ದರ್ಶನ್‌ ಪುಟ್ಟಣ್ಣಯ್ಯರಿಗೆ ಕೈ ಬೆಂಬಲ

By Kannadaprabha NewsFirst Published Apr 9, 2023, 8:30 AM IST
Highlights

ಎಐಸಿಸಿ, ಕೆಪಿಸಿಸಿ ನಾಯಕರ ನಿರ್ಧಾರದಂತೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯರಿಗೆ ಬೆಂಬಲ ಸೂಚಿಸಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಹೇಳಿದರು.

  ಪಾಂಡವಪುರ :  ಎಐಸಿಸಿ, ಕೆಪಿಸಿಸಿ ನಾಯಕರ ನಿರ್ಧಾರದಂತೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯರಿಗೆ ಬೆಂಬಲ ಸೂಚಿಸಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಕಾಂಗ್ರೆಸ್‌ ಹಾಗೂ ರೈತಸಂಘದ ಮುಖಂಡರು ನಡೆಸಿದ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಎರಡು ಭಾರಿ ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲೂ ಕಾಂಗ್ರೆಸ್‌ ಪಕ್ಷದ ಜತೆಗೆ ಇದ್ದರು. ಆ ಹಿನ್ನೆಲೆಯಲ್ಲಿ ಕಳೆದ 2018ರ ಚುನಾವಣೆ ವೇಳೆ ಪುಟ್ಟಣ್ಣಯ್ಯ ನಿಧನರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ದರ್ಶನ್‌ ಪುಟ್ಟಣ್ಣಯ್ಯರಿಗೆ ಬೆಂಬಲ ನೀಡಲಾಗಿತ್ತು ಎಂದರು.

Latest Videos

ಕಳೆದ ಚುನಾವಣೆಯಲ್ಲಿ ದರ್ಶನ್‌ ಪುಟ್ಟಣ್ಣಯ್ಯ ಗೆದ್ದಿದ್ದರೆ ಈ ಚುನಾವಣೆಯಲ್ಲಿ ದರ್ಶನ್‌ಗೆ ಬೆಂಬಲ ನೀಡುತ್ತಿರಲಿಲ್ಲ. ಕಳೆದ ಯಲ್ಲಿ ಸೋಲು ಕಂಡ ಹಿನ್ನೆಲೆಯಲ್ಲಿ ಹೈಕಮೆಂಡ್‌ ಹಾಗೂ ರಾಜ್ಯ ನಾಯಕರು ಈ ಬಾರಿಯೂ ದರ್ಶನ್‌ ಪುಟ್ಟಣ್ಣಯ್ಯರಿಗೆ ಬೆಂಬಲ ನೀಡಿದೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಬೆಂಬಲವನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಿ ನಮ್ಮ ಬೆಂಬಲಿತ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸವಿದೆ ಎಂದರು.

ರಾಜ್ಯದಲ್ಲಿ ಕಳೆದ ಐದು ವರ್ಷದ ಅಧಿಕಾರ ನಡೆಸಿದ ಬಿಜೆಪಿ-ಜೆಡಿಎಸ್‌ ಪಕ್ಷದ ದುರಾಡಳಿತವನ್ನು ನೋಡಿ ರಾಜ್ಯದ ಜತೆಗೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ಅನ್ನು ಅಧಿಕಾರಕ್ಕೆ ತರಬೇಕು ಎನ್ನುವ ನಿರ್ಧಾರ ಮಾಡಿದ್ದಾರೆ. ಈ ಚುನಾವಣೆಯಲ್ಲಿ ದರ್ಶನ್‌ ಗೆಲುವು ಸಾಧಿಸಿದರೆ ಅವರು ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ ಎಂದರು.

ಚುನಾವಣೆ ವೇಳೆ ತಂತ್ರಗಾರಿಕೆ, ಚಾಣಾಕ್ಷತನವನ್ನು ಎಲ್ಲಾ ಪಕ್ಷದವರು ಮಾಡುತ್ತಾರೆ. ಆದರೆ, ನಾವು ಯಾವುದೇ ಕುತಂತ್ರ ನಡೆಸುತ್ತಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಇತ್ತೀಚೆಗೆ ಜಿಲ್ಲೆಗೆ ಬಂದಾಗ ಎಚ್ಡಿಕೆ ಚಲುವರಾಯಸ್ವಾಮಿ ನನಗೆ ಆ ಜನ್ಮ ಶತ್ರು ಎಂದು ಉಲ್ಲೇಖ ಮಾಡಿದ್ದಾರೆ. ಹಾಗಾಗಿ ನಾವು ಅವರನ್ನು ಹಳೇ ಸ್ನೇಹಿತರು ಎಂದು ಕರೆಯುತ್ತೇನೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಬಿಎಸ್ಪಿ ಜತೆ ಒಂದಾಣಿಕೆ ಮಾಡಿಕೊಂಡಿದ್ದರು. ಹಾಗಾದ್ರೆ ಅದೇನು ಅಂತ ಕರಿಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೇಲುಕೋಟೆ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲಾ ಮುಖಂಡರು, ಕಾರ್ಯಕರ್ತರು ಒಂದಾಗಿ ಕೆಲಸ ಮಾಡಲಿದ್ದಾರೆ. ಮಂಡ್ಯ ರೈತ ಸಂಘದಿಂದ ಸ್ಪರ್ಧಿಸಿರುವ ಅಭ್ಯರ್ಥಿಯನ್ನು ಹಿಂದೆ ಸರಿಸುವ ಪ್ರಯತ್ನ ನಡೆಯುತ್ತಿದೆ. ಡಾ.ರವೀಂದ್ರರ ದರ್ಶನ್‌ ಪುಟ್ಟಣ್ಣಯ್ಯ ಭೇಟಿ ಮಾಡಿದ್ದು ಅವರು ಸಹ ದರ್ಶನ್‌ ಪರ ಕೆಲಸ ಮಾಡಲಿದ್ದಾರೆ ಎಂದರು.

ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, ಕಾಂಗ್ರೆಸ್‌ ಪಕ್ಷವು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾದ ನನಗೆ ಬೆಂಬಲ ನೀಡಿದ್ದಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸೇರಿದಂತೆ ಜಿಲ್ಲೆ, ತಾಲೂಕಿನ ಎಲ್ಲಾ ಕಾಂಗ್ರೆಸ್‌ ಮುಖಂಡರಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಕಾಂಗ್ರೆಸ್‌ ಮುಖಂಡರು, ರೈತಸಂಘದ ಮುಖಂಡರು ಜತೆಗೂಡಿ ಕುಳಿತು ಚರ್ಚಿಸಿ ಚುನಾವಣೆಯನ್ನು ಗೆಲ್ಲಲು ಯಾವರೀತಿ ಕೆಲಸ ಮಾಡಬೇಕು ಎನ್ನುವುದನ್ನು ಕುಳಿತು ಚರ್ಚಿಸುತ್ತೇವೆ. ಜತೆಗೆ ಶೀಘ್ರವೇ ರೈತಸಂಘ-ಕಾಂಗ್ರೆಸ್‌ ಕಾರ್ಯಕರ್ತರ ಜಂಟಿ ಸಭೆ ನಡೆಸಲಾಗುವುದು ಎಂದರು.

ಕುರುಬರ ಸಂಘದ ಅಧ್ಯಕ್ಷರ ಅಸಮಾಧಾನ:  ಪಕ್ಷದ ಹೈಕಮಾಂಡ್‌ ಬೆಂಬಲ ನೀಡಿದ ಬಳಿಕವೂ ಸಹ ಪಕ್ಷದ ನಾಯಕರು ಯಾವುದೇ ಮುಖಂಡರನ್ನು ಆಹ್ವಾನಿಸದೆ ಸಭೆ ನಡೆಸಿ ಚರ್ಚೆ ನಡೆಸಿದೆ ಸುದ್ದಿಗೋಷ್ಠಿ ನಡೆಸುತ್ತಿರುವುದಕ್ಕೆ ಕುರುಬರ ಸಂಘದ ಅಧ್ಯಕ್ಷ ಡಿ.ಹುಚ್ಚೇಗೌಡ ಪಕ್ಷದ ನಾಯಕರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಮೊದಲ ಕಾರ್ಯಕರ್ತರ ಮುಖಂಡರ ಸಭೆ ನಡೆಸಿ ಬಳಿಕ ತೀರ್ಮಾನ ಮಾಡಿ ಎಂದು ಬೇಸರ ಹೊರಹಾಕಿದರು. ಬಳಿಕ ಎನ್‌.ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಸಮಾಧಾನಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ರಮೇಶ್‌ ಬಂಡಿಸಿದ್ದೇಗೌಡ, ಎಚ್‌.ಬಿ.ರಾಮು, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ….ಕೆಂಪೂಗೌಡ, ಜಿಪಂ ಮಾಜಿ ಸದಸ್ಯ ಎಚ್‌.ಮಂಜುನಾಥ್‌, ಕೆಪಿಸಿಸಿ ಸದಸ್ಯರಾದ ಎಚ್‌.ತ್ಯಾಗರಾಜು, ನಾಗರಾಜು, ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಂಜನ ಶ್ರೀಕಾಂತ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣೇಗೌಡ, ಸರ್ವೋದಯ ಕರ್ನಾಟಕ ಅಧ್ಯಕ್ಷ ಕೆ.ಎಸ್‌.ದಯಾನಂದ, ಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ವಿಜೇಂದ್ರಮೂರ್ತಿ, ಕೆ.ಕುಬೇರ, ಬಿ.ಜೆ.ಸ್ವಾಮಿ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಡಿ.ಹುಚ್ಚೇಗೌಡ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರೇವಣ್ಣ, ಬನ್ನಂಗಾಡಿ ಗ್ರಾಪಂ ಉಪಾಧ್ಯಕ್ಷ ತಮ್ಮೇಗೌಡ ಸೇರಿದಂತೆ ಹಲವರು ಇದ್ದರು. 

click me!