ಮಂಡ್ಯದ ಕಾಂಗ್ರೆಸ್ ಮುಖಂಡರೋರ್ವರು ರಾಜಕೀಯದ ಬಗ್ಗೆ ಹೊಸ ಸುಳಿವೊಂದನ್ನು ನೀಡಿದ್ದಾರೆ. ಅವರು ನೀಡಿರುವ ಆ ಸುಳಿವೇನು..?
ಪಾಂಡವಪುರ (ಡಿ.08): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಣಕ್ಕಿಳಿಯುವುದು ನಿಶ್ಚಿತ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಎನ್.ರವೀಂದ್ರ ಹೇಳಿದರು.
ಪಟ್ಟಣದ ಅನ್ನಪೂರ್ಣಹೋಟೆಲ್ ಸಮುದಾಯ ಭವನದಲ್ಲಿ ಗ್ರಾಪಂ ಚುನಾವಣೆ ಸಂಬಂಧ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವು ರೈತ ಸಂಘದೊಂದಿಗೆ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳದೇ ಸ್ವತಂತ್ರವಾಗಿ ಅಭ್ಯರ್ಥಿ ಕಣಕ್ಕಿಳಿಸಿ ಚುನಾವಣೆ ಎದುರಿಸಲಿದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಯಾವ ಗೊಂದಲವೂ ಬೇಡ ಎಂದರು.
ಪಕ್ಷದಲ್ಲಿ ಯಾವ ವ್ಯಕ್ತಿ ಅಭ್ಯರ್ಥಿಯಾಗುತ್ತಾರೆ ಎನ್ನುವುದು ಪ್ರಸ್ತುತ ವಿಷಯವಲ್ಲ. ಪಕ್ಷದಿಂದ ಯಾರೇ ಅಭ್ಯರ್ಥಿಯಾಗಬಹದು. ಇಲ್ಲವೇ ರೈತ ಸಂಘದ ಅಭ್ಯರ್ಥಿಯೇ ಕಾಂಗ್ರೆಸ್ ಪಕ್ಷದ ಚಿಹ್ನೆಯಲ್ಲೇ ಸ್ಪರ್ಧೆ ಮಾಡಬಹುದು. ಒಟ್ಟಾರೆ ಪಕ್ಷದಿಂದ ಅಭ್ಯರ್ಥಿ ಸ್ಪರ್ಧೆ ಗ್ಯಾರಂಟಿ. ಈವರೆಗೆ ರೈತ ಸಂಘದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದ ಪಕ್ಷವು ಅಭ್ಯರ್ಥಿಯನ್ನು ಘೋಷಣೆ ಮಾಡಲಿದೆ ಎಂದು ಭರವಸೆ ನೀಡಿದರು.
ಗ್ರಾಪಂ ಚುನಾವಣೆ ಮುಖ್ಯ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮಗೆ ಗೆಲುವು ಮುಖ್ಯವಾಗಿದೆ. ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಒಗ್ಗೂಡಿ ದುಡಿಯುವ ಮೂಲಕ ಮುಂಬರುವ ತಾಪಂ, ಜಿಪಂ ಹಾಗೂ ವಿಧಾನಸಭಾ ಚುನಾವಣೆಗಳಿಗೆ ಹೊಸ ಭಾಷ್ಯ ಬರೆಯಬೇಕಾಗಿದೆ ಎಂದರು.
ಗ್ರಾಪಂ ಚುನಾವಣೆಯಲ್ಲಿ ರೈತ ಸಂಘದೊಂದಿಗೆ ಮೈತ್ರಿ ಬೇಕೆ, ಬೇಡವೇ ತೀರ್ಮಾನ ಹೇಳುವಂತದ್ದಲ್ಲ. ನಾವಾಗಲೀ ಅವರಾಗಲೀ ಮಾತುಕತೆಗೆ ಬಂದಿಲ್ಲ. ಹೀಗಾಗಿ ಸ್ಥಳೀಯವಾಗಿ ಗೆಲ್ಲಬೇಕೆಂಬ ಏಕ ಘೋಷಣೆಯೊಂದಿಗೆ ಚುನಾವಣೆ ಎದುರಿಸೋಣ ಎಂದರು.
ಮಾಜಿ ಶಾಸಕ ಬಿಜೆಪಿ ಸೇರ್ಪಡೆ, ಸಿಎಂ ಭೇಟಿ ಮಾಡಿಸಿದ ಸಚಿವ ಸುಧಾಕರ್...! ...
ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ ಮಾತನಾಡಿ, ಕಾರ್ಯಕರ್ತರು ತಮಗೆ ಅನುಕೂಲವಾಗುವ ವಾರ್ಡ್ಗಳಲ್ಲಿ ಬೇಕಿದ್ದರೆ ರೈತ ಸಂಘದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದರು.
ಮಾಜಿ ಅಧ್ಯಕ್ಷ ಎಲ್.ಸಿ.ಮಂಜುನಾಥ್ ಹಾಗೂ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಿ.ಎಂ.ಮಹೇಶ್, ಪ್ರೊ.ಡಿ.ಕೆ.ದೇವೇಗೌಡ ಮಾತನಾಡಿದರು. ಜಿಪಂ ಮಾಜಿ ಸದಸ್ಯೆ ಜಿ.ಕೆ.ಕೋಮಲಾ, ಟಿಎಪಿಸಿಎಂಎಸ್ ನಿರ್ದೇಶಕ ಚಿಕ್ಕಾಡೆ ಶ್ರೀಕಾಂತ್, ಪುರಸಭೆ ಸದಸ್ಯೆ ಜಯಲಕ್ಷ್ಮಮ್ಮ, ಮಾಜಿ ಸದಸ್ಯ ಮಹ್ಮದ್ ಹನೀಫ್, ಮುಖಂಡರಾದ ಎಂ.ಆರ್ .ದೇವರಾಜು, ಮಾಲತಿ, ಸಿದ್ದಲಿಂಗಯ್ಯ, ಬಂಕ್ ಶ್ರೀನಿವಾಸ್, ಚಿಕ್ಕಬ್ಯಾಡರಹಳ್ಳಿ ಧರ್ಮಣ್ಣ, ಚಿಕ್ಕಾಡೆ ಕೃಷ್ಣೇಗೌಡ, ಬೊಮ್ಮೇಗೌಡ ಇದ್ದರು.