Mysuru : ಸಾವಿರ ಎಕರೆಯಲ್ಲಿ ಹೊಸ ಬಡಾವಣೆಗಳ ನಿರ್ಮಾಣ

By Kannadaprabha NewsFirst Published Jan 10, 2023, 5:54 AM IST
Highlights

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಎಂಡಿಎ) ವತಿಯಿಂದ 1 ಸಾವಿರ ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆಗಳನ್ನು ನಿರ್ಮಿಸಿ, 12 ರಿಂದ 15 ಸಾವಿರ ನಿವೇಶನಗಳನ್ನು ಆಕಾಂಕ್ಷಿಗಳಿಗೆ ನೀಡಲಾಗುವುದು ಎಂದು ಎಂಡಿಎ ಅಧ್ಯಕ್ಷ ಯಶಸ್ವಿ ಎಸ್‌. ಸೋಮಶೇಖರ್‌ ತಿಳಿಸಿದರು.

 ಮೈಸೂರು  (ಜ. 10):  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಎಂಡಿಎ) ವತಿಯಿಂದ 1 ಸಾವಿರ ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆಗಳನ್ನು ನಿರ್ಮಿಸಿ, 12 ರಿಂದ 15 ಸಾವಿರ ನಿವೇಶನಗಳನ್ನು ಆಕಾಂಕ್ಷಿಗಳಿಗೆ ನೀಡಲಾಗುವುದು ಎಂದು ಎಂಡಿಎ ಅಧ್ಯಕ್ಷ ಯಶಸ್ವಿ ಎಸ್‌. ಸೋಮಶೇಖರ್‌ ತಿಳಿಸಿದರು.

ಮೈಸೂರು ತಾಲೂಕಿನ ಜಯಪುರ ಹೋಬಳಿಯ ದಾರಿಪುರ ಮತ್ತು ಇಲವಾಲ ಹೋಬಳಿಯ ಬೊಮ್ಮೆನಹಳ್ಳಿಯಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿನಿರ್ಮಿಸಲಾಗುವುದು. ರೈತರು ಕೂಡ ಜಮೀನು ನೀಡಲು ಒಪ್ಪಿದ್ದು, ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದರಿಗೂ ಅನುಕೂಲವಾಗಲಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದಾರಿಪುರದಲ್ಲಿ 250 ಎಕರೆ ಮತ್ತು ಬೊಮ್ಮೆನಹಳ್ಳಿಯಲ್ಲಿ 750 ಎಕರೆ ಪ್ರದೇಶದಲ್ಲಿ 50: 50 ಅನುಪಾತದಲ್ಲಿ ರೈತರ ಸಹಭಾಗಿತ್ವದಲ್ಲಿ ಬಡಾವಣೆಗಳನ್ನು ನಿರ್ಮಿಸಲಾಗುವುದು. 100 ಎಕರೆ ಜಮೀನು ಲಭ್ಯವಾಗುತ್ತಿದ್ದಂತೆ ಬಡಾವಣೆ ನಿರ್ಮಾಣ ಆರಂಭಿಸಲಾಗುವುದು. ಈ ನೂತನ ಬಡಾವಣೆಯಲ್ಲಿನ ನಿವೇಶನಗಳಿಗೆ ನಿವೇಶನಾಕಾಂಕ್ಷಿಗಳಿಂದ ಶೀಘ್ರವೇ ಅರ್ಜಿ ಆಹ್ವಾನಿಸಲಾಗುವುದು ಎಂದರು.

ಗುಂಪು ಮನೆ ಯೋಜನೆ:

ನಗರದಲ್ಲಿ ಹಲವೆಡೆ ಗುಂಪು ಮನೆ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಕೆಲವು ತಿದ್ದುಪಡಿ ಮೂಲಕ ಅನುಮೋದನೆಯಾಗಲಿದೆ. ಎಲ್ಲೆಡೆ ಮಾಡುವುದಕ್ಕಿಂತ ಒಂದೆರಡು ಕಡೆ ಮಾತ್ರ ಗುಂಪು ವಸತಿ ಯೋಜನೆ ಮಾಡುವಂತೆ ಹೇಳಿರುವುದರಿಂದ ವಿಜಯನಗರದ 4ನೇ ಹಂತದ ಬಸವನಹಳ್ಳಿಯಲ್ಲಿ ಮತ್ತು ದಟ್ಟಗಳ್ಳಿಯಲ್ಲಿ 952 ಮನೆಗಳನ್ನು ನಿರ್ಮಿಸಲು ಅನುಮೋದನೆ ಸಿಗುವ ನಿರೀಕ್ಷೆ ಇದ್ದು, ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.

