'ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಭವಿಷ್ಯ'

By Kannadaprabha NewsFirst Published Feb 2, 2021, 2:29 PM IST
Highlights

ರಾಜ್ಯದಲ್ಲಿ ಸದ್ಯ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದು ಮತ್ತೆ ಕೈ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಇನ್ನೆರಡು ವರ್ಷದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು ಈಗಲೇ ಕೈ ನಾಯಕರಲ್ಲಿ ಭರವಸೆ ಹೆಚ್ಚಾಗಿದೆ. 

ಹಿರಿಯೂರು (ಫೆ.02):  2023 ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದು, ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮ ಹಾಗೂ ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಮಾಜಿ ಸಚಿವ ಡಿ.ಸುಧಾಕರ್‌ ಅಭಿಪ್ರಾಯಪಟ್ಟರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ತಾಲೂಕಿನ 33 ಗ್ರಾಪಂಗಳು ಹಾಗೂ ನಗರದ 31 ವಾರ್ಡ್‌ಗಳ ಬೂತ್‌ ಸಮಿತಿ ರಚನೆ ಮತ್ತು ಕಾರ್ಯಕರ್ತರೊಡನೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಪಕ್ಷಗಳ ದುರಾಡಳಿತಕ್ಕೆ ಜನ ಬೇಸತ್ತು ಹೋಗಿದ್ದು, ಮತ ಹಾಕಿ ಅಧಿಕಾರಕ್ಕೆ ತಂದ ಜನ ಈಗ ತಾವು ಪಶ್ಚಾತ್ಥಾಪ ಪಡುತ್ತಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ದುರಾಡಳಿತದ ವಿರುದ್ಧ ಜನಾದೇಶ ಹೊರಹೊಮ್ಮಲಿದೆ ಎಂದು ಹೇಳಿದರು.

ಸಿಎಂ ಬದಲಾವಣೆ ವಿಚಾರ : ಮುಂದಿನ ದಿನದಲ್ಲಿ ಎಲ್ಲಾ ಸರಿಯಾಗುತ್ತೆಂದ ಸವದಿ

ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಸಂಪುಟ ರಚನೆಯ ಕಸರತ್ತು, ಮುಖ್ಯಮಂತ್ರಿ ಬದಲಾವಣೆ ಸಮಸ್ಯೆಗಳಲ್ಲೇ ಸರ್ಕಾರ ಮುಳುಗಿ ಹೋಗಿದೆ. ಹೀಗಾಗಿ, ಜನರ ಸಮಸ್ಯೆಗೆ ಸ್ಪಂದಿಸುವ ತೃಣ ಮಾತ್ರದ ಕೆಲಸಗಳು ನಡೆಯುತ್ತಿಲ್ಲ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಧಾವಿಸಬೇಕಿದ್ದ ಸರ್ಕಾರ ಸಂಪೂರ್ಣ ಮುಗ್ಗರಿಸಿದೆ. ಅಲ್ಲದೆ, ಕೊರೋನಾ ಸೋಂಕನ್ನು ನೆಪ ಮಾಡಿಕೊಂಡು ಸಾವಿರಾರು ಕೋಟಿ ಹಣ ಲೂಟಿ ಹೊಡೆಯಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಎಲ್ಲದರ ಹಿನ್ನೆಲೆಯಲ್ಲಿ ರಾಜ್ಯದ ಜನ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ ಕೈ ಹಿಡಿಯಲಿದ್ದಾರೆ. ಅದಕ್ಕಾಗಿ ತಕ್ಕ ಚುನಾವಣಾ ಸಿದ್ಧತೆಗಳನ್ನು ಮಾಡಿಕೊಳ್ಳೇಬೇಕಿದೆ ಎಂದರು.

'ಯತ್ನಾಳ್​ ಸುಮ್ನೆ ಬುರುಡೆ ಬಿಡ್ತಾರೆ.. ಅವರ ಮಾತು ತೋಳ ಬಂತು ತೊಳ, ನಾಳೆ ಬಾ ಹಾಗೆ ಆಗಿದೆ' ...

2023ರಲ್ಲಿ ಹಿರಿಯೂರಲ್ಲೆ ಸ್ಪರ್ಧೆ, ಗೆಲುವು ಖಚಿತ:  ರಾಜಕೀಯ ಮರುಜನ್ಮ ನೀಡಿ ನನಗೆ ಮಂತ್ರಿಯಾಗುವ ಭಾಗ್ಯವನ್ನು ಕರುಣಿಸಿದ ಹಿರಿಯೂರಿನ ಜನರನ್ನು ಬಿಟ್ಟು ನಾನು ಎಲ್ಲೂ ಹೋಗಲಾರೆ. ನಾನು ಕ್ಷೇತ್ರ ತೊರೆಯುವುದಾಗಿ ಅಪಪ್ರಚಾರ ನಡೆಸಲಾಗುತ್ತಿದೆ. ಅದಕ್ಕೆ ತಾಲೂಕಿನ ಜನ ಹಾಗೂ ಕಾರ್ಯಕರ್ತರು ಕಿವಿಗೊಡಬೇಡಿ. 2023ರಲ್ಲಿ ಹಿರಿಯೂರಿನಿಂದಲೇ ಸ್ಪರ್ಧೆ ಮಾಡಲಿದ್ದು, ಜನರು 2008ರಿಂದ 2018ರವರೆಗೆ ನಾನು ಮಾಡಿದ ಸಾವಿರಾರು ಕೋಟಿ ಅಭಿವೃದ್ಧಿ ಕೆಲಸಗಳ ಬಗ್ಗೆಯೇ ಮಾತನಾಡುತ್ತಿದ್ದು, ಈ ಸಲ ಮತ್ತೆ ನನ್ನನ್ನು ಕೈ ಹಿಡಿಯುವ ತುಂಬು ಭರವಸೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರಸಭಾ ಸದಸ್ಯ ಅಜಯ್‌ಕುಮಾರ್‌ ಮಾತನಾಡಿ, ಪಕ್ಷದಲ್ಲಿ ಹಿತಶತ್ರುಗಳು ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರ ಹಿಡಿದು ರಾಜಕೀಯ ಲಾಭ ಮಾಡಿಕೊಳ್ಳಲು ಕಾಂಗ್ರೆಸ್‌ ಪಕ್ಷಕ್ಕೆ ಬಂದು ಮಾಜಿ ಸಚಿವರಿಗೆ ಮೋಸ ಮಾಡಿ ಹೋಗುವುದು ಒಂದು ಚಾಳಿಯಾಗಿಬಿಟ್ಟಿದೆ. ಯಾರು ಪಕ್ಷಕ್ಕೆ ನಿಜವಾದ ನಿಷ್ಠೆ ಹೊಂದಿದ್ದಾರೆ. ಯಾರು ಕೇವಲ ರಾಜಕೀಯ ಲಾಭಕ್ಕಾಗಿ ಬರುತ್ತಾರೆ ಎಂಬುದನ್ನ ನೋಡಿ ಪಕ್ಷದ ಬಾಗಿಲು ತೆರೆಯಬೇಕು ಇಲ್ಲವಾದಲ್ಲಿ ಇಲ್ಲಿ ಎಲ್ಲಾ ಅಧಿಕಾರ ಉಂಡು, ಪ್ರಯೋಜನಗಳನ್ನು ಪಡೆದು ಚುನಾವಣೆ ಬಂದಾಗ ಕೈಕೊಡುವವರೇ ಹೆಚ್ಚಾಗುತ್ತಾರೆ ಎಂದರು.

click me!