadaprabha NewsFirst Published Mar 4, 2021, 10:57 AM IST
Highlights

ಚಿರತೆ ಹುಡುಕಾಟಕ್ಕೆ ಡ್ರೋಣ್‌ ಕ್ಯಾಮೆರಾ ಬಳಕೆ| ಚಿರತೆಯಾಗಲಿ, ಚಿರತೆಯ ಹೆಜ್ಜೆ ಗುರುತಾಗಲಿ ಪತ್ತೆಯಾಗಿಲ್ಲ| ಡಿಎಫ್‌ಒ ಸೂರ್ಯಸೇನ್‌ ನೇತೃತ್ವದಲ್ಲಿ ಕಾರ್ಯಾಚರಣೆ| ಸಾರ್ವಜನಿಕರಲ್ಲಿ ತೀವ್ರ ಆತಂಕ| 

ಗದಗ(ಮಾ.04): ಗದಗ ಸಮೀಪದಲ್ಲಿ ಚಿರತೆ ಕಾಣಿಸಿಕೊಂಡ ವದಂತಿಗೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸಹ ಚಿರತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಡಿಎಫ್‌ಒ ಸೂರ್ಯಸೇನ್‌ ನೇತೃತ್ವದಲ್ಲಿ ಡ್ರೋಣ್‌ ಕ್ಯಾಮೆರಾ ಬಳಕೆ ಮಾಡಿ ಕಾರ್ಯಾಚರಣೆ ಮುಂದುವರಿದಿದ್ದು, ಸಂಜೆಯವರೆಗೂ ಚಿರತೆಯಾಗಲಿ, ಚಿರತೆಯ ಹೆಜ್ಜೆ ಗುರುತಾಗಲಿ ಪತ್ತೆಯಾಗಿಲ್ಲ.

ನಗರದ ಹೊಸ ಹುಡ್ಕೋ ಕಾಲನಿ ಭಾಗದಲ್ಲಿ ಮಂಗಳವಾರ ಬೆಳಗ್ಗೆ ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿ ಗದಗ-ಬೆಟಗೇರಿ ಅವಳಿ ನಗರವೆಲ್ಲ ಹಬ್ಬಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಾಗಿ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಆದರೆ ಮಂಗಳವಾರ ಸಂಜೆ ವರೆಗೂ ಚಿರತೆ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರು ಹಾಗೂ ಅರವಳಿಕೆ ತಜ್ಞರ ಸಹಯೋಗದಲ್ಲಿ ರಾತ್ರಿಯೂ ಪತ್ತೆ ಕಾರ್ಯ ಮುಂದುವರಿಸಿದ್ದರು. ಜತೆಗೆ ಬುಧವಾರವೂ ಚಿರತೆಗಾಗಿ ಹುಡುಕಾಟ ನಡೆಸಿದ್ದು, ರಾತ್ರಿಯ ವರೆಗೂ ಚಿರತೆ ಬಂದಿರುವ ಕುರಿತು ಯಾವುದೇ ಕುರುಹು ಸಹ ದೊರೆತಿಲ್ಲ.

ಗದಗದಲ್ಲಿ ಚಿರತೆ ಪ್ರತ್ಯಕ್ಷ ವದಂತಿ: ಹೆಚ್ಚಿದ ಆತಂಕ

ನಗರದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿ ಹಬ್ಬುತ್ತಿದ್ದಂತೆಯೇ ಆ ಭಾಗದ ಸಾರ್ವಜನಿಕರಲ್ಲಿ ತೀವ್ರ ಆತಂಕ ಮುಂದುವರಿದಿದ್ದು, ಆಚೆ ಓಡಾಡಲು ಭಯ ಪಡುತ್ತಿದ್ದಾರೆ. ಆದರೆ ಇದುವರೆಗೂ ಚಿರತೆಯ ಬಂದಿದೆಯಾ ಎಂಬುದರ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಏನೂ ಸ್ಪಷ್ಟನೆ ನೀಡುತ್ತಿಲ್ಲ.

ಆ ಭಾಗದ ಮಹಿಳೆಯೋರ್ವಳು ಚಿರತೆ ನೋಡಿರುವುದಾಗಿ ಖಚಿತವಾಗಿ ಹೇಳಿದ್ದು, ಇದರೊಟ್ಟಿಗೆ ನಾಲ್ಕಾರು ಜನ ನೋಡಿರುವುದಾಗಿ ಹೇಳುತ್ತಿದ್ದಾರೆ. ಈ ಕುರಿತು ಡ್ರೋಣ್‌ ಕ್ಯಾಮೆರಾ ಮೂಲಕ ಚಿರತೆಯ ಜಾಡಿನ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಇಲ್ಲಿಯವರೆಗೂ ಚಿರತೆಯ ಹೆಜ್ಜೆಯ ಗುರುತುಗಳು ಪತ್ತೆಯಾಗಿಲ್ಲ. ಆದರೆ ನಮ್ಮ ಇಲಾಖೆ ಮಾತ್ರ ಶೋಧ ಕಾರ್ಯವನ್ನು ಮುಂದುವರಿಸಿದೆ ಎಂದು ಡಿಎಫ್‌ಒ ಸೂರ್ಯಸೇನ್‌ ತಿಳಿಸಿದ್ದಾರೆ. 
 

click me!