ಬಿಜೆಪಿ ಸಂಸದರ ವಿರುದ್ಧ ಗರಂ ಆದ ಕೈ ಮುಖಂಡ

By Kannadaprabha NewsFirst Published Mar 2, 2021, 2:09 PM IST
Highlights

ಮೋದಿ ನಿರ್ಧಾರ ಪ್ರಶ್ನಿಸುವ ಅಧಿಕಾರ ಯಾವ ಸಂಸದರಿಗೂ ಇಲ್ಲ. ವಿರುದ್ಧವಾಗಿ ಮಾತನಾಡುವ ತಾಕತ್ತಿಲ್ಲ ಎಂದು ಚೆಲುವರಾಯಸ್ವಾಮಿ ಅಸಮಾಧಾನ ಹೊರಹಾಕಿದರು.

ಮಂಡ್ಯ (ಮಾ.02):  ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ಕಾವೇರಿ ಯೋಜನೆ ಸಂಬಂಧ ದನಿ ಎತ್ತುವ ಧೈರ್ಯ ರಾಜ್ಯದ ಸಂಸದರಿಗಿಲ್ಲ. ಕೇಂದ್ರ ಸರ್ಕಾರವೇ ಯೋಜನೆಗೆ ಹಣ ನೀಡಿರುವುದರಿಂದ ಮೋದಿ ನಿರ್ಧಾರದ ವಿರುದ್ಧ ಮಾತನಾಡುವ ತಾಕತ್ತು ಯಾರೊಬ್ಬರಿಗೂ ಇಲ್ಲ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಟೀಕಿಸಿದರು.

ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಾಗಿರುವ ಅನ್ಯಾಯದ ವಿರುದ್ಧ ಸೊಲ್ಲೆತ್ತದವರು ಕಾನೂನು ಹೋರಾಟ ಮಾಡುತ್ತಾರೆಯೇ. ಸುಪ್ರೀಂಕೋರ್ಟ್‌ಗೆ ಇವರು ಕಾವೇರಿ ಯೋಜನೆ ವಿರುದ್ಧ ಅರ್ಜಿ ಸಲ್ಲಿಸಿದರೆ ಅದು ಮೋದಿ ನಿಲುವನ್ನೇ ಪ್ರಶ್ನಿಸಿದಂತೆ. ಅಂತಹ ಧೈರ್ಯವನ್ನು ಸಿಎಂ ಅಥವಾ ಸಂಸದರು ಮಾಡುವರೆಂಬ ನಂಬಿಕೆ ಇದೆಯೇ ಎಂದು ‘ಕನ್ನಡಪ್ರಭ’ದೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.

ಒಡೆದ ಮನೆಯಂತಾಗಿದೆ ಕಾಂಗ್ರೆಸ್; ಡಿಕೆಶಿಗೆ ದೂರು ನೀಡಿದ ತನ್ವೀರ್ ಸೇಠ್ ... 

ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕಾವೇರಿ ನದಿಯಿಂದ ಹರಿದುಹೋಗುವ ಹೆಚ್ಚುವರಿ ನೀರನ್ನು ತಡೆಹಿಡಿಯಲು ರೂಪಿಸಿದ ಮೇಕೆದಾಟು ಯೋಜನೆಗೆ ಕಾನೂನು ಹೋರಾಟ ನಡೆಸಿ ಜಯಿಸಿಕೊಂಡು ಬರಲಾಗಲಿಲ್ಲ. ತಮಿಳುನಾಡು ಜನಪ್ರತಿನಿಧಿಗಳಿಗೆ ರೈತಾಪಿ ವರ್ಗದ ಜನರ ಸಮಸ್ಯೆಗಳ ಬಗ್ಗೆ ಬದ್ಧತೆ ಇದೆ. ನೀರಿನ ಮೇಲೆ ಹಕ್ಕು ಸಾಧಿಸುವ ಇಚ್ಛಾಶಕ್ತಿ ಇದೆ. ಅದಕ್ಕಾಗಿಯೇ ಕೇಂದ್ರದಿಂದ 14 ಸಾವಿರ ಕೋಟಿ ರು. ಬಿಡುಗಡೆ ಮಾಡಿಸಿಕೊಂಡು ಬಂದು ಯೋಜನೆಗೆ ಚಾಲನೆ ನೀಡಿದ್ದಾರೆ. ಅಂತಹದೊಂದು ಬದ್ಧತೆ, ಇಚ್ಛಾಶಕ್ತಿ ನಮ್ಮ ರಾಜ್ಯ ಸರ್ಕಾರಕ್ಕೂ ಇಲ್ಲ, ಸಂಸದರಿಗೂ ಇಲ್ಲ ಎಂದು ಛೇಡಿಸಿದರು.

ಪ್ರತಿ ವರ್ಷ ಕಾವೇರಿ ನದಿಯಿಂದ 45 ಟಿಎಂಸಿಯಷ್ಟುಹೆಚ್ಚುವರಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿದೆ. ಅದನ್ನು ಸಮರ್ಥವಾಗಿ ನಮ್ಮಲ್ಲೇ ಬಳಸಿಕೊಳ್ಳುವುದಕ್ಕೆ ಯಾವುದೇ ಸರ್ಕಾರಗಳೂ ಯೋಜನೆ ರೂಪಿಸಲಿಲ್ಲ. ಮೇಕೆದಾಟು ಯೋಜನೆಗೆ ಅನುಮತಿ ಪಡೆದುಕೊಂಡು ಶೀಘ್ರ ಕಾಮಗಾರಿಯನ್ನು ಆರಂಭಿಸಲೂ ಇಲ್ಲ. ನಮ್ಮ ರಾಜ್ಯದ ಕಾವೇರಿ ಕಣಿವೆ ರೈತರ ಹಿತವನ್ನು ಸರ್ಕಾರ ಮರೆತಿದ್ದರಿಂದ ಹೆಚ್ಚುವರಿ ನೀರನ್ನು ಸಮರ್ಥವಾಗಿ ಬಳಸಿಕೊಂಡು ತಮಿಳುನಾಡು ಸರ್ಕಾರ ಆ ಭಾಗದ ಕಾವೇರಿ ಕಣಿವೆ ರೈತರ ಹಿತ ಕಾಯುತ್ತಿದೆ. ಕಾವೇರಿ ನದಿ ನೀರು ಹಂಚಿಕೆಯಲ್ಲಾಗಿರುವ ಅನ್ಯಾಯದ ಹೊಣೆಯನ್ನು ನಾವೂ ಹೊರಬೇಕಿದೆ ಎಂದರು

click me!