312 ಸಿಎ ನಿವೇಶನ ಹಂಚಿಕೆ:

ಕಲೆ, ಸಾಹಿತ್ಯ, ಕ್ರೀಡೆ ಹೀಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಎಚ್‌ ಕೆಟಗರಿ ಕೋಟಾದಡಿ ನಿವೇಶನ ಮಂಜೂರು ಮಾಡಲು ತೀರ್ಮಾನಿಸಲಾಗಿದೆ. ಸಾಧಕರಿಗೆ ಹಂಚಿಕೆ ಮಾಡಲು ನಗರದ ವಿವಿಧ ಬಡಾವಣೆಗಳಲ್ಲಿ 180 ನಿವೇಶನಗಳನ್ನು ಗುರುತಿಸಲಾಗಿದೆ ಎಂದರು.

ಕಳೆದ 2021ರಲ್ಲಿ 312 ಸಿಎ ನಿವೇಶನಗಳ ಹಂಚಿಕೆಗೆ ಪ್ರಕಟಣೆ ಹೊರಡಿಸಲಾಗಿತ್ತು. ಆದರೆ, 220 ನಿವೇಶನಗಳಿಗೆ ಮಾತ್ರ 446 ಅರ್ಜಿಗಳು ಸ್ವೀಕೃತವಾಗಿದ್ದವು. ಈಗಾಗಲೇ 157 ಸಿಎ ನಿವೇಶನಗಳ ಹಂಚಿಕೆ ಶಿಫಾರಸು ಮಾಡಲಾಗಿದ್ದು, ಉಳಿದ 63 ನಿವೇಶಗಳ ಹಂಚಿಕೆಗಾಗಿ ಶಿಫಾರಸು ಮಾಡಲು ಉಪ ಸಮಿತಿಯ ಸಭೆ ನಡೆಸಲಾಗುವುದು. ನಂತರ ಸಾಮಾನ್ಯ ಸಭೆಯ ಒಪ್ಪಿಗೆ ಬಳಿಕ 220 ಸಿಎ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಬಾಕಿ ಇರುವ 92 ನಿವೇಶನಗಳಿಗೆ ಶೀಘ್ರವೇ ಅರ್ಜಿ ಆಹ್ವಾನಿಸಲಾಗುವುದು ಎಂದು ಅವರು ತಿಳಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನ:

ಹಂಚ್ಯಾ ಸಾತಗಳ್ಳಿ ಬಿ ವಲಯದಲ್ಲಿ 20 ಎಕರೆ 8 ಗುಂಟೆ ಪ್ರದೇಶವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂಗಾಗಿ ಗುರುತಿಸಲಾಗಿದ್ದು, . 18 ಕೋಟಿ ಗುತ್ತಿಗೆ ಆಧಾರದ ಮೇಲೆ ನೀಡಲು ತೀರ್ಮಾನಿಸಲಾಗಿದೆ. ಈ ಜಾಗದ ಮಧ್ಯೆ 2 ಎಕರೆ 20 ಗುಂಟೆ ಸರ್ಕಾರಿ ಕಟ್ಟೆಯಿದ್ದು ಕಂದಾಯ ಇಲಾಖೆಯಿಂದ ಕ್ಲಿಯರೆನ್ಸ್‌ ಬೇಕಾಗಿದೆ. ಈ ಸ್ಟೇಡಿಯಂ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿಗಳು ಸಹ ಆಸಕ್ತಿ ವಹಿಸಿರುವುದರಿಂದ ಶೀಘ್ರವೇ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ನಗರದ ಅಭಿವೃದ್ಧಿಯ ದೂರದೃಷ್ಟಿಯ ಬಗ್ಗೆ ಚರ್ಚಿಸಲು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ನೇತೃತ್ವದಲ್ಲಿ ವಿಷನ್‌ ಮೈಸೂರು ಹೆಸರಿನಲ್ಲಿ ತಂಡ ರಚಿಸಲಾಗಿದ್ದು, ತಂಡದಲ್ಲಿ ಪ್ರಜ್ಞಾವಂತ ವಿಷಯ ತಜ್ಞರು ಇರಲಿದ್ದಾರೆ. ನಗರದ ಅಭಿವೃದ್ಧಿಯ ಬಗ್ಗೆ ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ ಎಂಡಿಎಗೆ ಅಗತ್ಯ ಸಲಹೆ ಸೂಚನೆಗಳನ್ನು ಕೊಡಲಿದ್ದಾರೆ ಎಂದರು.

