ಎಸ್‌.ಎಂ.ಕೃಷ್ಣ ರೀತಿ ಪಾಂಚಜನ್ಯ ಮೊಳಗಿಸಿ ಮತ್ತೆ ಕೈ ಅಧಿಕಾರಕ್ಕೆ : ಡಿಕೆಶಿ

By Kannadaprabha NewsFirst Published Mar 2, 2021, 2:34 PM IST
Highlights

ರಾಜ್ಯದಲ್ಲಿ ಎಸ್‌.ಎಂ. ಕೃಷ್ಣರಂತೆ ಪಾಂಚಜನ್ಯ ಮೊಳಗಿಸುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಲ್ಲದೇ ಮತ್ತೆ ಅಧಿಕಾರಕ್ಕೇರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 

 ಕೋಲಾರ (ಮಾ.02):  ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ಇಲ್ಲ. ನಮ್ಮಲ್ಲಿ ಯಾವ ಗುಂಪೂ ಇಲ್ಲ, ಇರುವುದೊಂದೇ ಗುಂಪು ಅದು ಕಾಂಗ್ರೆಸ್‌ ಗುಂಪು. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಹೇಳಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ರಾಜ್ಯದಲ್ಲಿ ಮತ್ತೆ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅರ್ಥವಾಗಿದೆ. ನಾಡಿನ ಜನ ಮತ್ತೆ ಕಾಂಗ್ರೆಸ್‌ನ ಕೈಹಿಡಿಯಲಿದ್ದಾರೆ. ಯಾವ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದೇವೆಯೋ ಅಲ್ಲಿಯೇ ಪಕ್ಷ ಸಂಘಟನೆ ಮಾಡುತ್ತೇವೆ. 1999ರಲ್ಲಿ ಎಸ್‌.ಎಂ.ಕೃಷ್ಣ ಅವರು ಪಾಂಚಜನ್ಯ ಮೊಳಗಿಸಿ ಅಧಿಕಾರಕ್ಕೆ ಬಂದರು. ಅದೇ ರೀತಿ ನಾನು ಪಾಂಚಜನ್ಯ ಮೊಳಗಿಸಲಿದ್ದೇನೆ ಎಂದರು.

ಸ್ವಪಕ್ಷದವರೇ ಮಾತು ಕೇಳಲ್ಲ, ಬಹಿರಂಗ ಅಸಮಾಧಾನ; ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಸೈಡ್‌ಲೈನ್ ?

ರಾಜ್ಯಾದ್ಯಂತ 100 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಈ ಕ್ಷೇತ್ರಗಳಲ್ಲಿ ‘ಜನಧ್ವನಿ’ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಾ.3ಕ್ಕೆ ದೊರೆಯಲಿದೆ. ಜನರನ್ನು ಮುಟ್ಟಬೇಕು ಎಂದು ಮಾಡುತ್ತಿರುವ ಕಾರ್ಯಕ್ರಮಕ್ಕೆ ಯಾವುದೇ ವಿಘ್ನವಾಗದಿರಲಿ ಎಂದು ವಿನಾಯಕ ದರ್ಶನಕ್ಕೆ ಕುರುಡುಮಲೆಗೆ ಬಂದಿದ್ದೇವೆ. ಇದರ ಜೊತೆಗೆ ರಾಜ್ಯದಲ್ಲಿ ಅನೇಕ ವಿಘ್ನಗಳಿವೆ. ಇದರ ನಿವಾರಣೆಗೂ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಲು ಬಂದಿದ್ದೇವೆ. ರಾಜ್ಯದಲ್ಲಿ ಉತ್ತಮವಾಗಿ ಮಳೆ ಬೆಳೆ ಆಗಿ ಜನ ನಿಶ್ಚಿಂತೆಯಿಂದ ಬದುಕಬೇಕು ಎಂದರು.

‘ಸಾ.ರಾಗೆ ಕರೆ ಮಾಡಿದ್ದು ನಿಜ’: ಮೈಸೂರು ಮೇಯರ್‌ ಚುನಾವಣೆ ವಿಚಾರವಾಗಿ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಅವರಿಗೆ ಕರೆ ಮಾಡಿದ್ದು ನಿಜ. ನಮಗೆ ಅವರು ಈ ಹಿಂದೆ ಮಾತು ಕೊಟ್ಟಿದ್ದರು. ಅವರು ಈ ವರ್ಷ ಮೈತ್ರಿ ಮುಂದುವರೆಸಿ ನಮಗೆ ಅಧಿಕಾರ ಬಿಟ್ಟುಕೊಡಬೇಕಿತ್ತು. ಅದನ್ನು ನಡೆಸಿಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು.

click me!