Karnataka Election : ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಶತಸಿದ್ಧ

By Kannadaprabha NewsFirst Published Dec 13, 2022, 6:22 AM IST
Highlights

ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ 9 ಜನ ಟಿಕೆಟ್‌ ಆಕಾಂಕ್ಷಿಗಳಿದ್ದೇವೆ. ಇದರಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಸಹಿತ ನಾವು ಒಗ್ಗಾಟ್ಟಾಗಿ ಚುನಾವಣೆ ಎದುರಿಸಲು ಸನ್ನದ್ಧರಾಗಿದ್ದೇವೆ. ಕಾರ್ಯಕರ್ತರು ಓಹಾಪೋಹಗಳಿಗೆ ಕಿವಿಗೊಡಬಾರದು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಮನವಿ ಮಾಡಿದರು.

  ತಾಳಿಕೋಟೆ (ಡಿ.13): ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ 9 ಜನ ಟಿಕೆಟ್‌ ಆಕಾಂಕ್ಷಿಗಳಿದ್ದೇವೆ. ಇದರಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಸಹಿತ ನಾವು ಒಗ್ಗಾಟ್ಟಾಗಿ ಚುನಾವಣೆ ಎದುರಿಸಲು ಸನ್ನದ್ಧರಾಗಿದ್ದೇವೆ. ಕಾರ್ಯಕರ್ತರು ಓಹಾಪೋಹಗಳಿಗೆ ಕಿವಿಗೊಡಬಾರದು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಹಿಪ್ಪರಗಿ ಮತ ಕ್ಷೇತ್ರ (Congress)  ಪಕ್ಷದ ಭದ್ರ ನೆಲೆಯಾಗಿದೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ. ಕಾರ್ಯಕರ್ತರು ಯಾವುದೇ ವದಂತಿಗಳಿಗೆ ಕಿವಿಗೋಡಬೇಡಿ. ಒಗ್ಗಟ್ಟಾಗಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಿಜೆಪಿಯವರಿಗೆ (BJP)  ಬರಲಿರುವ ಚುನಾವಣೆ ಕ್ಷೇತ್ರದಲ್ಲಿ ದಿಕ್ಸೂಚಿಯಾಗಲಿದೆ ಎಂದರು.

ಎಲ್ಲರೂ ಒಗ್ಗಟ್ಟಾಗಿ ಈಗಿನಿಂದಲೂ ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಸಂಚರಿಸಿ ಜನರ ಮುಂದೆ ನಮ್ಮ ಕಾಂಗ್ರೆಸ್‌ ಸರ್ಕಾರದ ಹಾಗೂ ಸಿದ್ದರಾಮಯ್ಯನವರು ಜಾರಿಗೆ ತಂದಿರುವ ಯೋಜನೆಗಳನ್ನು ಮುಂದಿಟ್ಟುಕೊಂಡು ಹೊರಟಿದ್ದೇವೆ. ನಮ್ಮ ಪಕ್ಷದ ಸಾವಿರಾರು ಜನ ನಂಬಿಗಸ್ಥ ಕಾರ್ಯಕರ್ತರಿದ್ದಾರೆ. ಒಗ್ಗಾಟ್ಟಾಗಿ ಚುನಾವಣೆ ಎದುರಿಸಿದರೇ ಪಕ್ಷದ ಅಭ್ಯರ್ಥಿ ಜಯ ಗಳಿಸುವು ನಿಶ್ಚಿತವಾಗಿದೆ. ಹೀಗಾಗಿ ಬಿ ಪಾರ್‌ಂಗಾಗಿ ಅರ್ಜಿ ಸಲ್ಲಿಸಿದ 9 ಆಕಾಂಕ್ಷಿಗಳು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದೇವೆ. ಎಲ್ಲ ಅಭ್ಯರ್ಥಿಗಳು ಒಗ್ಗಟ್ಟಾಗಿ ಪಕ್ಷವನ್ನು ಸಂಘಟಿಸುತ್ತಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದರು.

ಪ್ರತಿ ಗ್ರಾಮಗಳಿಗೆ ಭೇಟಿ ನೀಡಿದ ವೇಳೆಯಲ್ಲಿ ಕಾಂಗ್ರೆಸ್‌ ಪಕ್ಷದ ಸಾಧನೆಗಳು ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭ್ರಷ್ಟಾಚಾರ ಮತ್ತು ವೈಫಲ್ಯಗಳ ಕುರಿತು ಹಾಗೂ ಸಂವಿಧಾನ ವಿರೋಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿ ಕೊಡುತ್ತಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯನವರು ಬಡವರಿಗೆ, ದೀನ ದಲಿತರಿಗೆ ನೀಡಿದ ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ಬಂದ್‌ ಮಾಡುವ ಮೂಲಕ ಬಡವರಿಗೆ ಮೋಸ ಮಾಡುತ್ತಿದೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರ ಜಿಲ್ಲೆಯಲ್ಲಿ ಸಮಗ್ರ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ನೀರಾವರಿ ಕ್ರಾಂತಿ ಮಾಡಿದೆ. ಕೆರೆ ನಿರ್ಮಾಣ, ಕೆರೆ ನೀರು ತುಂಬುವ ಮೂಲಕ ರೈತರ ಜಮೀನಗಳಲ್ಲಿ ಅಂತರ ಜಲ ಹೆಚ್ಚಿಸುವ ಕಾರ್ಯ ಮಾಡಿದೆ. ಅಲ್ಲದೇ ಬೂದಿಹಾಳ-ಫೀರಾಪೂರ ಮತ್ತು ಚಿಮ್ಮಲಗಿ ಏತ ನೀರಾವರಿ, ಗುತ್ತಿಬಸವಣ್ಣ ಏತ ನೀರಾವರಿ ಯೋಜನೆಗಳು ಜಾರಿಯಿಂದ ಜಿಲ್ಲೆಯಲ್ಲಿ ರೈತರಿಗೆ ಸಮರ್ಪಕ ನೀರು ಸಿಕ್ಕು ಉತ್ತಮ ಬೆಳೆ ಬೆಳೆಯುವಂತಾಗಿದೆ ಎಂದರು.