ನಗರ ಪಾಲಿಕೆಗೆ ಎಂಡಿಎಯಿಂದ ಬಹುಮಹಡಿ ಪಾರ್ಕಿಂಗ್‌ ಕಟ್ಟಡ ನಿರ್ಮಾಣಕ್ಕೆ ನಿವೇಶನ, ವಲಯ ಕಚೇರಿ 9ರ ಕಟ್ಟಡ ನಿರ್ಮಾಣಕ್ಕೆ ಜಾಗ, ಮುಕ್ತ ವಿವಿಯ ಕುಲಪತಿ ಸರ್ಕಾರಿ ನಿವಾಸ ನಿರ್ಮಿಸಲು ನಿವೇಶನ, ನಂದಿನಿ ಮಿಲ್‌್ಕ ಗ್ಯಾಲಕ್ಸಿ ಸ್ಥಾಪಿಸಲು ಜಾಗ ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಮೇಯರ್‌ ಶಿವಕುಮಾರ್‌, ಎಂಡಿಎ ಸದಸ್ಯರಾದ ಕೆ. ಮಾದೇಶ್‌, ಲಕ್ಷ್ಮೀದೇವಿ, ಜಿ. ಲಿಂಗಯ್ಯ, ಆಯುಕ್ತ ದಿನೇಶ್‌ಕುಮಾರ್‌, ಕಾರ್ಯದರ್ಶಿ ವೆಂಕಟರಾಜು ಇದ್ದರು.

ಎಂಡಿಎ ಪೀಠ ಸ್ಥಾಪನೆ

ಮೈಸೂರು ನಗರದ ಯೋಜನಾ ಬದ್ಧ ಬೆಳವಣಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೈಸೂರು ವಿವಿಯೊಂದಿಗೆ ಎಂಡಿಎ ಒಡಂಬಡಿಕೆ ಮಾಡಿಕೊಂಡಿದ್ದು, ಮೈಸೂರು ವಿವಿಯ ಸ್ಕೂಲ್‌ ಆಫ್‌ ಪ್ಲಾನಿಂಗ್‌ ಮತ್ತು ಆರ್ಕಿಟೆಕ್ಚರ್‌ ಸಂಸ್ಥೆಯಲ್ಲಿ ಎಂಡಿಎ ಪೀಠ ಸ್ಥಾಪಿಸಲಾಗುತ್ತಿದೆ. ಒಡಂಬಡಿಕೆಯಿಂದ ಮೈಸೂರು ನಗರದ ಯೋಜನಾಬದ್ಧ ಬೆಳವಣಿಗೆಗೆ ಪೂರಕವಾಗಿ ಬೇಕಾಗಿರುವ ಅಧ್ಯಯನ, ಮಾರ್ಗದರ್ಶನ, ಮಾಸ್ಟರ್‌ ಪ್ಲಾನ್‌ ಪ್ರಕ್ರಿಯೆ, ಟೌನ್‌ ಪ್ಲಾನಿಂಗ್‌ ಯೋಜನೆ, ಅಮೃತ್‌ ಯೋಜನೆಯ ಕಾರ್ಯತಂತ್ರಗಳನ್ನು ರೂಪಿಸಬಹುದು ಎಂದು ಎಂಡಿಎ ಅಧ್ಯಕ್ಷ ಯಶಸ್ವಿ ಎಸ್‌. ಸೋಮಶೇಖರ್‌ ತಿಳಿಸಿದರು.

click me!