ಕೆಪಿಸಿಸಿ ಸದಸ್ಯ ದೇವರಹಿಪ್ಪರಗಿ ಮತಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಬಿ.ಎಸ್‌.ಪಾಟೀಲ ಯಾಳಗಿ ಮಾತನಾಡಿ, ಕಳೆದ ಸಲ ಆಕಾಂಕ್ಷಿಗಳ ಒಗ್ಗಟ್ಟಿನ ಕೊರತೆ ಹಾಗೂ ಸುಳ್ಳು ವದಂತಿಯಿಂದ ನಾನು ಸೋಲನ್ನು ಅನುಭವಿಸಬೇಕಾಯಿತು. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ನೀಡಿ ಮತಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಒಗ್ಗಟ್ಟಾಗಿ ಚುನಾವಣೆ ಎದರುರಿಸುವ ತೀರ್ಮಾನವನ್ನು ಈ ಬಾರಿ ಕೈಕೊಳ್ಳಲಾಗಿದೆ. ಪಕ್ಷದ ಸೋಲಿನಿಂದ ನಾಯಕರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಕಾರ್ಯಕರ್ತರಿಗೆ ತೊಂದರೆಯಾಗುತ್ತದೆ ಅದನ್ನು ಎಲ್ಲರು ಅರಿತುಕೊಂಡು ಕಾರ್ಯನಿರ್ವಹಿಸಲಿದ್ದೇವೆ ಎಂದು ತಿಳಿಸಿದರು.

ಟಿಕೆಟ್‌ ಆಕಾಂಕ್ಷಿಗಳಾದ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ, ಮಾಜಿ ಜಿಪಂ ಸದಸ್ಯೆ ಸುಜಾತಾ ಕಳ್ಳಿಮನಿ, ಸಂತೋಷ ದೊಡಮನಿ ಮಾತನಾಡಿ, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಗ್ಗಟ್ಟಿನ ಕೊರತೆ ಇಲ್ಲ. ಎಲ್ಲರೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸುವಂತಹ ಕಾರ್ಯಗಳನ್ನು ಮಾಡುತ್ತ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಯಾರಿಗೇ ಟಿಕೆಟ್‌ ಸಿಕ್ಕರೂ ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸುವ ನಿಶ್ಚಯ ಮಾಡಿಕೊಂಡಿದ್ದೇವೆ. ಕಾರ್ಯಕರ್ತರು ಗೊಂದಲಕ್ಕಿಡಾಗಬಾರದು. ಎಲ್ಲರ ಶ್ರಮದಿಂದ ಈ ಬಾರಿ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಲಿದೆ ಎಂದರು.

ಹೂವಿನಹಿಪ್ಪರಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಾಳನಗೌಡ ಪಾಟೀಲ, ಸುರೇಶ ಬಾಬುಗೌಡ ಬಿರಾದರ ಪೀರಾಪುರ, ಸೋಮನಾಥ ಕಳ್ಳಿಮನಿ, ಬಾಲು ತಳವಾರ, ತಿಪ್ಪಣ್ಣ ಆದ್ವಾನಿ, ಶಿವರೆಡ್ಡಿ ಐನಾಪುರ, ಮಲ್ಲಣ್ಣ ಜೂಲಿ, ಬಿ.ಜಿ.ಬಿರಾದಾರ, ವಿಶ್ವನಾಥ ಅಸ್ಕಿ, ರಾಜು ಪಾಟೀಲ ಲಕ್ಕುಂಡಿ ಸೇರಿದಂತೆ ಇತರರು ಇದ್ದರು.

ರಾಜ್ಯದಲ್ಲಿ ಸದ್ಯ ನಿರೋದ್ಯೋಗ ಸಮಸ್ಯೆ ತೀರ್ವವಾಗಿದೆ. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಶೇ.40 ಕಮೀಷನ್‌ ಹೊಡೆಯುವ ಕಾರ್ಯ ಮಾಡುತ್ತಿದೆ. ಭ್ರಷ್ಟಾಚಾರವನ್ನು ಮರೆ ಮಾಚಲು ಯುವಕರನ್ನು ಧರ್ಮದ ಮತಾಂದತೆ ತುಂಬಿ ಯುವಕರನ್ನು ದಾರಿ ತಪ್ಪಿಸುತ್ತಿದೆ.

ಶರಣಪ್ಪ ಸುಣಗಾರ, ಮಾಜಿ ಶಾಸಕರು.

click me!